ಗೊಂದಲದಲ್ಲಿ ಸಿದ್ದರಾಮಯ್ಯ: ಪ್ರಸಾದ್ ವಿರುದ್ದ, ಅಭ್ಯರ್ಥಿಗಾಗಿ ಸಮಿತಿ ರಚನೆ!
ನಂಜನಗೂಡು ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಿತಿಯೊಂದನ್ನು ರಚಿಸಿದ್ದಾರೆ.
ಬೆಂಗಳೂರು, ಜ 9: ಸಚಿವ ಸ್ಥಾನ ಹೋದ ನಂತರ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿರುವ ವಿ ಶ್ರೀನಿವಾಸ ಪ್ರಸಾದ್ ವಿರುದ್ದ ನಂಜನಗೂಡು ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಗೊಂದಲವಿದೆಯೇ?
ರಾಜಕೀಯದಲ್ಲಿ ಅಪರೂಪ ಎನ್ನುವಂತೆ ಒಂದು ಕ್ಷೇತ್ರದ ಅಭ್ಯರ್ಥಿಗಾಗಿ ಕಾಂಗ್ರೆಸ್ ಸಮಿತಿಯೊಂದನ್ನು ರಚಿಸಿದ್ದನ್ನು ನೋಡಿದರೆ ಮೇಲಿನ ಪ್ರಶ್ನೆಗೆ ಉತ್ತರ ಹೌದು ಎನ್ನಬಹುದು. (ನೂರು ಶ್ರೀನಿವಾಸ ಪ್ರಸಾದ್ ಹುಟ್ಕೋತಾರೆ)
ನಂಜನಗೂಡು ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಪಕ್ಷ, ಸೂಕ್ತ ಅಭ್ಯರ್ಥಿಗಾಗಿ ಎಲ್ ಹನುಮಂತಯ್ಯ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ಸಮಿತಿಯ ವರದಿಯನ್ನಾಧರಿಸಿ ಅಭ್ಯರ್ಥಿ ಹೆಸರು ಅಂತಿಮಗೊಳಿಸಲು ನಿರ್ಧರಿಸಿದೆ.
ಸಚಿವ ಸ್ಥಾನ ಕೈತಪ್ಪಿದ ನಂತರ ಸಿಎಂ ಸಿದ್ದರಾಮಯ್ಯನವರ ವಿರುದ್ದ ಸಮರ ಸಾರಿರುವ ನಂಜನಗೂಡು ಭಾಗದ ಪ್ರಭಾವಿ ಮುಖಂಡ ವಿ ಶ್ರೀನಿವಾಸ ಪ್ರಸಾದ್, ಬಿಜೆಪಿ ಟಿಕೆಟಿನಿಂದ ಉಪಚುನಾವಣೆಯಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ.
ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಖುದ್ದು ಮುತುವರ್ಜಿ ವಹಿಸಿರುವ ಸಿಎಂ ಸಿದ್ದರಾಮಯ್ಯ, ಹನುಮಂತಯ್ಯನವರ ಸಮಿತಿ ಯಾರನ್ನು ಶಿಫಾರಸು ಮಾಡುತ್ತಾರೋ ಅವರಿಗೆ ಕಾಂಗ್ರೆಸ್ ಪಕ್ಷದ ಬಿಫಾರಂ ನೀಡಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ. ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳು ಮುಂದೆ ಓದಿ..
ಎ ಆರ್ ಕೃಷ್ಣಮೂರ್ತಿ
ಬಿ ರಾಚಯ್ಯನವರ ಪುತ್ರ, ದಲಿತ ಸಮುದಾಯದ ಎ ಆರ್ ಕೃಷ್ಣಮೂರ್ತಿಯವರನ್ನು ನಂಜನಗೂಡು ಕ್ಷೇತ್ರದಿಂದ ಕಣಕ್ಕಿಳಿಸಲು ಸಿದ್ದರಾಮಯ್ಯ ಮನಸ್ಸು ಮಾಡಿದ್ದರು. ಆದರೆ, ಕಾಂಗ್ರೆಸ್ ನಿಂದ ಸ್ಪರ್ಧಿಸಲು ಕೃಷ್ಣಮೂರ್ತಿ ನಿರಾಕರಿಸಿದ್ದರಿಂದ ಈ ಪ್ರಕ್ರಿಯೆಯನ್ನು ಸಿದ್ದು ಕೈಬಿಟ್ಟರು. ಸದ್ಯ ಕೃಷ್ಣಮೂರ್ತಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಸುನೀಲ್ ಭೋಸ್
ಸಿದ್ದರಾಮಯ್ಯ ಪರಮಾಪ್ತ ವಲಯದಲ್ಲಿ ಕಾಣಿಸಿಕೊಂಡಿರುವ ಸಚಿವ ಎಚ್ ಸಿ ಮಹಾದೇವಪ್ಪನವರ ಪುತ್ರ ಸುನೀಲ್ ಭೋಸ್, ನಂಜನಗೂಡು ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳಲ್ಲೊಬ್ಬರು. ಆದರೆ ಇಲ್ಲಿ ಸಮಸ್ಯೆ ಏನಂದರೆ, ಮುಖ್ಯಮಂತ್ರಿಗಳಿಗೆ ಭೋಸ್ ಅವರನ್ನು ಕಣಕ್ಕಿಳಿಸಲು ಪೂರ್ಣ ಪ್ರಮಾಣದ ಮನಸ್ಸು ಇದ್ದಂತಿಲ್ಲ ಎನ್ನಲಾಗುತ್ತಿದೆ.
ಕೇಶವಮೂರ್ತಿ
ಶ್ರೀನಿವಾಸ ಪ್ರಸಾದ್ ವಿರುದ್ದ ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಹುಡುಕಾಟದಲ್ಲಿರುವ ಕಾಂಗ್ರೆಸ್, ಜೆಡಿಎಸ್ ನಲ್ಲಿ ಗುರುತಿಸಿಕೊಂಡಿರುವ ಕನಳೆ ಕೇಶವಮೂರ್ತಿಯವರನ್ನು ಕಣಕ್ಕಿಳಿಸಲೂ ಚಿಂತನೆ ನಡೆಸಿದೆ. ಕಳೆದ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್, ಕೇಶವಮೂರ್ತಿಯವರನ್ನು ಸೋಲಿಸಿದ್ದರು.
ಬೈಎಲೆಕ್ಷನ್
ತಾಲೂಕು ಪಂಚಾಯತಿ ಅಧ್ಯಕ್ಷ ನಾಗೇಶ ರಾಜು ಅವರ ಹೆಸರೂ ಕೇಳಿ ಬರುತ್ತಿದೆ. ಇವೆಲ್ಲವನ್ನೂ ಬಿಟ್ಟು, ಹನುಮಂತಯ್ಯ ಸಮಿತಿ ಬೇರೆಯೇ ಹೆಸರನ್ನು ಶಿಫಾರಸು ಮಾಡಿದರೂ ಆಶ್ಚರ್ಯವಿಲ್ಲ.
ಪ್ರತಿಷ್ಠೆಯ ಉಪಸಮರ
ಕಾಂಗ್ರೆಸ್ ಮತ್ತು ಬಿಜೆಪಿಗೆ ನಂಜನಗೂಡು ಪ್ರತಿಷ್ಠೆಯ ಕ್ಷೇತ್ರ. ಐದು ರಾಜ್ಯಗಳ ಚುನಾವಣಾ ದಿನಾಂಕದ ಜೊತೆಗೆ ನಂಜನಗೂಡು ಕ್ಷೇತ್ರದ ದಿನಾಂಕ ಘೋಷಣೆಯಾಗಲಿದೆ ಎನ್ನಲಾಗುತ್ತಿತ್ತು. ಆದರೆ, ಚುನಾವಣಾ ಆಯೋಗ ನಂಜನಗೂಡು ಪ್ರತಿಷ್ಠೆಯ ಕ್ಷೇತ್ರಕ್ಕೆ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಿಲ್ಲ.