ಚುನಾವಣೆಗೆ ಸ್ಪರ್ಧೆ : ಏ.2ರಂದು ಅಂಬರೀಶ್ ನಿರ್ಧಾರ ಪ್ರಕಟ
ಬೆಂಗಳೂರು, ಮಾರ್ಚ್ 31 : ಮಾಜಿ ಸಚಿವ, ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ, ಇಲ್ಲವೇ?. ಏಪ್ರಿಲ್ 2ರಂದು ಅಂಬರೀಶ್ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
ಮಂಡ್ಯದಿಂದ ಆಗಮಿಸಿದ್ದ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಶನಿವಾರ ಅಂಬರೀಶ್ ಅವರನ್ನು ಭೇಟಿ ಮಾಡಿದರು. 2018ರ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದರು.
ಅಂಬರೀಶ್ ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಿಲ್ಲವೇ?
ಬೆಂಬಲಿಗರ ಜೊತೆ ಸಭೆ ನಡೆಸಿದ ಅಂಬರೀಶ್, 'ಪಕ್ಷದ ಪ್ರಮಖರೆಲ್ಲಾ ನನ್ನ ಸಂಪರ್ಕದಲ್ಲಿದ್ದಾರೆ. ನಾನು ಸಿಂಗಾಪುರಕ್ಕೆ ಹೋಗಿ ಬಂದ ಮೇಲೆ ಹಿಂದಿನ ಶಕ್ತಿ ಉಳಿದಿಲ್ಲ. ಆದರೆ, ಏಪ್ರಿಲ್ 2ರಂದು ಮುಖ್ಯಮಂತ್ರಿಗಳು ಮತ್ತು ಪಕ್ಷದ ಪ್ರಮುಖರನ್ನು ಭೇಟಿ ಮಾಡಿ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ' ಎಂದು ಹೇಳಿದರು.
ಅಂಬರೀಶ್ ಮಾತು ಮುಗಿಸಿದರೂ ಅಭಿಮಾನಿಗಳು ಗಲಾಟೆ ಮುಂದುವರೆಸಿದ್ದರು. ಇದರಿಂದ ಗದರಿದ ಅಂಬರೀಶ್, 'ಸುಮ್ಮನೆ ಮಾತನಾಡಬೇಡ. ಈಗ ನಿಲ್ಲುತ್ತೇನೆ ಎಂದು ಆ ಮೇಲೆ ನಿಲ್ಲಲಿಲ್ಲ' ಎಂದರೆ ಏನು ಮಾಡುವೆ? ಎಂದು ಪ್ರಶ್ನಿಸಿದರು.
ಟಿಕೆಟ್ ಗಾಗಿ ಅರ್ಜಿ ಹಾಕದ ಅಂಬರೀಷ್, ಮುಂದಿನ ನಡೆ?
2018ರ ಚುನಾವಣೆ ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಅರ್ಜಿ ಆಹ್ವಾನಿಸಿತ್ತು. ಆಗ ಅಂಬರೀಶ್ ಅರ್ಜಿ ಸಲ್ಲಿಸಿಲ್ಲ. ಸಿದ್ದರಾಮಯ್ಯ ಅವರೇ ಅರ್ಜಿ ಸಲ್ಲಿಸಿದರೂ ಅಂಬರೀಶ್ ಮೌನವಾಗಿದ್ದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಂಡ್ಯಕ್ಕೆ ಭೇಟಿ ನೀಡಿದ್ದರು. ಆದರೆ, ರಾಹುಲ್ ಗಾಂಧಿ ಕಾರ್ಯಕ್ರಮಗಳಲ್ಲಿ ಅಂಬರೀಶ್ ಪಾಲ್ಗೊಂಡಿರಲಿಲ್ಲ. ಇದರಿಂದಾಗಿ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ?, ಇಲ್ಲವೇ ಎಂಬ ಪ್ರಶ್ನೆ ಮೂಡಿದೆ.