ಸಿಎಂ ಯಡಿಯೂರಪ್ಪ ತುರ್ತಾಗಿ ಹೊರಡಿಸಿದ ಪತ್ರಿಕಾ ಪ್ರಕಟಣೆ
ಬೆಂಗಳೂರು, ನ 20: ಹುಳಿಯಾರ್ ಸರ್ಕಲ್ಗೆ ಕನಕದಾಸರ ಹೆಸರಿಡುವ ವಿಚಾರದಲ್ಲಿ, ಈಗಾಗಲೇ ಕ್ಷಮೆಯಾಚಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಈ ಸಂಬಂಧ, ವಿಸ್ಕೃತವಾದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಅದು ಹೀಗಿದೆ, "ಹುಳಿಯಾರಿನಲ್ಲಿ, ಹುಳಿಯಾರು-ಹೊಸದುರ್ಗ ರಸ್ತೆ ಮೇಲೆ ಇರುವ ವೃತ್ತಕ್ಕೆ 'ಕನಕವೃತ್ತ' ಎಂದು ನಾಮಕರಣ ಮಾಡುವ ಬಗ್ಗೆ ಎದ್ದಿರುವ ಗೊಂದಲ ಅನಾವಶ್ಯಕವಾಗಿದೆ. ವೃತ್ತಕ್ಕೆ ಕನಕದಾಸರ ಹೆಸರಿಡಲು ಯಾರ ವಿರೋಧವೂ ಇಲ್ಲ".
ಕುರುಬ ಸಮುದಾಯದ ಕ್ಷಮೆ ಯಾಚಿಸಿದ ಯಡಿಯೂರಪ್ಪ
"ಮಂತ್ರಿ ಮಾಧುಸ್ವಾಮಿಯವರು ಕೂಡಾ ಯಾವುದೇ ವಿರೋಧ ಮಾಡಿಲ್ಲ. ನಾನೇ ಇಂದು ಬೆಳಗ್ಗೆ ಮಾಧುಸ್ವಾಮಿಯವರ ಮಾತಿನ ಬಗ್ಗೆ ಎದ್ದ ಗೊಂದಲಕ್ಕೆ ಕ್ಷಮೆ ಕೇಳಿದ್ದೇನೆ. ಈಗ ಕನಕಪೀಠದ ಈಶ್ವರಾನಂದಪುರಿ ಸ್ವಾಮೀಜಿಗಳು ಕೂಡಾ ಮಾಧುಸ್ವಾಮಿಯವರು ಏಕವಚನದಲ್ಲಿ ನಮ್ಮನ್ನು ಸಂಭೋದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ".
"ಈ ಸಮಯದಲ್ಲಿ ಹುಳಿಯಾರು ಮತ್ತು ಬೇರೆ ಕಡೆಯಿರುವ ಕುರುಬ ಸಮುದಾಯದ ಜನರಿಗೆ ಮತ್ತು ಕನಕದಾಸರ ಭಕ್ತರಿಗೆ ನನ್ನ ಮನವಿ, ಯಾರೂ ಉದ್ವೇಗಕ್ಕೆ ಒಳಗಾಗದಿರಿ, ಮುಂದಿನ ದಿನಗಳಲ್ಲಿ ಚುನಾವಣೆ ಮುಗಿದ ನಂತರ ಸರಕಾರದ ವತಿಯಿಂದ ವೃತ್ತ ನಿರ್ಮಾಣ ಮಾಡಿ, ಕನಕ ವೃತ್ತ ಎಂದು ನಾಮಕರಣ ಮಾಡುತ್ತೇನೆ".
"ನಿಮಗೆ ನೆನಪಿರಲಿ, ನಾನು ಮುಖ್ಯಮಂತ್ರಿಯಾದಾಗ ಕನಕದಾಸರ ಜಯಂತಿ ಜಾರಿಗೆ ತಂದು ಕಾಗಿನೆಲೆ ಕನಕಗುರು ಪೀಠ ಅಭಿವೃದ್ದಿಗೆ ಶ್ರಮಿಸಿದ್ದು ನಮ್ಮ ಬಿಜೆಪಿ ಸರಕಾರ".
ಸ್ವಾಮೀಜಿಗೆ ಏಕವಚನ ಬಳಕೆ; ಮಾಧುಸ್ವಾಮಿ ರಾಜೀನಾಮೆಗೆ ಆಗ್ರಹ
"ನನ್ನ ಜೀವನದಲ್ಲಿ ಗುರುಗಳಿಗೆ, ಸಂತರುಗಳಿಗೆ, ದಾಸರಿಗೆ, ಶರಣರನ್ನು ಅತ್ಯಂತ ಗೌರವದಿಂದ ಕಂಡಿದ್ದೇನೆ ಹಾಗೂ ನಡೆದುಕೊಂಡಿದ್ದೇನೆ. ಯಾವುದೇ ಬಂದ್ ಅಥವಾ ಪ್ರತಿಭಟನೆ ನಡೆಸಕೂಡದು ಎನ್ನುವುದು ನನ್ನ ಮನವಿ" - ಇದು ಮುಖ್ಯಮಂತ್ರಿಗಳು ಹೊರಡಿಸಿದ ಪತ್ರಿಕಾ ಪ್ರಕಟಣೆ.