1ನೇ ಕ್ಲಾಸ್ ಪ್ರವೇಶಕ್ಕೆ 6 ವರ್ಷ ವಯಸ್ಸು: ಆದೇಶ ವಾಪಸ್ಗೆ ಕಾಂಗ್ರೆಸ್ ಆಗ್ರಹ
ಬೆಂಗಳೂರು ಜುಲೈ 27: ರಾಜ್ಯ ಸರ್ಕಾರ ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ಆರು ವರ್ಷ ಪೂರ್ಣವಾಗಿರಬೇಕು ಎಂದು ಮಂಗಳವಾರ ಹೊರಡಿಸಿರುವ ಹೊಸ ಆದೇಶ ಗೊಂದಲಮಯವಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಅವರು ಆಗ್ರಹಿಸಿದ್ದಾರೆ.
ಬುಧವಾರ ನಗರದ್ಲಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಇರುವ ಕಾನೂನಿನ ಪ್ರಕಾರ ಐದು ವರ್ಷ ಐದು ತಿಂಗಳ ಮಗು ಶಾಲೆಗೆ ದಾಖಲಾತಿ ಪಡೆಯಲು ಅವಕಾಶ ಇದೆ. ಈಗ ರಾಜ್ಯದೆಲ್ಲಡೆ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಕೇವಲ ಎರಡು ದಿನಗಳಲ್ಲಿ ಪೂರ್ವಾಪರ ನೋಡದೇ ಈ ವಿಚಾರವಾಗಿ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದರು.
ಮೋದಿ ಸರ್ಕಾರದಲ್ಲಿ ಅಧಿಕಗೊಂಡ ಇಡಿ ದಾಳಿಗಳು- ಸರ್ಕಾರ ಹೇಳಿದ್ದೇನು?
ಆದೇಶಕ್ಕು ಮುನ್ನ ಯಾವುದೇ ವಿಮರ್ಶೆ ಮಾಡಿಲ್ಲ. ಮಕ್ಕಳ ಶೈಕ್ಷಣಿಕ ವಿಚಾರ ಕುರಿತು ಆದೇಶ ಬಗ್ಗೆ ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸದೆ ಹೊಸ ಆದೇಶ ಹೊರಡಿಸಲಾಗಿದೆ. ಇದರಿಂದ ಪೋಷಕರು ಶಿಕ್ಷಕರು ಹಾಗೂ ಮಕ್ಕಳು ಗೊಂದಲಕ್ಕೀಡಾಗಿದ್ದಾರೆ ಎಂದು ಅವರು ದೂರಿದರು.
ಸರ್ಕಾರದ ಹೊಸ ಆದೇಶವನ್ನು ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ನಡೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಸರ್ಕಾರ ಹೊರಡಿಸಿರುವ ಈ ನೂತನ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇವೆ. ಸರ್ಕಾರ ಇನ್ನಾದರೂ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದು ಆಕ್ರೋಶ ಹೊರಹಾಕಿದರು.
ಶಿಕ್ಷಣ ಇಲಾಖೆ ಆವಾಂತರ ಬಹಳ
ಬಿ.ಸಿ. ನಾಗೇಶ್ ಅವರು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ನಂತರ ಇಲಾಖೆಯ ಸಂಪೂರ್ಣ ಗೊಂದಲಮಯವಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ, ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಣೆ ವಿಚಾರ, ಮೌಲ್ಯ ಮಾಪನ ಮಾಡುವವರಿಗೆ ಭತ್ಯೆ ವಿಚಾರ, ಶಿಕ್ಷಕರ ವರ್ಗಾವಣೆ ವಿಚಾರ, ಮಕ್ಕಳ ಬಿಸಿ ಊಟ ಮೊಟ್ಟೆ ವಿತರಣೆ ವಿಚಾರಗಳಿಗೆ ಸಂಬಂಧಿಸಿದಂತೆ ಬಹುತೇಕ ಎಲ್ಲ ವಿಚಾರಗಳಲ್ಲಿ ಅವಾಂತರಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ವಿವರಿಸಿದರು.
ವಯೋಮಿತಿ ಆದೇಶದಲ್ಲಿ ಸ್ಪಷ್ಟತೆ ಇಲ್ಲ
ಶಿಕ್ಷಣ ಇಲಾಖೆಯ ಕಳೆದ ಮೇ ತಿಂಗಳಿಂದಲೇ ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಘೋಷಿಸಿದೆ. ಈಗಾಗಲೇ ತ್ರೈಮಾಸಿಕ ಅವಧಿ ಮುಕ್ತಾಯಗೊಂಡಿದ್ದು, ಈಗ ಸರ್ಕಾರ ಹೊಸ ಆದೇಶ ಮಾಡಿದೆ. ಇದು ಪೋಷಕರ ಗೊಂದಲಕ್ಕೆ ಕಾರಣವಾಗಿದೆ.
ಪ್ರಸ್ತುತ ಶಿಕ್ಷಣ ಇಲಾಖೆಯ ಈ ಹೊಸ ಆದೇಶ ಇದೇ ವರ್ಷದಿಂದಲೇ ಜಾರಿ ಆಗಲಿದಿಯೋ? ಅಥವಾ ಮುಂದಿನ ವರ್ಷದಿಂದ ಜಾರಿಗೆ ಬರಲಿದಿಯೋ ಎಂಬುದರ ಬಗ್ಗೆ ಆದೇಶದಲ್ಲಿ ಸ್ಪಷ್ಟನೆ ನೀಡಿಲ್ಲ. ಇಷ್ಟು ಗೊಂದಲಮಯ ಆದೇಶ ನೀಡುವ ಅಗತ್ಯತೆ ಇತ್ತಾ?. ಆದೇಶ ಹೊರಡಿಸುವ ಮಾಹಿತಿ ಸಹ ಪ್ರಸ್ತಾಪವಾಗಿರಲಿಲ್ಲ ಎಂದು ಕಿಡಿ ಕಾರಿದರು.
ಎನ್ಇಪಿ : ಒಂದೊಂದು ರಾಜ್ಯದಲ್ಲಿ ಒಂದೊಂದು ವಯೋಮಿತಿ
ನೂತನ ರಾಷ್ಟೀಯ ಶಿಕ್ಷಣ ನೀತಿ (ಎನ್ಇಪಿ) ಜಾರಿಗೆ ತರಲು ಅದನ್ನು ನಾಲ್ಕು ವಿಭಾಗಗಳಲ್ಲಿ ವರ್ಗಿಕರಣ ಮಾಡಲಾಗಿದೆ. 1ರಿಂದ5ನೇ ತರಗತಿ ಪ್ರಾಥಮಿಕ ಶಿಕ್ಷಣ ಹಂತ, 6ರಿಂದ 8ನೇ ತರಗತಿ ನಂತರದ ಹಂತ, 9ರಿಂದ11 ಮೂರನೇ ಹಂತ ಹಾಗೂ ಪದವಿಯನ್ನು ನಾಲ್ಕು ವರ್ಷಗಳ ಕಾಲ ಮಾಡಲು ತೀರ್ಮಾನಿಸಿದ್ದು, ಅದನ್ನು ಕೊನೆಯ ಹಂತವನ್ನಾಗಿ ಪರಿಗಣಿಸಲಾಗಿದೆ. ಇಡೀ ಭಾರತದಲ್ಲೇ ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ವಯೋಮಿತಿ ಇಟ್ಟುಕೊಂಡರೆ ಹೇಗೆ ಎಂದು ಅವರು ಪ್ರಶ್ನಿಸಿದರು.
ಇಲಾಖೆ ಹಣ ಸಚಿವರ ವೈಯಕ್ತಿಕ ಬಳಕೆ
ಸಚಿವ ಬಿ.ಸಿ ನಾಗೇಶ್ ಅವರು ಕರ್ನಾಟಕ ಪರೀಕ್ಷಾ ಮಂಡಳಿಯ ಮೂಲಕ ಬೆಂಗಳೂರಿನ ಖಾಸಗಿ ಸಂಸ್ಥೆಯನ್ನು ಬಳಸಿಕೊಂಡು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಗೆ ಶಿಕ್ಷಣ ಇಲಾಖೆಯಿಂದ ಹಣ ಪಾವತಿಸಲಾಗುತ್ತಿದೆ. ಸಚಿವರು ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಈ ಸಂಸ್ಥೆಯನ್ನು ಬಳಸಿಕೊಂಡಿದ್ದರೆ ಯಾವುದೇ ತಕರಾರು ಮಾಡುತ್ತಿರಲಿಲ್ಲ. ಆದರೆ ಸಚಿವರು ಇಲಾಖೆಯ ಹಣದಲ್ಲಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣ ಖಾತೆ ಹಾಗೂ ಪಕ್ಷದ ವಿಚಾರಗಳನ್ನು ಹಂಚಲು ಹಣ ನೀಡಿ ಸಂಸ್ಥೆ ಬಳಸಿಕೊಳ್ಳುತ್ತಿರುವುದು ತಪ್ಪು.
ಈ ವಿಚಾರ ಕುರಿತು ಸಂಬಂಧ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಸಚಿವರು ನೀಡಿದ ಹಣವನ್ನು ಹಿಂಪಡೆಯಬೇಕು ಎಂದು ಪಕ್ಷದ ಪರವಾಗಿ ಅವರು ಒತ್ತಾಯಿಸಿದರು.