6500 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳ ಸೂಚನೆ
ಬೆಂಗಳೂರು, ಮೇ 06 : ಪ್ರಾಥಮಿಕ ಶಿಕ್ಷಣ ಇಲಾಖೆಯ ಶಾಲೆಗಳಲ್ಲಿ 6500 ಹೆಚ್ಚು ಕೊಠಡಿಗಳ ನಿರ್ಮಾಣ ಕಾರ್ಯವನ್ನು ಅಂದಾಜು 1000 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
2022- 23 ನೇ ಸಾಲಿನ ಬಜೆಟ್ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಥಮಿಕ ಶಿಕ್ಷಣ ಇಲಾಖೆ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಸಂಖೆ ಕಡಿಮೆ ಇದೆ. ಇದ್ದರೂ ಅಚ್ಚುಕಟ್ಟಾದ ಮತ್ತು ವ್ಯವಸ್ಥಿತ ಕೊಠಡಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಪೂರ್ಣಪ್ರಮಾಣದ ಮತ್ತು ಸುಸಜ್ಜಿತ ಕೊಠಡಿಗಳ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ.
ಸಭೆಯ ಮುಖ್ಯ ಅಂಶಗಳು ಇಂತಿವೆ:
* ಬಜೆಟ್ ನ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಆರ್ಥಿಕ ಹಾಗೂ ಸಮಯ ನಿರ್ವಹಣೆ ಬಹಳ ಮುಖ್ಯ. ಎಲ್ಲ ಕಾರ್ಯಕ್ರಮಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು.
* ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಮೂಲ ಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ. ಒದಗಿಸಲಾಗುವುದು. ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ. ನಂತರ ಎಸ್ ಜಿ ಪಿ ಗೆ 2ನೇ ಆದ್ಯತೆ ಹಾಗೂ ನಾನ್ ಎಸ್ ಜಿ ಪಿ ಗಳಿಗೆ 3 ನೇ ಆದ್ಯತೆ ನೀಡುವುದು.
* ಕೆಕೆಆರ್ಡಿಬಿ ವ್ಯಾಪ್ತಿಯಲ್ಲಿ 32 ಆಕಾಂಕ್ಷಿ ತಾಲ್ಲೂಕುಗಳಿದ್ದು, ಅವುಗಳ ಅಭಿವೃದ್ಧಿಗೆ ಆದ್ಯತೆ.
* ಕ್ಷೇತ್ರವಾರು ಅಭಿವೃದ್ಧಿಗೊಳಿಸುವ ಶಾಲೆಗಳ ಸಂಖ್ಯೆಯನ್ನು ನಿಗದಿಪಡಿಸುವುದು.
* ಈ ಯೋಜನೆಯಡಿ ನಿರ್ಮಾಣವಾಗುವ ಶಾಲಾ ಕಟ್ಟಡಗಳು ಏಕ ರೂಪದ ಮಾದರಿ ಹಾಗೂ ಬಣ್ಣವನ್ನು ಹೊಂದಿರುವುದು ಹಾಗೂ ಈ ಕಟ್ಟಡಗಳಿಗೆ ಹೆಸರನ್ನು ನಮೂದಿಸುವುದು.
* ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಉನ್ನತೀಕರಿಸುವುದಕ್ಕೆ ಸಂಬಂಧಿಸಿದಂತೆ ಸಿಎಸ್ ಆರ್ ತೊಡಗಿರುವ ಕಂಪನಿಗಳೊಂದಿಗೆ ಸಭೆ ನಿಗದಿಪಡಿಸುವುದು.
* ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ಕಲಿಸಿಲು ಶಿಕ್ಷಕರ ಸೇವೆಯನ್ನು ಸಿಎಸ್ ಆರ್ ಸಹಯೋಗದಲ್ಲಿ ಪಡೆಯಬಹುದು. ಅಂತೆಯೇ ಅರೆಕಾಲಿಕ ಶಿಕ್ಷಕರು, ಲ್ಯಾಬ್ ಸಿಬ್ಬಂದಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಸಿಎಸ್ಆರ್ ಸಹಯೋಗದಲ್ಲಿ ಮಾಡಬಹುದಾಗಿದೆ.
* ಸರ್ಕಾರಿ ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಪೀಠೋಪಕರಣ ಒದಗಿಸಲು 100 ಕೋಟಿ ಅನುದಾನ ನೀಡಲಾಗಿದ್ದು, ಉತ್ತಮ ಗುಣಮಟ್ಟದ ಉತ್ತಮ ಪೀಠೋಪಕರಣ ಸರಬರಾಜು ಮಾಡಲು ತಾಲ್ಲೂಕು ಮಟ್ಟದಲ್ಲಿ ಟೆಂಡರ್ ಕರೆಯುವುದು.
* ಆಯ್ದ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸುವುದಕ್ಕೆ ಸಂಬಂಧಿಸಿದಂತೆ ಮೊದಲು 100 ಶಾಲೆಗಳನ್ನು ಉನ್ನತೀಕರಣಕ್ಕೆ ಆಯ್ದುಕೊಳ್ಳುವುದು. 1.5 ಕೋಟಿ ರೂ. ರೆಕರಿಂಗ್ ವೆಚ್ಚವಾಗಿ ಪರಿಗಣಿಸುವುದು.
* 20,000 ಅಂಗನವಾಡಿಗಳಲ್ಲಿ ನೂತನ ಪಠ್ಯಕ್ರಮ ಜಾರಿಗೊಳಿಸುವ ಕಾರ್ಯಕ್ರಮವನ್ನು ಜುಲೈ ಮೊದಲನೆ ವಾರದಿಂದ ಪ್ರಾರಂಭಿಸಲು ಸೂಚಿಸಿದರು.
* 1000 ಗ್ರಾಮ ಪಂಚಾಯತಿಗಳನ್ನು ಸಾಕ್ಷರವನ್ನಾಗಿಸುವ ಕಾರ್ಯಕ್ರಮದಡಿಯಲ್ಲಿ ಡಿಜಿಟಲ್ ಶಿಕ್ಷಣ, ಬ್ಯಾಂಕ್ ವಹಿವಾಟು, ಬರವಣಿಗೆ ಇತ್ಯಾದಿ ದೈನಂದಿನ ಅವಶ್ಯಕತೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು.
* ಶಾಲಾ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಒದಗಿಸಲು ಬಸ್ ವ್ಯವಸ್ಥೆ ಬಗ್ಗೆ ಮಾತನಾಡಿ, ಪ್ರತಿ ತಾಲ್ಲೂಕಿಗೆ 4 ರಿಂದ 5 ಬಸ್ಗಳ ಖರೀದಿಗೆ ಶಾಸಕರಿಗೆ ಅನುಮತಿ ನೀಡಲಾಗುವುದು. ಮೊದಲ ಹಂತದಲ್ಲಿ ತಾಲೂಕಾ ಮಟ್ಟದ ಪಿಯುಸಿ ಹಾಗೂ ಡಿಗ್ರಿ ಕಾಲೇಜಿನ ಸಹಯೋಗದೊಂದಿಗೆ ಬಸ್ ವ್ಯವಸ್ಥೆ ಕಲ್ಪಿಸುವುದು.