2 ದಿನದಲ್ಲಿ ಕೆಪಿಸಿಸಿ 'ಬಿಟ್ ಕಾಯಿನ್' ಪತ್ರಿಕಾಗೋಷ್ಠಿ: ಬಿಜೆಪಿ ವಿರುದ್ದ ಬಾಂಬ್
ಬೆಂಗಳೂರು, ನ 12: ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸುತ್ತಿರುವ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ, ಸಾಧ್ಯವಾದ ಎಲ್ಲಾ ಕಡೆಯಿಂದ ಮಾಹಿತಿ ಮತ್ತು ದಾಖಲೆಗಳನ್ನು ಪಡೆದುಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಮುಖಂಡರು, ಭಾನುವಾರದಂದು (ನ 14) ಪತ್ರಿಕಾಗೋಷ್ಠಿ ಕರೆದು, ಬಿಜೆಪಿ ವಿರುದ್ದ ಬಾಂಬ್ ಸಿಡಿಸಲು ಸಜ್ಜಾಗುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೆಹಲಿಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲು ಹೋಗಿದ್ದರು. ಆ ವೇಳೆ, ಬಿಟ್ ಕಾಯಿನ್ ವಿಚಾರ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು.
ಬಿಟ್ ಕಾಯಿನ್: ದಿನದಿಂದ ದಿನಕ್ಕೆ ಬಗೆದಷ್ಟು ಬಿಜೆಪಿ ಬುಡಕ್ಕೆ ಕೊಡಲಿ ಏಟು?
ಕಾಂಗ್ರೆಸ್ ಮುಖಂಡರು ಕೂಡಾ ಸಿಎಂ ಬೊಮ್ಮಾಯಿಯವರ ದೆಹಲಿ ಭೇಟಿಯಲ್ಲಿ ಏನಾಗಬಹುದೆಂದು ಉತ್ಸುಕದಿಂದ ಕಾಯುತ್ತಿದ್ದರು. ಆದರೆ, ಬಿಟ್ ಕಾಯಿನ್ ವಿಚಾರದ ಬಗ್ಗೆ ಬಿಜೆಪಿಯ ಕೇಂದ್ರ ನಾಯಕರು ಹೆಚ್ಚು ತಲೆಕೆಡಿಸಿಕೊಳ್ಳದೇ ಇರುವುದರಿಂದ ಕಾಂಗ್ರೆಸ್ ಈಗ ಆಖಾಡಕ್ಕೆ ಇಳಿಯಲು ಸಿದ್ದತೆಯನ್ನು ನಡೆಸಿದೆ.
ಸಿಎಂ ಬೊಮ್ಮಾಯಿ ಬದಲಾವಣೆ ಸುದ್ದಿ: ಬಿ.ವೈ.ವಿಜಯೇಂದ್ರ ಸ್ಪಷ್ಟನೆ
"ಬಿಟ್ ಕಾಯಿನ್ ವಿಚಾರವಾಗಿ ಪ್ರಧಾನಿ ಹೆಚ್ಚು ಮಾತನಾಡಲು ಇಷ್ಟ ಪಡಲಿಲ್ಲ. ಆದರೆ ನಾನೇ ಪ್ರಧಾನಿಗಳಿಗೆ ಈ ವಿಚಾರ ತಿಳಿಸಿದೆ. ಆಗ ಅವರು ಬಿಟ್ ಕಾಯಿನ್ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ಜನಪರ ಕೆಲಸ ಮಾಡಿ. ಸೋಲು ಗೆಲುವು ಇದ್ದೇ ಇರುತ್ತದೆ. ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಎಂದು ಪ್ರಧಾನಿ ಮೋದಿ ನನಗೆ ಹೇಳಿದ್ದಾರೆ" ಎಂದು ಸಿಎಂ ಬೊಮ್ಮಾಯಿ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದರು.
ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆ
ಸಿಎಂ ದೆಹಲಿ ಪ್ರವಾಸಕ್ಕೆ ಒಂದು ದಿನ ಮುನ್ನ ಕಲಬುರಗಿಯಲ್ಲಿ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. "ಬಿಟ್ ಕಾಯಿನ್ ಪ್ರಕರಣ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಬಲಿ ಪಡೆಯಲಿದೆ. ಹೀಗಾಗಿ ಈ ಬಾರಿಯ ಕೂಡ ಬಿಜೆಪಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳಾಗುತ್ತಾರೆ. ಬಿಜೆಪಿಯ ಪ್ರಮುಖರು ಬಿಟ್ ಕಾಯಿನ್ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಅದು ಸರ್ಕಾರಕ್ಕೆ ಕಂಟಕವಾಗಲಿದೆ" ಎನ್ನುವ ಗಂಭೀರ ಆರೋಪವನ್ನು ಖರ್ಗೆ ಮಾಡಿದ್ದರು.
ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬಿಟ್ ಕಾಯಿನ್ ವಿಚಾರದಲ್ಲಿ ಸರಕಾರವೇ ಎಲ್ಲಾ ಮಾಹಿತಿಯನ್ನು ನೀಡಲಿ, ತಪ್ಪಿತಸ್ಥರು ಕಾಂಗ್ರೆಸ್ಸಿನವರಾದರೂ ಚಿಂತೆಯಿಲ್ಲ, ಕ್ರಮ ತೆಗೆದುಕೊಳ್ಳಿ ಎಂದು ಇಷ್ಟು ದಿನ ಆಗ್ರಹಿಸುತ್ತಿದ್ದ ಕಾಂಗ್ರೆಸ್ ನಾಯಕರು, ಈಗ ತಾವೇ ತಮಗಿರುವ ಮಾಹಿತಿಯನ್ನು ಜನರು ಮುಂದೆ ಇಡಲು ತೀರ್ಮಾನಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾಹಿತಿ ಸಂಗ್ರಹಿಸುವಲ್ಲಿ ತೊಡಗಿದ್ದಾರೆ ಎನ್ನುವ ಮಾಹಿತಿ, ಒಂದು ವಾರದಿಂದ ಕೇಳಿ ಬರುತ್ತಿತ್ತು.
ಭಾನುವಾರ ವಿಶೇಷ ಪತ್ರಿಕಾಗೋಷ್ಠಿ ಕರೆಯಲು ಕಾಂಗ್ರೆಸ್ ನಿರ್ಧಾರ
ಈ ಸಂಬಂಧ ಇದೇ ಭಾನುವಾರ ವಿಶೇಷ ಪತ್ರಿಕಾಗೋಷ್ಠಿ ಕರೆಯಲು ಕಾಂಗ್ರೆಸ್ ನಿರ್ಧರಿಸಿದೆ. ಇದರಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಲ್ಲದೇ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರೂ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಷದ ಸದಸ್ಯತ್ವ ನೊಂದಾಣಿಯಲ್ಲಿ ಭಾಗವಹಿಸಲು ಬರುತ್ತಿರುವ ಸುರ್ಜೇವಾಲಾ ಅವರು ಬಿಜೆಪಿ ವಿರುದ್ದ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬಳಿಯಿರುವ ದಾಖಲೆಗಳು ಅಂದು ಬಹಿರಂಗಗೊಳ್ಳುವ ಸಾಧ್ಯತೆಯಿದೆ.
ಬಿಟ್ ಕಾಯಿನ್ ಸಂಬಂಧ ಇಂಚಿಂಚು ಮಾಹಿತಿ ಸಿದ್ದರಾಮಯ್ಯನವರಿಗೆ ಲಭ್ಯ
ಬಿಟ್ ಕಾಯಿನ್ ಸಂಬಂಧ ಇಂಚಿಂಚು ಮಾಹಿತಿ ಸಿದ್ದರಾಮಯ್ಯನವರಿಗೆ ಲಭ್ಯವಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿರುವ ಹೊತ್ತಿನಲ್ಲಿ ಕೆಪಿಸಿಸಿ ಪತ್ರಿಕಾಗೋಷ್ಠಿ ಕುತೂಹಲಕ್ಕೆ ಕಾರಣವಾಗಿದೆ. "ಬಿಟ್ ಕಾಯಿನ್ ಹಗರಣದಲ್ಲಿ ಯಾರೇ ಭಾಗಿಯಾಗಿರಲಿ ಅದು ಬಿಜೆಪಿ ಅವರೇ ಆಗಿರಲಿ, ಕಾಂಗ್ರೆಸ್ ಅವರೇ ಅಗಲಿ ಮೊದಲು ಬುಕ್ ಮಾಡಲಿ. ಹೆಸರು ಹೇಳಲಿ, ರಾಜ್ಯ ಮತ್ತು ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಎಸ್ಕೇಪ್ ಆಗಲು ಏನೇನೋ ಹೇಳಿಕೆ ನೀಡಬಾರದು. ಹೆಸರು ಹೇಳಲು ಆಗಿಲ್ಲ ಎಂದರೆ ಬಿಟ್ಟು ಕೊಡಲಿ, ನಾವು ನೋಡಿಕೊಳ್ಳುತ್ತೇವೆ, ಯಾಕೋ ಸಿಎಂ ಮೇಲೆ ಅನುಮಾನ ಬರುತ್ತಿದೆ"ಎಂದು ಸಿದ್ದರಾಮಯ್ಯ ಹೇಳಿದ್ದರು.