ಬಿಕ್ಕಟ್ಟು ನಿರ್ವಹಿಸುವುದು ವಿಧಾನಸಭೆಯಲ್ಲಿ ಮೊಬೈಲ್ನಲ್ಲಿ 'ರೋಮಾಂಚನ' ಚಿತ್ರ ವೀಕ್ಷಿಸಿದಂತಲ್ಲ!
ಬೆಂಗಳೂರು, ಡಿ. 13: ರಾಜ್ಯದಲ್ಲಿ ಸಾರಿಗೆ ನಿಗಮಗಳ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷ 'ರೋಮಾಂಚನಕಾರಿ' ಟ್ವೀಟ್ ಮಾಡಿದೆ. ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಿಸುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸೋತಿದೆ ಎಂದು ಆರೋಪಿಸಿರುವ ಕರ್ನಾಟಕ ಕಾಂಗ್ರೆಸ್, ಪ್ರಯಾಣಿಕರ ಪರದಾಟ ಸರ್ಕಾರಕ್ಕೆ ಕಾಣಿಸದಂತಾಗಿದೆ ಎಂದು ಟ್ವೀಟ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಅನನುಭವಿ ಖಾಸಗಿ ಚಾಲಕರು ಸರ್ಕಾರಿ ಬಸ್ಗಳನ್ನು ಓಡಿಸಲು ಪೀಕಲಾಟ ಪಡುತ್ತಿದ್ದಾರೆ. ಸರ್ಕಾರದ ಮೊಂಡು ಹಠದಿಂದ ಇದೆಲ್ಲವೂ ಆಗುತ್ತಿದೆ. ಖಾಸಗಿ ಬಸ್ ಮಾಲೀಕರ ನಿರಾಕರಣೆಯಿಂದ ಸರ್ಕಾರ ಪ್ರಯಾಣಿಕರಿಗೆ ಮತ್ತಷ್ಟು ಸಂಕಷ್ಟ ಆಗುತ್ತಿದೆ ಎಂದು ಆರೋಪಿಸಿದೆ.
ಬಗೆಹರಿಯದ ಬಿಕ್ಕಟ್ಟು; ಸಾರಿಗೆ ನೌಕರರ ಮುಷ್ಕರ 3ನೇ ದಿನಕ್ಕೆ
ಜೊತೆಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೇ, ಬಿಕ್ಕಟ್ಟುಗಳನ್ನ ನಿರ್ವಹಿಸುವುದೆಂದರೆ ಸದನದಲ್ಲಿ ಕೂತು ಮೊಬೈಲ್'ನಲ್ಲಿ "ರೋಮಾಂಚನದ" ಚಿತ್ರ ವೀಕ್ಷಿಸಿದಂತಲ್ಲ ಎಂದು ರಾಜ್ಯ ಕಾಂಗ್ರೆಸ್ ಟ್ವಿಟೇಟು ಕೊಟ್ಟಿದೆ. ಆ ಮೂಲಕ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ವಿಧಾನಸಭೆಯಲ್ಲಿ ನೀಲಿ ಚಲನಚಿತ್ರ ವೀಕ್ಷಿಸಿ ಸಚಿವ ಸ್ಥಾನಕ್ಕೆ ಲಕ್ಷ್ಮಣ ಸವದಿ ಅವರು ರಾಜೀನಾಮೆ ಕೊಟ್ಟಿದ್ದ ಪ್ರಸಂಗವನ್ನು ಉಲ್ಲೇಖಿಸಿ ಲೇವಡಿ ಮಾಡಿದೆ.