ಜಮೀರ್ ಭಾಯ್, ಹಜ್ ಭವನಕ್ಕೆ ಮರುನಾಮಕರಣದ ಅವಶ್ಯಕತೆ ಇದೆಯೇ?
ಮುಸ್ಲಿಂ ಬಾಂಧವರಿಗೆ 'ಹಜ್' ಎನ್ನುವ ಪದವೇ ಪವಿತ್ರವಾದಂತದ್ದು, ತಮ್ಮ ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಗೆ ಹೋಗಬೇಕು ಎನ್ನುವ ಕನಸನ್ನು ಪ್ರತಿಯೊಬ್ಬ ಮುಸ್ಲಿಮನು ಕಾಣುತ್ತಿರುತ್ತಾನೆ. ಹೀಗಿರುವಾಗ, ಹಜ್ ಭವನಕ್ಕೆ ಮತ್ತೆ ಮರುನಾಮಕರಣ ಮಾಡಬೇಕಾ?
ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ ಟಿಪ್ಪು ಜಯಂತಿ ಆಚರಿಸುವ ಹೊಸ ಪರಿಪಾಠಕ್ಕೆ ನಾಂದಿ ಹಾಡಲಾಯಿತು. ಅದರಿಂದ, ರಾಜ್ಯದಲ್ಲಿ ಅದೆಷ್ಟು ಅಶಾಂತಿ ತಲೆದೋರಿತ್ತು, ಕಾನೂನು ಮತ್ತು ಸುವ್ಯವಸ್ಥೆ ಹದೆಗೆಟ್ಟಿತ್ತು ಎನ್ನುವುದನ್ನು ಮತ್ತೆ ನೆನಪಿಸಬೇಕಾಗಿಲ್ಲ.
ಹಜ್ ಘರ್ಗೆ ಟಿಪ್ಪು ಸುಲ್ತಾನ್ ಹೆಸರು: ವಿವಾದಕ್ಕೆ ಮುನ್ನುಡಿ?
ಈಗ ಮತ್ತೊಂದು ಹೊಸ ವಿವಾದಕ್ಕೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಕೈಹಾಕಿದೆ. ವಕ್ಫ್ ಖಾತೆಯನ್ನು ನೋಡಿಕೊಳ್ಳುತ್ತಿರುವ ಸಚಿವ ಜಮೀರ್ ಸಾಹೇಬ್ರು, ಹಜ್ ಭವನಕ್ಕೆ 'ಟಿಪ್ಪು ಸುಲ್ತಾನ್ ಭವನ' ಎಂದು ಹೆಸರಿಡುವ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದ್ದಾರೆ.
ಬೆಂಗಳೂರು ಯಲಹಂಕದ ರಾಮಕೃಷ್ಣ ಹೆಗಡೆ ನಗರದಲ್ಲಿರುವ, ಸುಮಾರು 87 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಭವ್ಯ ಹಜ್ ಭವನದಲ್ಲಿ ನೂರಕ್ಕೂ ಹೆಚ್ಚು ಕೊಠಡಿಗಳಿವೆ. ಪ್ರತೀ ವರ್ಷ ಕರ್ನಾಟಕ ಹಜ್ ಕೋಟಾದಡಿಯಲಿ ಹಜ್ ಧಾರ್ಮಿಕ ಪ್ರವಾಸಕ್ಕೆ ಹೋಗುವ ಯಾತ್ರಾರ್ಥಿಗಳಿಗೆ, ವೀಸಾ, ಇಮಿಗ್ರೇಶನ್ ಮುಂತಾದ ಪ್ರಕ್ರಿಯೆ ನಡೆಸಲು ಇಲ್ಲಿ ವ್ಯವಸ್ಥೆಯಿದೆ.
2012ರಲ್ಲಿ ಸದಾನಂದ ಗೌಡ್ರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ಆರಂಭವಾದ ಹಜ್ ಭವನದ ಕೆಲಸ, 2016ರಲ್ಲಿ ಮುಕ್ತಾಯಗೊಂಡಿತ್ತು. ರೋಷನ್ ಬೇಗ್ ಅವರ ಕನಸಿನ ಪ್ರಾಜೆಕ್ಟ್ ಇದಾಗಿದ್ದು, ಕಳೆದ ಎರಡು ವರ್ಷಗಳಿಂದ ಹಜ್ ಭವನವೆಂದೇ ಕರೆಯಲಾಗುತ್ತಿದ್ದ ಈ ಕಟ್ಟಡಕ್ಕೆ, ಸಮ್ಮಿಶ್ರ ಸರಕಾರ ಈಗ ಟಿಪ್ಪು ಹೆಸರಿಡಲು ಹೋಗಿ ಮತ್ತೆ ವಿವಾದ ಮೈಗೆಳೆದುಕೊಂಡಿದೆ.
