ಉಚಿತ ಬೈಸಿಕಲ್ ಯೋಜನೆ ಮುಂದುವರೆಸಲು ಸಿಎಂಗೆ ಪತ್ರ
ಬೆಂಗಳೂರು, ಮೇ.16: ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರೌಢಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಣೆ ಮಾಡಲಾಗುತ್ತಿತ್ತು. ಈ ಯೋಜನೆಯನ್ನು ಮುಂದುವರೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕರ ವೇದಿಕೆ ಮನವಿ ಮಾಡಿದೆ.
ಈ ಕುರಿತು ಪತ್ರವನ್ನು ಬರೆಯಲಾಗಿದ್ದು, 2020-21 ಹಾಗೂ 2021-22ನೇ ಸಾಲಿನಲ್ಲಿ ಕೋವಿಡ್ ಕಾರಣದಿಂದ 8ನೇ ತರಗತಿ ಮಕ್ಕಳಿಗೆ ಸೈಕಲ್ ಕೊಡುವುದನ್ನು ನಿಲ್ಲಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದೀಗ 2022-23ನೇ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಈ ವರ್ಷದ ಪ್ರೌಢಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಹಾಗೂ 2020-21 ಹಾಗೂ 2021-22ನೇ ಸಾಲಿನಲ್ಲಿ ಈ ಯೋಜನೆಯಿಂದ ವಂಚಿತರಾದ ಮಕ್ಕಳ ಖಾತೆಗೆ ಸೈಕಲ್ ಬದಲು ಹಣ ವರ್ಗಾಹಿಸುವಂತೆ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಮಹಾಪೋಷಕರ ಸಂಘಟದ ನಿರಂಜನಾರಾಧ್ಯ ವಿ .ಪಿ. ನೇತೃತ್ವದಲ್ಲಿ ಪತ್ರ ಬರೆಯಲಾಗಿದೆ.
ರಾಜ್ಯದಲ್ಲಿ ಪ್ರೌಢ ಶಾಲೆಗಳ ಲಭ್ಯತೆಯ ಮಾನದಂಡ ಆಧಾರದ ಮೇಲೆ 5 ಕಿ. ಮೀ. ವ್ಯಾಪ್ತಿಯ. 7ನೇ ತರಗತಿಯ ಶಿಕ್ಷಣ ಮುಗಿಸಿದ ಮಕ್ಕಳು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶದ ವಿದ್ಯಾರ್ಥಿಗಳು ಪ್ರೌಢ ಶಾಲೆಗೆ ಹೋಗಬೇಕಾದರೆ 5 ಮತ್ತು ಒಮ್ಮೊಮ್ಮೆ ಅದಕ್ಕಿಂತ ಹೆಚ್ಚು ದೂರ ಪ್ರಯಾಣಿಸಬೇಕಿದೆ.
ಹಲವು ಪ್ರದೇಶಗಳಲ್ಲಿ ಮಕ್ಕಳಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಅಥವಾ ಸಂಪರ್ಕ ಇಲ್ಲದ ಕಾರಣ ಹಲವು ಮಕ್ಕಳು ತಮ್ಮ ಶಿಕ್ಷಣವನ್ನು 7ನೇ ತರಗತಿಗೆ ಮೊಟಕುಗೊಳಿಸುವ ಪರಿಸ್ಥಿತಿ ಎದುರಾಗಿದೆ. ಈ ಮಕ್ಕಳ ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿಯುವ ಉದ್ದೇಶದಿಂದ ರಾಜ್ಯ ಸರ್ಕಾರವು ಮಕ್ಕಳಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 2006-07ರಲ್ಲಿ ಉಚಿತ ಬೈಸಿಕಲ್ ವಿತರಣೆ ಮುಂದುವರಿಸುವಂತೆ ಮನವಿ ಮಾಡಲಾಗಿದೆ.
ಬಿಪಿಎಲ್ ಕುಟುಂಬದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಗೆ ದಾಖಲಾದ ಬಾಲಕ/ ಬಾಲಕಿಯರಿಗೆ ಸೈಕಲ್ ವಿತರಣೆ ಮಾಡಲಾಗುತ್ತಿತ್ತು. ಅದರಲ್ಲೂ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶದ ವಿದ್ಯಾರ್ಥಿಗಳು, ವಿಶೇಷವಾಗಿ ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸಿ ದೂರದ ಶಾಲೆಗೆ ಹೋಗಲು ಅನುಕೂಲ ಮಾಡಿಕೊಡುವ ಮೂಲಕ ಅವರ ಶಿಕ್ಷಣದ ಹಕ್ಕನ್ನು ಸಾಕಾರಗೊಳಿಸುವುದಾಗಿತ್ತು. ದುರಾದೃಷ್ಟವೆಂದರೆ, ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶದ ವಿದ್ಯಾರ್ಥಿಗಳಿಗೆ ದೊಡ್ಡಮಟ್ಟದಲ್ಲಿ ಸಹಾಯಕವಾಗಿದ್ದ ಈ ಯೋಜನೆಯನ್ನು ಸರ್ಕಾರ 2020-21 ಹಾಗೂ 2021-22ರ ಶೈಕ್ಷಣಿಕ ವರ್ಷದಲ್ಲಿ ಸ್ಥಗಿತಗೊಳಿಸಿದೆ.
ಕೋವಿಡ್ ಸಂಕಷ್ಟದ ಜೊತೆಗೆ ದೂರದ ಶಾಲೆಗೆ ಹೋಗಲು ಇದ್ದ ಸಾರಿಗೆ ಸೌಲಭ್ಯದ ವ್ಯವಸ್ಥೆಯನ್ನು ಸಹ ಸರ್ಕಾರ ಕಸಿದುಕೊಂಡ ಕಾರಣ ಈ ಮಕ್ಕಳ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕಾಗಿದೆ . ಲಭ್ಯವಿರುವ ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ನಮ್ಮ ರಾಜ್ಯದಲ್ಲಿ ಪ್ರೌಢ ಶಿಕ್ಷಣದ ಹಂತದಲ್ಲಿ ಒಟ್ಟು ದಾಖಲಾತಿಯ ಪ್ರಮಾಣ ಶೇ. 86.19 ಇದ್ದು ನಿವ್ವಳ ದಾಖಲಾತಿ ಪ್ರಮಾಣ ಕೇವಲ ಶೇ. 80.12 ಹಿರಿಯ ಪ್ರಾಥಮಿಕ ಶಿಕ್ಷಣದ ನಂತರ ಶಾಲೆ ತೊರೆಯುವ ಮಕ್ಕಳ ಶೇಕಡಾವಾರು ಪ್ರಮಾಣ 2.94 ಆದರೆ ಪ್ರೌಢ ಶಾಲಾ ಹಂತದಲ್ಲಿ ಅದು ಶೇ. 10.08 ಆಗಿದೆ ಎಂದು ತಿಳಿಸಲಾಗಿದೆ.
ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಮಕ್ಕಳಿಗೆ ಉಚಿತ ಬೈಸಿಕಲ್ ಒದಗಿಸುವುದರ ಪ್ರಾಮುಖ್ಯತೆ ಏನು ಎಂಬುದು ಅರ್ಥವಾಗುತ್ತದೆ . ಆದ್ದರಿಂದ, ಮಕ್ಕಳ ಶಿಕ್ಷಣದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಕೆಳಗಿನ ಅಂಶಗಳಿಗೆ ತುರ್ತು ಆದ್ಯತೆ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಲಾಗಿದೆ.