ನಾಗರಮಡಿಯ ದುರಂತ: ವಿವಾದಾತ್ಮಕ ಕಮೆಂಟ್ ಹಾಕಿದ್ದ ಯುವತಿ ವಿರುದ್ಧ ದೂರು
ಕಾರವಾರ, ಸೆಪ್ಟೆಂಬರ್ 21: ಇತ್ತೀಚೆಗೆ ಇಲ್ಲಿನ ಚೆಂಡಿಯಾದ ನಾಗರಮಡಿ ಜಲಪಾತದಲ್ಲಿ ನಡೆದ ದುರಂತದ ಕುರಿತು ಫೇಸ್ಬುಕ್ ನಲ್ಲಿ ವಿವಾದಾತ್ಮಕ ಕಮೆಂಟ್ ಹಾಕಿದ ಗೋವಾ ಯುವತಿ ವಿರುದ್ಧ ಪ್ರಕರಣ ದಾಖಲಾಗಿದೆ.
'ವಿಲ್ಸನ್ ಫರ್ನಾಂಡಿಸ್' ಎಂಬುವವರು ಹಾಕಿದ್ದ ಪೋಸ್ಟ್ ವೊಂದಕ್ಕೆ ಕಮೆಂಟ್ ಹಾಕಿದ್ದ ಗೋವಾದ ಕಾಣಕೋಣ ನಿವಾಸಿ ಅಂಜಲಿನಾ ಫರ್ನಾಂಡಿಸ್ ಎಂಬವರ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 'ಕಾರವಾರ ಹಾಗೂ ಗೋವಾದ ನಡುವೆ ಶಾಂತಿ ಭಂಗ ತರುವಂಥ ಕಮೆಂಟ್ ಮಾಡಿದ್ದಾರೆ' ಎಂಬ ಕಾರಣಕ್ಕೆ ದೂರು ನೀಡಲಾಗಿತ್ತು. ಈ ದೂರನ್ನಾಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
'ಕಾರವಾರದ ಜನರೇ ಡ್ಯಾಮ್ ನ ನೀರನ್ನು ಬಿಟ್ಟು, ಉದ್ದೇಶಪೂರ್ವಕವಾಗಿ ಗೋವಾದವರನ್ನು ಕೊಂದಿದ್ದಾರೆ. ನಾಗರಮಡಿಯಲ್ಲಿ ಗಣೇಶ ವಿಸರ್ಜನೆ ಮಾಡುತ್ತಾರೆ. ಹೀಗಾಗಿ ಗೋವಾ ಪ್ರವಾಸಿಗರಿಂದ ಆ ತಾಣ ಗಲೀಜು ಆಗುತ್ತಿರುವುದನ್ನು ಸಂಪೂರ್ಣವಾಗಿ ತಪ್ಪಿಸಲು ಅವರನ್ನು ಕೊಲ್ಲಲಾಗಿದೆ' ಎಂದು ಕಮೆಂಟ್ ಮಾಡಲಾಗಿತ್ತು.
'ಇದರಿಂದ ಜನರಿಗೆ ತಪ್ಪು ಸಂದೇಶ ಹೋಗಿ, ಗೋವಾ ರಾಜ್ಯ ಹಾಗೂ ಕಾರವಾರದ ನಡುವೆ ಸಾಮರಸ್ಯ ಕದಡಬಹುದು' ಎಂದು ದೂರುದಾರ ಜನಶಕ್ತಿ ವೇದಿಕೆಯ ಮಾಧವ ನಾಯಕ ಕಳವಳ ವ್ಯಕ್ತಪಡಿಸಿದ್ದಾರೆ. ಜನಶಕ್ತಿ ವೇದಿಕೆಯ ಮಾಧವ ನಾಯಕ ಹಾಗೂ ಚೆಂಡಿಯಾದ ವಿನಾಯಕ ನಾಯ್ಕ ದೂರು ನೀಡಿದವರಾಗಿದ್ದಾರೆ.
ಕಳೆದ ಭಾನುವಾರ ಕಾರವಾರ ತಾಲ್ಲೂಕಿನ ನಾಗರಮಡಿ ಜಲಪಾತದಲ್ಲಿ ಆರು ಮಂದಿ ಗೋವಾದ ಪ್ರವಾಸಿಗರು ಕೊಚ್ಚಿ ಹೋಗಿ ಮೃತಪಟ್ಟಿದ್ದರು. ಇದು ಎಲ್ಲೆಡೆ ಭಾರೀ ಸದ್ದು ಮಾಡಿತ್ತು.