ಪರಿಷತ್ ಸಭಾಪತಿ ಶಂಕರಮೂರ್ತಿ ಪದಚ್ಯುತಿಗೆ ಕಾಂಗ್ರೆಸ್ ತಂತ್ರ
ಸದ್ಯದ ಮಟ್ಟಿಗೆ ನಿರಾಯಾಸವಾಗಿ ಸಭಾಪತಿ ಸ್ಥಾನವನ್ನು ಕಾಂಗ್ರೆಸ್ ಗಿಟ್ಟಿಸಬಹುದಾಗಿದೆ. ಹೀಗಾಗಿ ಬಜೆಟ್ ಅಧಿವೇಶನದಲ್ಲಿ ಶಂಕರಮೂರ್ತಿ ಸಭಾಪತಿ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬರಬಹುದು.
ಬೆಂಗಳೂರು, ಮೇ 21: ವಿಧಾನ ಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ಪದಚ್ಯುತಿಗೆ ಕಾಂಗ್ರೆಸ್ ತಂತ್ರ ಹೆಣೆಯುತ್ತಿದೆ. ಪರಿಷತ್ ನಲ್ಲಿ ಇಲ್ಲಿಯವರೆಗೆ ಕಾಂಗ್ರೆಸ್ ಗೆ ಬಹುಮತವಿರಲಿಲ್ಲ. ಆದರೆ ಇದೀಗ ನಾಮ ನಿರ್ದೇಶನ ಸದಸ್ಯರ ನೇಮಕದಿಂದ ಕಾಂಗ್ರೆಸ್ ಬಹುಮತ ಪಡೆಯಲಿದೆ.
ಹೀಗಾಗಿ ತಮ್ಮ ಪಕ್ಷದವರನ್ನೇ ಸಭಾಪತಿ ಮಾಡಲು ಕಾಂಗ್ರೆಸ್ ಹೊರಟಿದೆ. ಕಾಂಗ್ರೆಸ್ ನಿಂದ ಕೆಸಿ ಕೊಂಡಯ್ಯ, ಎಸ್. ಆರ್ ಪಾಟೀಲ್ ಸಭಾಪತಿ ರೇಸ್ ನಲ್ಲಿದ್ದಾರೆ.
ಜೂನ್ 5ದಿಂದ ಮುಂದುವರಿದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಶಂಕರರ್ಮೂರ್ತಿ ಪದಚ್ಯುತಿಗೆ ಕಾಂಗ್ರೆಸ್ ಮುಂದಾಗುವ ಸಾಧ್ಯತೆ ಇದೆ.
ಮೇಲ್ಮನೆ ಬಲಾಬಲ
75 ಸದಸ್ಯ ಬಲದ ಮೇಲ್ಮನೆಯಲ್ಲಿ ಸದ್ಯ ಕಾಂಗ್ರೆಸ್ 30 ಶಾಸಕರನ್ನು ಹೊಂದಿದೆ. ಇನ್ನು ಬಿಜೆಪಿ 22, ಜೆಡಿಎಸ್ 13 ಹಾಗೂ 5 ಪಕ್ಷೇತರರಿದ್ದಾರೆ. ಇನ್ನು ಒಬ್ಬರು ಸಭಾಪತಿ (ಬಿಜೆಪಿ) ಹಾಗೂ 2 ಸ್ಥಾನ ಖಾಲಿ ಇದೆ.
ಇದೀಗ ಮೇಲ್ಮನೆಗೆ ಇಬ್ಬರು ನಾಮ ನಿರ್ದೇಶನಗೊಂಡಿದ್ದಾರೆ. ಜತೆಗೆ ಸದ್ಯದಲ್ಲೇ ಒಬ್ಬರು ನಾಮ ನಿರ್ದೇಶನಗೊಳ್ಳಲಿರುವುದರಿಂದ ಕಾಂಗ್ರೆಸ್ ಬಲ 33 ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಜತೆಗೆ ಪಕ್ಷೇತರ ಶಾಸಕರೂ ಕಾಂಗ್ರೆಸ್ ಬೆಂಬಲಿಸಿದರೆ ಕಾಂಗ್ರೆಸ ಬಲ 38ಕ್ಕೆ ಏರಿಕೆಯಾಗಲಿದೆ. ಇದರಿಂದ ಸ್ಪಷ್ಟ ಬಹುಮತ ಪಡೆಯಬಹುದು.
ಇಲ್ಲಿಯವರೆಗೆ ಬಿಜೆಪಿ ಮತ್ತು ಜೆಡಿಎಸ್ ಬೆಂಬಲದಿಂದ ಶಂಕರಮೂರ್ತಿ ಸಭಾಪತಿಯಾಗಿದ್ದರು. ಇದೀಗ ಬಿಜೆಪಿ ಸದಸ್ಯೆ ವಿಮಲಾ ಗೌಡ ಮರಣದಿಂದ ಬಿಜೆಪಿ ಒಂದು ಸ್ಥಾನವನ್ನೂ ಕಳೆದುಕೊಂಡಿದೆ. ಹೀಗಾಗಿ ಸದ್ಯ ಬಿಜೆಪಿ ಜೆಡಿಎಸ್ ಒಟ್ಟಾದರೂ ಕೇವಲ 35 ಸ್ಥಾನಗಳಷ್ಟೇ ಆಗುತ್ತವೆ. ಇನ್ನು ಸಂಖ್ಯಾಬಲದಲ್ಲಿ ಆಡಳಿತರೂಢ ಕಾಂಗ್ರೆಸ್ ವಿಮಲಾ ಗೌಡರ ಸ್ಥಾನವನ್ನೂ ಗೆದ್ದುಕೊಳ್ಳಲಿದೆ.
ವಿಮಲಾ ಗೌಡರ ಸ್ಥಾನ ಭರ್ತಿಯಾಗುವುದು ತಡವಾದರೂ ಸದ್ಯದ ಮಟ್ಟಿಗೆ ನಿರಾಯಾಸವಾಗಿ ಸಭಾಪತಿ ಸ್ಥಾನವನ್ನು ಕಾಂಗ್ರೆಸ್ ಗಿಟ್ಟಿಸಬಹುದಾಗಿದೆ. ಹೀಗಾಗಿ ಬಜೆಟ್ ಅಧಿವೇಶನದಲ್ಲಿ ಶಂಕರಮೂರ್ತಿ ಸಭಾಪತಿ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬರಬಹುದು.