ರಾಜ್ಯ ಕಾಂಗ್ರೆಸ್ ನಿಯೋಗ ರಾಜ್ಯಪಾಲರಿಗೆ ಕೊಡುವ ದೂರಿನಲ್ಲೇನಿದೆ?
ಬೆಂಗಳೂರು, ಮಾ. 04: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಮೇಲೆ ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ದೂರು ಕೊಡಲು ಕಾಂಗ್ರೆಸ್ ನಿರ್ಧರಿಸಿದ್ದು, ಬೆಳಗ್ಗೆ 10.45ಕ್ಕೆ ಕಾಂಗ್ರೆಸ್ ನಿಯೋಗ ರಾಜಭವನದಲ್ಲಿ ರಾಜ್ಯಪಾಲರಿಗೆ ದೂರು ಕೊಡಲಿದೆ. ನಂತರ ವಿಧಾನಸಭೆಯಲ್ಲಿ ನಡೆಯುತ್ತಿರುವ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ.
ಸದನದಲ್ಲಿ ಚರ್ಚೆಗೆ ಅವಕಾಶ ತಿರಸ್ಕಾರ ಹಿನ್ನೆಲೆಯಲ್ಲಿ ದೂರು ಕೊಡಲು ನಿರ್ಧಾರ ಮಾಡಲಾಗಿದ್ದು, ಯತ್ನಾಳ್ ಸ್ವಾತಂತ್ರ್ಯ ಹೋರಾಟಗಾರರನ್ನ ನಿಂಧಿಸಿದ್ದಾರೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದು ಕೊಂಡಿದ್ದಾರೆ. ಪದೇ ಪದೇ ಪಾಕ್ ಏಜೆಂಟ್ ಅಂತ ಕರೆದಿದ್ದಾರೆ. ಸದನದಲ್ಲಿ ಸಮಗ್ರ ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಹೀಗಾಗಿ ನೀವೇ ಇದರ ಬಗ್ಗೆ ಕ್ರಮತೆಗೆದುಕೊಳ್ಳಬೇಕು.
ಪರಿಷತ್ ಅಧಿವೇಶನದಲ್ಲೂ ಕಾಡಿದ ಕೊರೊನಾ ವೈರಸ್ ಆತಂಕ
ಎಂದು ಕಾಂಗ್ರೆಸ್ ಮನವಿ ಪತ್ರ ಸಿದ್ಧ ಮಾಡಿಕೊಂಡಿದೆ.
ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಮಾಡಿದವರಲ್ಲ ಎಂದು ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಜೊತೆಗೆ ದೊರೆಸ್ವಾಮಿ ಅವರು ಸ್ವಾತಂತ್ರ್ಯ ಸಂಗ್ರಾಮದ ಸಾಕ್ಷಿಪ್ರಜ್ಞೆ. ಸ್ವಾತಂತ್ರ ಹೋರಾಟಗಾರರ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟಿಲ್ಲ. ನಮ್ಮ ಧರಣಿಯ ನಡುವೆಯೇ ಸಂವಿಧಾನದ ಮೇಲಿನ ಚರ್ಚೆಗೆ ಪ್ರಾಸ್ತಾವಿಕ ಮಾತನ್ನಾಡಿದ್ದಾರೆ. ಜೊತೆಗೆ ನಮ್ಮ ಬಗ್ಗೆ ಅಗೌರವಯುತವಾಗಿ ಮಾತಾಡಿದ್ದಾರೆ. ಎಲ್ಲರೂ ಸೇರಿ ಸಂಚು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ದೂರು ಕೊಟ್ಟ ಬಳಿಕ ಚರ್ಚೆಯಲ್ಲಿ ಭಾಗಿ: ರಾಜ್ಯಪಾಲರನ್ನು ಭೇಟಿ ಮಾಡುಲಿರುವ ನಿಯೋಗ ಬಿಜೆಪಿ ಶಾಸಕ ಯತ್ನಾಳ್ ಮೇಲೆ ಕ್ರಮಕೈಗೊಳ್ಳುವಂತೆ ದೂರು ನೀಡಲಿದೆ. ಆದರೆ ಸ್ಪೀಕರ್ ಕಾಗೇರಿ ವಿರುದ್ಧ ಯಾವುದೇ ದೂರು ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ರಾಜ್ಯಪಾಲರಿಗೆ ದೂರು ಕೊಟ್ಟ ಬಳಿಕ ವಿಧಾನಸಭೆಯಲ್ಲಿ ಸಂವಿಧಾನದ ಮೇಲೆ ನಡೆಯುವ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷ ಭಾಗವಹಿಸಲಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ. ಪರಮೇಶ್ವರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಂಸದ ಉಗ್ರಪ್ಪ ನಿಯೋಗ ರಾಜಭವನಕ್ಕೆ ಭೇಟಿ ನೀಡಲಿದೆ.
ಸಿಎಎ, ಎನ್ಆರ್ಸಿ ಪ್ರಮುಖವಾಗಿ ಪ್ರಸ್ತಾಪ ಮಾಡಲು ಕಾಂಗ್ರೆಸ್ ನಿರ್ಧಾರ: ಇನ್ನು ವಿರೋಧ ಪಕ್ಷ ಕಾಂಗ್ರೆಸ್ ಸಂವಿಧಾನದ ಮೇಲೆ ನಡೆಯುವ ಚರ್ಚೆಯ ಬಳಿಕ ಚರ್ಚೆಯಲ್ಲಿ ಭಾಗವಹಿಸಿದರೂ ಕಲಾಪದಲ್ಲಿ ಕೋಲಾಹಲ ಆಗಲಿದೆ. ಸಿಎಎ ಹಾಗೂ ಎನ್ಆರ್ಸಿ ಕುರಿತು ಕಾಂಗ್ರೆಸ್ ಸದಸ್ಯರು ಮಾತನಾಡುವ ಸಾಧ್ಯತೆಯಿದೆ. ಇದು ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗುವ ಸಾಧ್ಯತೆಯಿದೆ.