"ಕರ್ನಾಟಕದಲ್ಲಿ ಕಳ್ಳ ಸಾಗಣೆ ಸಿಗರೇಟ್ ಮಾರಾಟಕ್ಕೆ ಕಡಿವಾಣವೇ ಇಲ್ಲ"
ಬೆಂಗಳೂರು, ಸೆ 27: ರಾಜ್ಯದಲ್ಲಿ ಯಾವುದೇ ಶಾಸನಬದ್ಧ ಎಚ್ಚರಿಕೆ ಇಲ್ಲದೇ ಕಳ್ಳ ಸಾಗಣೆಯಾಗಿರುವ ಸಿಗರೇಟ್ಗಳ ಮಾರಾಟ ಎಗ್ಗಿಲ್ಲದೇ ಸಾಗಿದ್ದು, ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕೆಂದು ಸರ್ಕಾರೇತರ ಸಂಸ್ತೆಯಾದ ದಿ ಫೌಂಡೇಶನ್ ಫಾರ್ ಹೆಲ್ತಿ ಕರ್ನಾಟಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿರುವ ಸಂಸ್ಥೆಯು ಇಂತಹ ಕಳ್ಳಸಾಗಣೆ ವಸ್ತುಗಳ ಮಾರಾಟ ತಡೆಗೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದೆ.
ಈ ಬಗ್ಗೆ ಮಾತನಾಡಿದ ದಿ ಫೌಂಡೇಶನ್ ಫಾರ್ ಹೆಲ್ತಿ ಕರ್ನಾಟಕದ ಮ್ಯಾನೇಜಿಂಗ್ ಟ್ರಸ್ಟಿ ಕೆ.ಸುಬ್ರಮಣ್ಯನ್ ಅವರು, "ಇತ್ತೀಚೆಗೆ ರಾಜ್ಯದಲ್ಲಿ ಕಳ್ಳಸಾಗಣೆಯಾಗಿರುವ/ಅಕ್ರಮ ಸಿಗರೇಟ್ಗಳ ಮಾರಾಟ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಈ ಸಿಗರೇಟ್ ಪ್ಯಾಕ್ಗಳ ಮೇಲೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಯಾವುದೇ ಶಾಸನಬದ್ಧ ಎಚ್ಚರಿಕೆಯ ಸೂಚನೆಯೂ ಇರುವುದಿಲ್ಲ. ಈ ಮೂಲಕ ಕೊಟ್ಪಾ (ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ತಡೆ ಕಾಯ್ದೆ) ಉಲ್ಲಂಘನೆಯಾಗುತ್ತಿದೆ.
ಮಂಗಳೂರಲ್ಲಿ ಎಗ್ಗುಸಿಗ್ಗಿಲ್ಲದೆ ಸಾಗಿದೆ ಸಿಗರೇಟು ಸ್ಮಗ್ಲಿಂಗ್
ಕೋಟ್ಪಾ ಕಾಯ್ದೆ 2003 ರ 7 ನೇ ಸೆಕ್ಷನ್ ಪ್ರಕಾರ ಎಲ್ಲಾ ತಂಬಾಕು ಉತ್ಪನ್ನಗಳಲ್ಲಿ ನಿರ್ದಿಷ್ಟ ಎಚ್ಚರಿಕೆ ಸಂದೇಶವಿರುವುದು ಕಡ್ಡಾಯ. ಇತ್ತೀಚಿನ ಆದೇಶದ ಪ್ರಕಾರ ತಂಬಾಕು ಉತ್ಪನ್ನಗಳ ಪ್ಯಾಕೇಟ್ಗಳ ಮೇಲೆ ಶೇ.85 ರಷ್ಟು ಭಾಗದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳನ್ನು ಬಿಂಬಿಸುವ ಚಿತ್ರ ಸಹಿತ ಎಚ್ಚರಿಕೆ ಸಂದೇಶ ಇರುವುದು ಕಡ್ಡಾಯವಾಗಿದೆ. ಆದ್ದರಿಂದ ಸಾರ್ವಜನಿಕ ಆರೋಗ್ಯದ ಬಗ್ಗೆ ಹಿತಾಸಕ್ತಿಯನ್ನು ಇಟ್ಟುಕೊಂಡಿರುವ ಸಂಸ್ಥೆಯಾಗಿರುವ ದಿ ಫೌಂಡೇಶನ್ ಫಾರ್ ಹೆಲ್ತಿ ಕರ್ನಾಟಕವು, ಕೂಡಲೇ ಈ ಅಕ್ರಮ ಸಿಗರೇಟ್ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಿದೆ"ಎಂದು ತಿಳಿಸಿದರು.
ಮಾರುಕಟ್ಟೆ ಸಮೀಕ್ಷೆ ಏನು ಹೇಳುತ್ತಿದೆ
ಈ ಸಂಬಂಧ ಮಾರುಕಟ್ಟೆ ಸಮೀಕ್ಷೆ ನಡೆಸಿರುವ ಈ ಎನ್ಜಿಒ, ಮಾರುಕಟ್ಟೆಯಲ್ಲಿ ಕಾನೂನು ಪ್ರಕಾರ ಮಾರಾಟವಾಗುತ್ತಿರುವ ಸಿಗರೇಟ್ಗಳ ದರಕ್ಕಿಂತ ಅತ್ಯಂತ ಕಡಿಮೆ ದರದಲ್ಲಿ ಈ ಕಳ್ಳಸಾಗಣೆಯಾಗಿರುವ ಸಿಗರೇಟ್ಗಳ ಮಾರಾಟವಾಗುತ್ತಿರುವುದನ್ನು ಪತ್ತೆ ಮಾಡಿದೆ. ಕೊಟ್ಪಾ (ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ತಡೆ ಕಾಯ್ದೆ) ಕಾಯ್ದೆ 2003 ರ ಪ್ರಕಾರ ತಂಬಾಕು ಉತ್ಪನ್ನಗಳ ಪ್ಯಾಕೇಟ್ಗಳ ಮೇಲೆ ಶೇ.85 ರಷ್ಟು ಭಾಗದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳನ್ನು ಬಿಂಬಿಸುವ ಚಿತ್ರ ಸಹಿತ ಎಚ್ಚರಿಕೆ ಸಂದೇಶ ಇರುವುದು ಕಡ್ಡಾಯವಾಗಿದೆ.
ಆಮದು ಸಿಗರೇಟ್ ಪ್ಯಾಕ್ ಮೇಲೆ ಎಚ್ಚರಿಕೆ ಸಂದೇಶ
ಅಲ್ಲದೇ, ಕಾಯ್ದೆಯ 7 ನೇ ಸೆಕ್ಷನ್ ಪ್ರಕಾರ ವಿದೇಶದಿಂದ ಆಮದಾದ ಸಿಗರೇಟ್ ಪ್ಯಾಕ್ಗಳ ಮೇಲೆಯೂ ಈ ಎಚ್ಚರಿಕೆ ಸಂದೇಶ ಇರುವುದು ಕಡ್ಡಾಯವಾಗಿದೆ. ಸಮೀಕ್ಷೆಯಿಂದ ಬಹಿರಂಗಗೊಂಡ ಇನ್ನೂ ಒಂದು ಪ್ರಮುಖ ಅಂಶವೆಂದರೆ, ಕಳ್ಳಸಾಗಣೆದಾರರು ಸರ್ಕಾರಕ್ಕೆ ತೆರಿಗೆಯನ್ನು ಮತ್ತು ಎಲ್ಲಾ ರೀತಿಯ ಸುಂಕಗಳನ್ನು ವಂಚಿಸಿ ಸಿಗರೇಟ್ಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆ. ಇದರಿಂದಾಗಿ ಈ ಸಿಗರೇಟ್ಗಳ ಬೆಲೆ ಕಡಿಮೆ ಇದೆ. ಯಾವುದೇ ಶಾಸನಬದ್ಧ ಎಚ್ಚರಿಕೆ ಸಂದೇಶವಿಲ್ಲದೇ ಆಕರ್ಷಕ ಪ್ಯಾಕ್ಗಳಲ್ಲಿ ಬರುವ ಈ ಸಿಗರೇಟ್ಗಳಿಗೆ ಜನಪ್ರಿಯತೆ ಹೆಚ್ಚುತ್ತಿದೆ. ಅದರಲ್ಲೂ ವಿಶೇಷವಾಗಿ ಯುವ ಸಮುದಾಯ ಇವುಗಳಿಗೆ ಆಕರ್ಷಿತವಾಗುತ್ತಿದೆ. ಇದಲ್ಲದೇ, ಈ ಸಿಗರೇಟ್ಗಳ ಆಮದುದಾರರ ಹೆಸರು, ವಿಳಾಸ, ರೀಟೇಲ್ ದರ, ಆಮದಾದ ತಿಂಗಳು & ವರ್ಷ ಹೀಗೆ ಯಾವುದೇ ವಿವರಗಳನ್ನು ಹೊಂದಿರುವುದಿಲ್ಲ. ಇದು ಲೀಗಲ್ ಮೆಟ್ರೋಲಾಜಿ (ಪ್ಯಾಕೇಜ್ಡ್ ಕಮಾಡಿಟೀಸ್) ರೂಲ್ಸ್ 2011 ರ ಸ್ಪಷ್ಟ ಉಲ್ಲಂಘನೆಯಾಗಿದೆ.
