ಹಣ ಹಂಚಿ ವೋಟು ಕೊಳ್ಳಲು ಕಾಂಗ್ರೆಸ್ ತಯಾರಿ: ಎಚ್ಡಿಕೆ ಆರೋಪ
ಬೆಂಗಳೂರು, ಮಾರ್ಚ್ 28: ಕಾಂಗ್ರೆಸ್ ಪಕ್ಷವು ಹಣದ ಬಲದಿಂದ ಈ ಬಾರಿಯ ಚುನಾವಣೆಯನ್ನು ಗೆಲ್ಲಲು ತಯಾರಿ ನಡೆಸಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು 2013 ರ ಚುನಾವಣೆಯಲ್ಲಿಯೂ ಹಣದ ಬಲದಿಂದಲೇ ಚುನಾವಣೆ ಗೆದ್ದಿತ್ತು, ಈಗಲೂ ಸಹ ಮತವೊಂದಕ್ಕೆ 500-1000 ರೂಪಾಯಿಗಳನ್ನು ಹಂಚಲು ಯೋಜನೆ ರೂಪಿಸಿದೆ ಎಂದು ಆರೋಪ ಮಾಡಿದರು.
ಚುನಾವಣಾ ಆಯೋಗದ ವಿರುದ್ಧ ಕೆಂಡಕಾರಿದ ಕುಮಾರಸ್ವಾಮಿ
ಕಾಂಗ್ರೆಸ್ ಪಕ್ಷದ ಚುನಾವಣಾ ಅಕ್ರಮಗಳ ಮೇಲೆ ಆಯೋಗ ವಿಶೇಷವಾದ ನಿಗಾ ಇಡಬೇಕು ಎಂದು ಮಾಧ್ಯಮಗಳ ಮೂಲಕ ಒತ್ತಾಯಿಸಿದ ಅವರು, ಕಾಂಗ್ರೆಸ್ ಪಕ್ಷವು ಉಪಚುನಾವಣೆಯನ್ನು ಸಹ ಹಣದ ಬಲದಿಂದಲೇ ಗೆದ್ದಿದೆ ಎಂದು ಆರೋಪಿಸಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ಜನರ ಕಷ್ಟಗಳಿಗೆ ಸ್ಪಂದಿಸಲು ವಿಫಲವಾಗಿದ್ದು, ಜನ ಜೆಡಿಎಸ್ ಕಡೆಗೆ ಒಲವು ಹೊಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಅತ್ಯುತ್ತಮ ಪ್ರದರ್ಶನ ತೋರಲಿದೆ ಎಂದ ಅವರು 126 ಸೀಟುಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ ಎಂದರು.