ಹಜ್ ಭವನಕ್ಕೆ ಅಬ್ದುಲ್ ಕಲಾಂ ಹೆಸರಿಡಿ, ಯಡಿಯೂರಪ್ಪ ಆಗ್ರಹ
ಅಧಿಕಾರಕ್ಕೆ ಬಂದ ಕೂಡಲೇ ಏನಾದರೂ ಸುದ್ದಿ ಮಾಡಬೇಕು ಎನ್ನುವ ತವಕದಲ್ಲಿ ಸಚಿವ ಜಮೀರ್ ಅಹಮದ್ ಇದ್ದಾರೋ ತಿಳಿಯದು, ಒಟ್ಟಿನಲ್ಲಿ ಹಜ್ ಭವನಕ್ಕೆ 'ಟಿಪ್ಪು ಸುಲ್ತಾನ್' ಹೆಸರಿಡಲು ಹೊರಟಿದ್ದಾರೆ. ಮರುನಾಮಕರಣ ಮಾಡಲು ಮುಸ್ಲಿಂ ಮುಖಂಡರಿಂದ ಅಹವಾಲು ಬಂದಿದೆ ಎನ್ನುವ ಮಾತನ್ನು ಹೇಳಿದ್ದಾರೆ.
ಟಿಪ್ಪು ಸುಲ್ತಾನ್ ಒಬ್ಬ ಹಿಂದೂ ದ್ವೇಷಿ, ಹಾಗಾಗಿ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಬಿಡುವುದಿಲ್ಲ ಎಂದು ನಿರೀಕ್ಷೆಯಂತೆ, ಬಿಜೆಪಿ ಮತ್ತು ಸಂಘ ಪರಿವಾರದವರು ಇನ್ನೊಂದು ಸುತ್ತು ಬೀದಿಗಿಳಿಯಲು ಸಜ್ಜಾಗಿದ್ದಾರೆ.
ಇದೇ ಹಜ್ ಭವನದ ಉದ್ಘಾಟನೆಯ ವೇಳೆ, ಹಿರಿಯ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್ ಅವರಿಗೆ ಸೂಕ್ತ ಮರ್ಯಾದೆ ಕೊಡಲಿಲ್ಲವೆಂದು, ವೇದಿಕೆಯಲ್ಲೇ ಜಮೀರ್ ಅಹಮದ್ ರಂಪ ರಾಮಾಯಣ ನಡೆಸಿದ್ದರು. ಈಗ ಟಿಪ್ಪು ಸುಲ್ತಾನ್ ಹೆಸರಿಡಲು ಹೊರಟಿರುವುದು, ವೃಥಾ ವಿವಾದ ಸೃಷ್ಟಿಸಲು ಎನ್ನುವುದು ಕೇಳಿಬರುತ್ತಿರುವ ಆರೋಪ.
ಹಜ್ ಭವನಕ್ಕೆ ಮರುನಾಮಕರಣ ಮಾಡುವ ಅವಶ್ಯಕತೆಯಿದೆಯಾ? ದೇಶವನ್ನು ಧರ್ಮದ ವಿಚಾರದಲ್ಲಿ ಇಬ್ಭಾಗಗೊಳಿಸುವ ಕೆಲಸವನ್ನು ರಾಜಕೀಯ ಪಕ್ಷಗಳು ಯಾಕೆ ಮಾಡುತ್ತಿವೆ? ಟಿಪ್ಪು ಸುಲ್ತಾನ್ ಹೆಸರಿಟ್ಟರೆ ತಪ್ಪೇನು ಅಥವಾ ಅಲ್ಲಾನನ್ನು ಹಲವು ಹೆಸರಿನಲ್ಲಿ ಕರೆಯುವ ಪದ್ದತಿ ಇಸ್ಲಾಂನಲ್ಲಿದೆ. ಮರುನಾಮಕರಣ ಮಾಡಬೇಕೆಂದೇ ಆದಲ್ಲಿ, ಅದರಲ್ಲಿ ಯಾವುದಾದರೊಂದು ಹೆಸರನ್ನು ಇಡಬಹುದಲ್ಲವೇ? ಎಲ್ಲದರಲ್ಲೂ ರಾಜಕೀಯ ಮಾಡಬಾರದು ಎನ್ನುವ ಆಶಯ ರಾಜಕೀಯ ಮುಖಂಡರಿಗೆ ಇದ್ದರೆ ಮಾತ್ರ ಇದು ಸಾಧ್ಯ..