ಪ್ರಯಾಣಿಕನನ್ನು ಅರ್ಧ ದಾರಿಯಲ್ಲೇ ಬಿಟ್ಟ ಕಂಡಕ್ಟರ್ಗೆ ದಂಡ
ಕಾರವಾರ, ಸೆಪ್ಟೆಂಬರ್ 09 : ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರನ್ನು ಅರ್ಧ ದಾರಿಯಲ್ಲಿಯೇ ಬಿಟ್ಟು ಬಂದಿದ್ದ ಕಾರಣಕ್ಕೆ ಮಹಿಳಾ ಕಂಡಕ್ಟರ್ಗೆ 5 ಸಾವಿರ ರುಪಾಯಿ ದಂಡ ವಿಧಿಸಿ ಉತ್ತರಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.
ಬಸ್ ಹತ್ತಿದ ಬಳಿಕ ಪ್ರಯಾಣಿಕರ ಸುರಕ್ಷತೆ ಮತ್ತು ಅವರ ಜವಾಬ್ದಾರಿ ಕಂಡಕ್ಟರ್ಗಳದ್ದಾಗಿರುತ್ತದೆ ಎಂದು ಗ್ರಾಹಕರ ನ್ಯಾಯಾಲಯದ ಅಭಿಪ್ರಾಯಪಟ್ಟಿದೆ.
ಜತೆಗೆ ಪ್ರಯಾಣಿಕ ಬಸ್ಸಿನಲ್ಲೇ ಮರೆತಿದ್ದ 5 ಸಾವಿರ ರೂ. ಕಾಣೆಯಾಗಿದ್ದು, ದಂಡದ ಜತೆಗೆ ಅದನ್ನೂ ಭರಿಸುವಂತೆ ನ್ಯಾಯಾಲಯ ಮಹಿಳಾ ಕಂಡಕ್ಟರ್ ಹೇಮಾವತಿ ಎಚ್.ಎಂಗೆ ನ್ಯಾಯಾಲಯ ಸೂಚಿಸಿದೆ.
ಹೇಳದೇ ಕೇಳದೇ ಊಟಕ್ಕೆ ಹೊರಟರು!
ಕಾರವಾರದ ಉಮಾಕಾಂತ ರಾಘೋಬಾ ಬಾಂದೇಕರ್ ಎಂಬುವವರು 2016ರ ಮಾರ್ಚ್ 26ರಂದು ಶಿರಸಿ ಜಾತ್ರೆ ಮುಗಿಸಿ, ಅಂಕೋಲಾ ಡಿಪೋಗೆ ಸೇರಿದ ಎನ್ಡಬ್ಲ್ಯುಕೆಆರ್ಟಿಸಿ ಜಾತ್ರೆಯ ವಿಶೇಷ ಬಸ್ಸಿನಲ್ಲಿ ವಾಪಸ್ಸಾಗುತ್ತಿದ್ದರು.
ಈ ವೇಳೆ ದಾರಿ ಮಧ್ಯದ ಸಣ್ಣ ಹೋಟೆಲ್ವೊಂದರ ಬಳಿ ಬಸ್ಸು ನಿಲ್ಲಿಸಿದ ಡ್ರೈವರ್, ಕಂಡಕ್ಟರ್ ಜತೆ ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡದೇ ಊಟಕ್ಕೆ ತೆರಳಿದ್ದರು. ಆ ವೇಳೆ ಉಮಾಕಾಂತ ಕೂಡ ಸಮಯವಿದೆ ಎಂದು ತಿಳಿದು ಟೀ ಕುಡಿಯಲು ಇಳಿದಿದ್ದರು. ಆದರೆ ಉಮಾಕಾಂತ ವಾಪಸ್ಸಾಗುವುದರ ಒಳಗೆ ಬಸ್ಸು ಅವರನ್ನು ಅಲ್ಲಿಯೇ ಬಿಟ್ಟು ಮುಂದೆ ತೆರಳಿತ್ತು. ಮರೆವಿನಲ್ಲಿ ಉಮಾಕಾಂತ 5 ಸಾವಿರ ರೂ. ನಗದು ಹಾಗೂ ದಾಖಲೆಗಳಿದ್ದ ಕವರ್ವೊಂದನ್ನು ಬಸ್ಸಿನಲ್ಲಿಯೇ ಇಟ್ಟಿದ್ದರು.
