ಕಾಂಗ್ರೆಸ್ನವರು ನನ್ನನ್ನು ಗುಲಾಮನಂತೆ ನೋಡಿಕೊಂಡರು: ಎಚ್. ಡಿ. ಕುಮಾರಸ್ವಾಮಿ
Recommended Video
ಬೆಂಗಳೂರು, ಆಗಸ್ಟ್ 6: "ಎಲ್ಲ ಶಾಸಕರಿಗೂ ಪೂರ್ತಿ ಸ್ವಾತಂತ್ರ್ಯ ನೀಡಿದ್ದೆ. ನಿಗಮ- ಮಂಡಳಿಗಳ ಅಧ್ಯಕ್ಷರಿಗೂ ಅದೇ ರೀತಿ ಸ್ವಾತಂತ್ರ್ಯ ಇತ್ತು. ಅವರು ಯಾಕೆ ನನ್ನನ್ನು ನಿಂದಿಸುತ್ತಿದ್ದಾರೋ ಗೊತ್ತಿಲ್ಲ. ಕಳೆದ ಹದಿನಾಲ್ಕು ತಿಂಗಳಲ್ಲಿ ಈ ಎಲ್ಲ ಶಾಸಕರ ಹಾಗೂ ನಮ್ಮ ಮೈತ್ರಿ ಪಕ್ಷದ (ಕಾಂಗ್ರೆಸ್) ಗುಲಾಮನ ಥರ ಕೆಲಸ ಮಾಡಿದ್ದೀನಿ. ಏತಕ್ಕಾಗಿ ನನ್ನನ್ನು ನಿಂದಿಸುತ್ತಿದ್ದಾರೆ? ನನಗೆ ಗೊತ್ತಿಲ್ಲ,"
- ಹೀಗೆ ಎಎನ್ ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡುತ್ತಾ ತಮ್ಮ ಮನದ ನೋವನ್ನು ಹೇಳಿಕೊಂಡಿದ್ದಾರೆ ಮಾಜಿ ಮುಖ್ಯಮಂತ್ರಿ- ಜೆಡಿಎಸ್ ಮುಖಂಡ ಎಚ್. ಡಿ. ಕುಮಾರಸ್ವಾಮಿ. ಬಹುಮತ ಕಳೆದುಕೊಂಡ ಕೆಲವು ದಿನಗಳ ನಂತರ, ಸೋಮವಾರದಂದು ಸುದ್ದಿ ಸಂಸ್ಥೆ ಜತೆಗೆ ಮಾತನಾಡಿ, ಕರ್ನಾಟಕದಲ್ಲಿ ನನ್ನ ಅಧಿಕಾರಾವಧಿಯಲ್ಲಿ 'ಗುಲಾಮ'ನ ರೀತಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
"ನಂಗೆ ಕಲ್ಲಿನ ಮೇಲೆ ಹೆಸರು ಕೆತ್ತಿಸಿಕೊಳ್ಳೋ ಆಸೆಯಿಲ್ಲ"; ಎಚ್.ಡಿ.ಕುಮಾರಸ್ವಾಮಿ
ಹದಿನಾಲ್ಕು ತಿಂಗಳ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ವಿಶ್ವಾಸ ಮತ ಸಾಬೀತು ಪಡಿಸಲು ಸಾಧ್ಯವಾಗದೆ ಅಧಿಕಾರ ಕಳೆದುಕೊಂಡರು. ಆ ನಂತರ ಜುಲೈ ಇಪ್ಪತ್ತಾರನೇ ತಾರೀಕಿನಂದು ಬಿ. ಎಸ್. ಯಡಿಯೂರಪ್ಪ ಅವರು ಕರ್ನಾಟಕದ ಇಪ್ಪತ್ತೈದನೇ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದರು.
ಸ್ಥಳೀಯ ನಾಯಕರಿಗೆ ಮೈತ್ರಿಯಲ್ಲಿ ಆಸಕ್ತಿ ಇರಲಿಲ್ಲ
"ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದ ಮೇಲೆ ಕಾಂಗ್ರೆಸ್ ನ ಕೇಂದ್ರ ನಾಯಕತ್ವದಿಂದ ಪೂರ್ಣ ಮನಸ್ಸಿನಿಂದ ಜೆಡಿಎಸ್ ಜತೆಗೆ ಕೈ ಜೋಡಿಸಲು ಮುಂದಾದರು. ಅವರು ಮೈತ್ರಿ ಸರಕಾರ ರಚಿಸಲು ಬಯಸಿದ್ದರು. ಆದರೆ ನನಗಿರುವ ಮೂಲಗಳ ಪ್ರಕಾರ, ಕಾಂಗ್ರೆಸ್ ನ ಕೆಲವು ಸ್ಥಳೀಯ ನಾಯಕರಿಗೆ ಮೈತ್ರಿಯಲ್ಲಿ ಆಸಕ್ತಿ ಇರಲಿಲ್ಲ" ಎಂದು ಹೇಳಿದ್ದಾರೆ.
ಮೈತ್ರಿ ಸರಕಾರದ ಮೊದಲನೇ ದಿನದಿಂದ ಅಸಮಾಧಾನ
"ಮೈತ್ರಿ ಸರಕಾರ ರಚನೆಯಾದ ಮೊದಲನೇ ದಿನದಿಂದ ಕಾಂಗ್ರೆಸ್ ನ ಒಂದು ವರ್ಗದವರ ನಡವಳಿಕೆ ಹಾಗೂ ಸಾರ್ವಜನಿಕವಾಗಿ ಅವರ ಪ್ರತಿಕ್ರಿಯೆ ಎಲ್ಲರಿಗೂ ಗೊತ್ತಿದೆ" ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಇನ್ನು ಜೆಡಿಎಸ್ ಶಾಸಕರ ಕ್ಷೇತ್ರಗಳಿಗಿಂತ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿದ್ದೇನೆ ಎಂದು ಸಮರ್ಥನೆ ನೀಡಿದ್ದಾರೆ.
ಹತ್ತೊಂಬತ್ತು ಸಾವಿರ ಕೋಟಿ ವಿತರಿಸಿದ್ದೇನೆ
"ಇನ್ನು ಎಷ್ಟೋ ಸಲ ಪೂರ್ವ ನಿಗದಿ ಆಗದೆ ಭೇಟಿಗೆ ಬಂದ ಶಾಸಕರನ್ನು ಭೇಟಿ ಮಾಡಿದ್ದೇನೆ. ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಏನೆಲ್ಲ ಬೇಡಿಕೆಗಳನ್ನು ತರುತ್ತಿದ್ದರೋ ಆ ಬಗ್ಗೆ ತಕ್ಷಣವೇ ನಿರ್ಧಾರ ಕೈಗೊಂಡಿದ್ದೇನೆ. ಈ ಹಿಂದಿನ ಕಾಂಗ್ರೆಸ್ ಸರಕಾರ ಸಾಧಿಸಲು ಸಾಧ್ಯವಾಗದ್ದನ್ನು ನಾನು ಕೇವಲ ಹದಿನಾಲ್ಕು ತಿಂಗಳಲ್ಲಿ ಸಾಧಿಸಿದ್ದೇನೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಹದಿನಾಲ್ಕು ತಿಂಗಳಲ್ಲಿ ಹತ್ತೊಂಬತ್ತು ಸಾವಿರ ಕೋಟಿ ವಿತರಿಸಿದ್ದೇನೆ" ಎಂದಿದ್ದಾರೆ.
ಜೆಡಿಎಸ್ ನಾಯಕರಲ್ಲೂ ಅಸಮಾಧಾನ ಇತ್ತು
"ನಮ್ಮ್ ಪಕ್ಷದ ಕೆಲವು ನಾಯಕರಿಗೆ ಮೈತ್ರಿ ಸರಕಾರದ ಬಗ್ಗೆ ಅಸಮಾಧಾನ ಇತ್ತು. ಆದರೆ ಕಾಂಗ್ರೆಸ್ ನ ನೆರವಿನೊಂದಿಗೆ ಸರಕಾರ ರಚಿಸಿದೆ. ಅವರಿಗೆ ವ್ಯವಸ್ಥೆ ಬಗ್ಗೆ ಸಂತೋಷ ಇರಲಿಲ್ಲ. ಕಾಂಗ್ರೆಸ್ ನಮಗೆ ಹೇಗೆ ಹಿಂದಿನಿಂದ ದ್ರೋಹ ಮಾಡಬಹುದು ಎಂಬುದು ನಮ್ಮ ನಾಯಕರಿಗೆ ಗೊತ್ತಿತ್ತು" ಎಂದು ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ.
ಸಿಎಂ ಹುದ್ದೆಯಿಂದ ಕೆಳಗಿಳಿದ ಮೇಲೆ ಸಂತುಷ್ಟ ವ್ಯಕ್ತಿ
"ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿದ ಮೇಲೆ ಅತ್ಯಂತ ಸಂತುಷ್ಟ ವ್ಯಕ್ತಿ ನಾನು. ಹದಿನಾಲ್ಕು ತಿಂಗಳ ಕಾಲ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. ನನ್ನ ಕೆಲಸವನ್ನು ಯಾರೂ ಗುರುತಿಸಲಿಲ್ಲ ಎಂಬ ಸಣ್ಣ ನೋವು ನನ್ನ ಹೃದಯದಲ್ಲಿ ಇದೆ. ನಮ್ಮ ಪಕ್ಷದ ಬಹುತೇಕರಿಗೆ ಭವಿಷ್ಯದಲ್ಲಿ ಕೂಡ ಕಾಂಗ್ರೆಸ್ ಜತೆಗಿನ ಮೈತ್ರಿಯಲ್ಲಿ ಆಸಕ್ತಿ ಇಲ್ಲ. ಆದರೆ ಕಾಂಗ್ರೆಸ್ ಹೈ ಕಮ್ಯಾಂಡ್ ಈಗಲೂ ನಮಗೆ ಬಹಳ ಸಹಕಾರಿಯಾಗಿದೆ. ಮುಂದೆ ಏನಾಗುತ್ತದೋ ನೋಡೋಣ" ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದ್ದಾರೆ.