ಕೇಂದ್ರ ಸಚಿವ ಸಂಪುಟದ ಮಹತ್ವದ ನಿರ್ಧಾರ, ಇ ಸಿಗರೇಟು ನಿಷೇಧ
ಪರಿಸ್ಥಿತಿ ನಗರ ಪ್ರದೇಶಗಳಿಗೆ ಸೀಮಿತವಾಗಿಲ್ಲ
ಈ ಪರಿಸ್ಥಿತಿ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿಲ್ಲ. ಬದಲಿಗೆ ಗ್ರಾಮಾಂತರ ಪ್ರದೇಶಗಳಿಗೂ ವಿಸ್ತಾರಗೊಂಡಿದೆ. ವಿಶೇಷವಾಗಿ ಯುವಸಮುದಾಯ ಹೆಚ್ಚಿರುವ ಕಡೆ ಈ ಅಕ್ರಮ ಸಿಗರೇಟುಗಳ ಮಾರಾಟ ಎಗ್ಗಿಲ್ಲದೇ ಸಾಗಿದೆ ಎಂಬುದನ್ನು ಸಮೀಕ್ಷೆ ದೃಢಪಡಿಸಿದೆ. ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ದಿ ಫೌಂಡೇಶನ್ ಫಾರ್ ಹೆಲ್ತಿ ಕರ್ನಾಟಕವು ಅಕ್ರಮ ಸಿಗರೇಟ್ ಮಾರಾಟಕ್ಕೆ ಕಡಿವಾಣ ಹಾಕಲು ಈ ಕೆಳಕಂಡ ಕ್ರಮಗಳನ್ನು ಜರುಗಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
•ಕೋಟ್ಪಾ ಕಾಯ್ದೆಯ 20 ನೇ ಸೆಕ್ಷನ್ ಪ್ರಕಾರ ಶಾಸನಬದ್ಧ ಎಚ್ಚರಿಕೆ ಇಲ್ಲದ ಅಕ್ರಮ ಸಿಗರೇಟ್ಗಳ ಮಾರಾಟ ಮಾಡಿದರೆ 1-2 ಜೈಲುಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆ ಸಂದೇಶ ಸಾರುವ ಜಾಗೃತಿ ಅಭಿಯಾನದ ಮೂಲಕ ಮಾರಾಟಗಾರರಲ್ಲಿ ತಿಳಿವಳಿಕೆ ಮೂಡಿಸುವುದು.
ಕ್ರಮಗಳನ್ನು ಜರುಗಿಸಲು ಸರ್ಕಾರಕ್ಕೆ ಮನವಿ
•ಒಂದು ವೇಳೆ ಕಳ್ಳ ಸಾಗಣೆ ಸಿಗರೇಟ್ಗಳನ್ನು ಮಾರಾಟ ಮಾಡಿದರೆ ಒಂದು ಪ್ಯಾಕಿಗೆ 2000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ ಎಂಬುದರ ಬಗ್ಗೆ ಆಮದುದಾರರಿಗೆ ಅಥವಾ ಡೀಲರ್ ಗಳಿಗೆ ಮನವರಿಕೆ ಮಾಡಿಕೊಡುವುದು.
•ಕೋಟ್ಪಾ ಕಾಯ್ದೆಯ 13 ನೇ ಸೆಕ್ಷನ್ ಪ್ರಕಾರ ನಿಗದಿತ ಎಚ್ಚರಿಕೆ ಸಂದೇಶ ಇಲ್ಲದ ಸಿಗರೇಟ್ ಪ್ಯಾಕ್ಗಳನ್ನು ಜಪ್ತಿ ಮಾಡಬೇಕು.
•ಪೊಲೀಸ್, ಕಾನೂನು ಮಾಪನ, ಎಫ್ಡಿಎ ಸೇರಿದಂತೆ ಇನ್ನಿತರೆ ಜಾರಿ ಸಂಸ್ಥೆಗಳು ಆದ್ಯತೆ ಮೇಲೆ ಇಂತಹ ಕಳ್ಳಸಾಗಣೆ ಕೃತ್ಯಗಳನ್ನು ನಿರ್ಮೂಲನೆ ಮಾಡಲು ಕ್ರಮ ಜರುಗಿಸಬೇಕು.