ಹಣ ಕಳೆದುಕೊಂಡ ಉಮಾಕಾಂತ್, ಅಲ್ಲಿಂದ ಮತ್ತೊಂದು ಬಸ್ ಹಿಡಿದು ಅಂಕೋಲಾಕ್ಕೆ ತೆರಳಿ, ಕಂಡಕ್ಟರ್ಗೆ ವಿಚಾರಿಸಿದ್ದಾರೆ. ಆದರೆ ಉಡಾಫೆಯ ಉತ್ತರ ನೀಡಿದ ಕಂಡಕ್ಟರ್ ಸಾರ್ವಜನಿಕರ ಎದುರು ಉಮಾಕಾಂತರನ್ನು ಅವಮಾನಿಸಿದ್ದರು. ಅವರು ಗ್ರಾಹಕರ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ಕಂಡಕ್ಟರ್ ಹಾಗೂ ಡ್ರೈವರ್ ಇಬ್ಬರ ವಿರುದ್ಧ ದೂರು ನೀಡಿದ್ದರು. ಅದರ ತೀರ್ಪು ಈಗ ಹೊರ ಬಿದ್ದಿದೆ.
ಕಂಡಕ್ಟರ್ಗೆ ನ್ಯಾಯಾಲಯ 3 ಸಾವಿರ ರೂ. ದಂಡ, 2 ಸಾವಿರ ರೂ. ದಾವೆಯ ವೆಚ್ಚ ಹಾಗೂ ಪ್ರಯಾಣಿಕ ಕಳೆದುಕೊಂಡ 5 ಸಾವಿರ ರೂ. ಸೇರಿ ಒಟ್ಟು 10 ಸಾವಿರ ರೂ.ವನ್ನು ಒಂದು ತಿಂಗಳಲ್ಲಿ ಪಾವತಿಸುವಂತೆ ಸೂಚಿಸಿದೆ.
ಹಣ ತುಂಬಿದರೂ ಅಡವಿಟ್ಟ ಬಂಗಾರ ಮರಳಿಸಲಿಲ್ಲ..
ಇನ್ನೊಂದು ಪ್ರಕರಣದಲ್ಲಿ ಹಣ ತುಂಬಿದ ನಂತರವೂ ಅಡವಿಟ್ಟ ಬಂಗಾರದ ಆಭರಣ ಬಿಟ್ಟುಕೊಡದೇ ಸತಾಯಿಸಿದ ಬ್ಯಾಂಕ್ ಮ್ಯಾನೇಜರ್ಗಳಿಗೆ ನ್ಯಾಯಾಲಯವು 15 ಸಾವಿರ ರೂ. ದಂಡ ವಿಧಿಸಿದೆ.
ಅಂಕೋಲಾದ ಬಾಲಕೃಷ್ಣ ನಾಯಕ ಎಂಬುವವರು 2015ರ ಮಾರ್ಚಿನಲ್ಲಿ ಅಂಕೋಲಾ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಬಂಗಾರ ಅಡವಿಟ್ಟು, 2 ಲಕ್ಷ 66 ಸಾವಿರ ರೂ. ಸಾಲ ಪಡೆದಿದ್ದರು. ಅರ್ಧ ಹಣ ತುಂಬಿದಲ್ಲಿ ಅದರ ಮೌಲ್ಯದ ಬಂಗಾರವನ್ನು ಬಿಟ್ಟುಕೊಡುವುದಾಗಿ ಬ್ಯಾಂಕ್ ಸಾಲ ಪತ್ರದಲ್ಲಿ ತಿಳಿಸಿತ್ತು.
ತಮ್ಮ ಮನೆಯಲ್ಲಿ ನಡೆಯುವ ಸಮಾರಂಭದ ಸಲುವಾಗಿ 1 ಲಕ್ಷ 70 ಸಾವಿರ ರೂ. ಪಾವತಿಸಿದ ಬಾಲಕೃಷ್ಣ ಅದರ ಮೌಲ್ಯದ ಬಂಗಾರದ ಆಭರಣಗಳನ್ನು ಒದಗಿಸುವಂತೆ ಕೋರಿದ್ದರು. ಆದರೆ, ಅದಕ್ಕೆ ಶಾಖೆಯ ಮ್ಯಾನೇಜರ್ ಹಾಗೂ ಸಹಾಯಕ ಮ್ಯಾನೇಜರ್ ಒಪ್ಪಿರಲಿಲ್ಲ. ಇದರಿಂದ ಬಾಲಕೃಷ್ಣ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರೂ ಮ್ಯಾನೇಜರ್ಗಳು ಸೇರಿ 10 ಸಾವಿರ ರೂ. ದಂಡ ಹಾಗೂ 5 ಸಾವಿರ ರೂ. ದಾವೆಯ ವೆಚ್ಚವನ್ನು 1 ತಿಂಗಳಲ್ಲಿ ದೂರುದಾರರಿಗೆ ನೀಡುವಂತೆ ಆದೇಶಿಸಿದೆ.