ವೀರಶೈವ ಲಿಂಗಾಯತರನ್ನು 'ಘರ್ ವಾಪಸಿ'ಗೆ ಆಹ್ವಾನ ನೀಡುತ್ತಾ ಕಾಂಗ್ರೆಸ್?
ಕರ್ನಾಟಕದ ವೀರಶೈವ- ಲಿಂಗಾಯತರ ಪ್ರಶ್ನಾತೀತ ನಾಯಕ ಬಿ.ಎಸ್. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸುವ ಭಾರತೀಯ ಜನತಾ ಪಕ್ಷದ ನಡೆಯ ಲಾಭವನ್ನು ಕಾಂಗ್ರೆಸ್ ಪಕ್ಷ ಹೇಗೆ ಪಡೆದುಕೊಳ್ಳಬಹುದೆಂಬ ಸಣ್ಣದೊಂದು ಲೆಕ್ಕಾಚಾರ.
ಕರ್ನಾಟಕದ ವೀರಶೈವ ಲಿಂಗಾಯಿತ ಸಮಾಜ ಸ್ವಾತಂತ್ರ್ಯ ಪೂರ್ವದಿಂದಲೂ, ಸ್ವಾತಂತ್ರ್ಯ ನಂತರವೂ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಶ್ರಮಿಸಿದೆ. ಕಾಂಗ್ರೆಸ್ ಪಕ್ಷವು (ರಾಜೀವ್ ಗಾಂಧಿ) ವೀರೇಂದ್ರ ಪಾಟೀಲರ ಅನಾರೋಗ್ಯವನ್ನೇ ನೆಪ ಮಾಡಿಕೊಂಡು ಅವರನ್ನು ಮುಖ್ಯಮಂತ್ರಿ ಗಾದಿಯಿಂದ ತೀರಾ ಹೀನಾಯವಾಗಿ ಕೆಳಗಿಳಿಸಿದ ಕಾರಣ, ವೀರಶೈವ ಲಿಂಗಾಯತ ಸಮಾಜ ಕಾಂಗ್ರೆಸ್ ಪಕ್ಷದೆಡೆಗಿದ್ದ ತನ್ನ ನಿಷ್ಟೆ ಬದಲಿಸಿ ಜನತಾ ಪಕ್ಷವನ್ನು ಗೆಲ್ಲಿಸುವ ಮೂಲಕ ಸಮಾಜಕ್ಕಿದ್ದ ರಾಜಕೀಯ ಪ್ರಾಬಲ್ಯವನ್ನು ಪ್ರಕಟಿಸಿತು. ಆನಂತರ ರಾಜಕಾರಣ ಹೊಸದಿಕ್ಕಿನತ್ತ ಚಲಿಸಿದ್ದು ಇತಿಹಾಸ.
ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರು ಜೋಡೆತ್ತಿನಂತೆ ದುಡಿದು ಕಟ್ಟಿದ ಜನತಾ ಪಕ್ಷವು ಸ್ವಹಿತದ ರಾಜಕಾರಣಿಗಳಿಂದ ಎರಡು ಹೋಳಾಯಿತು. ನಂತರದ ದಿನಗಳಲ್ಲಿ ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ಎಂಬ ರಾಜಕೀಯ ಹೊಂದಾಣಿಕೆಯ ಪರ್ವಕ್ಕೆ ನಾಂದಿಯಾಯಿತು.
ಜೆಡಿಎಸ್ ಮತ್ತು ಭಾಜಪ 20:20 ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ವಚನ ಭ್ರಷ್ಟರಾಗಿ ಯಡಿಯೂರಪ್ಪರಿಗೆ ಅಧಿಕಾರ ನಡೆಸಲು ಬಿಡದ ಕಾರಣ, ಮುಂದಿನ ಚುನಾವಣೆಯಲ್ಲಿ ಇಡೀ ವೀರಶೈವ ಲಿಂಗಾಯಿತ ಸಮುದಾಯ ಯಡಿಯೂರಪ್ಪ ಬೆಂಬಲಕ್ಕೆ ನಿಂತು ಪೂರ್ಣ ಅಧಿಕಾರ ನೀಡುವಲ್ಲಿ ಯಶಸ್ವಿಯಾಯಿತು. ಇದರಿಂದ ಅರ್ಥಮಾಡಿಕೊಳ್ಳಬೇಕಿರುವುದಿಷ್ಟೇ ಈ ಸಮುದಾಯವೂ ಅಗತ್ಯವೆಂದಾಗ ರಾಜಕೀಯ ದಿಕ್ಸೂಚಿಯಾಗಿ ಕೆಲಸ ಮಾಡಬಲ್ಲದು.
ಇನ್ನು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು ಶೂನ್ಯದಿಂದ ಕಟ್ಟಿ ಬೆಳೆಸಿದ ಬಿ.ಎಸ್. ಯಡಿಯೂರಪ್ಪ ಪಕ್ಷ ತ್ಯಜಿಸಿ ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿದಾಗ ಭಾಜಪ ನೆಲಕಚ್ಚಿದ್ದು ಎಲ್ಲರಿಗೂ ತಿಳಿದಿದೆ. ಅದೇ ಬಯಲಾಟದಲ್ಲಿ ಕಾಂಗ್ರೆಸ್ಗೆ ಲಾಭವಾಗಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಅಧಿಕಾರ ನಡೆಸಿದರು.
ಇದೀಗ ಭಾರತೀಯ ಜನತಾ ಪಕ್ಷ ತನ್ನ ಆಂತರಿಕ ನೀತಿ- ನಿಯಮಗಳ ನೆಪವೊಡ್ಡಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಲು ಮುಂದಾಗಿದೆ. ಇದು ಭಾರತೀಯ ಜನತಾ ಪಕ್ಷಕ್ಕೆ ಮರಣ ಶಾಸನವಾಗಲೂಬಹುದು. ಮುಂದಿನ ದಿನಗಳಲ್ಲಿ ಕರ್ನಾಟಕದ ವೀರಶೈವ ಲಿಂಗಾಯತರು ತಮ್ಮ ಪಕ್ಷ ನಿಷ್ಟೆ ಬದಲಿಸಬಹುದು.
ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಒಳ್ಳೆಯ ಅವಕಾಶ. ತಮ್ಮ ಪಕ್ಷಕ್ಕೆ ನಿಷ್ಟವಾಗಿದ್ದ ಬಲಿಷ್ಟ ಸಮುದಾಯವೊಂದನ್ನು ಮತ್ತೆ "ಘರ್ ವಾಪಸಿ"ಗೆ ಆಹ್ವಾನ ಕೊಡಬಹುದು. ಅದಕ್ಕೆ ವೀರಶೈವ ಲಿಂಗಾಯಿತ ಸಮುದಾಯದ ಲೀಡರ್ ಶಿಪ್ನಲ್ಲಿ ಮುಂದಿನ ಎಲೆಕ್ಷನ್ಗೆ ಹೋಗುವುದು ಒಳ್ಳೆಯದು.
ಸಿದ್ಧರಾಮಯ್ಯರವರ ಸರ್ಕಾರದಲ್ಲಿ ವೀರಶೈವ ಬೇರೆ, ಲಿಂಗಾಯತ ಬೇರೆ ಮತ್ತು ಸ್ವತಂತ್ರ ಧರ್ಮ ಆಗಬೇಕು ಎಂದೆಲ್ಲಾ ಗದ್ದಲವೆದ್ದಿತ್ತಲ್ಲ, ಆ ವಿಷಯಕ್ಕೆ ಮುಂದಿನ ಹದಿನೈದು ವರ್ಷಗಳ ಕಾಲ ವಿರಾಮ ಕೊಟ್ಟು ಕರ್ನಾಟಕದ ವೀರಶೈವ ಲಿಂಗಾಯತರನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಬೇಕಾದ ಜಾಣ ರಾಜಕಾರಣ ಮಾಡಲು ಕಾಂಗ್ರೆಸ್ಗಿದು ಒಳ್ಳೆಯ ಸಂದರ್ಭ. ಅದಕ್ಕೆ ಎಂ.ಬಿ. ಪಾಟೀಲರಿಗೆ ನಾಯಕತ್ವ ಕೊಡುವುದು ಒಂದೊಳ್ಳೆ ನಡೆಯಾಗಬಹುದು. OVER TO AICC
Recommended Video
"ಇತಿಹಾಸವನ್ನು ಅರಿಯದವನು ಇತಿಹಾಸವನ್ನು ನಿರ್ಮಿಸಲಾರ"