ಜನಾದೇಶ ಗೌರವಿಸದ ಬಿಜೆಪಿ: ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು, ಮೇ 30: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ಸತತ ಪ್ರಯತ್ನವನ್ನು ನಡೆಸುತ್ತಲೇ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿರುವ ಶಾಸಕರು ಬಿಜೆಪಿ ಸೇರುತ್ತಾರೆ. ಹೀಗಾಗಿ ಸರ್ಕಾರ ಉರುಳುತ್ತದೆ ಎಂದು ಬಿಜೆಪಿಯವರು ಹೇಳುತ್ತಲೇ ಬಂದಿದ್ದಾರೆ. ಜತೆಗೆ ಶಾಸಕರಿಗೆ ಹಣದ ಆಮಿಷವೊಡ್ಡವುದು, ಬೆದರಿಕೆ ಹಾಕುವುದು ಮುಂತಾದ ಸಂವಿಧಾನ ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಒಂದು ವರ್ಷದಿಂದ ವಿರೋಧಪಕ್ಷದ ಸ್ಥಾನದಲ್ಲಿ ನಿಂತು ಮಾಡಬೇಕಾದ ಕೆಲಸ ಮಾಡುವುದನ್ನು ಬಿಟ್ಟು ಬಿಜೆಪಿಯವರು ಸರ್ಕಾರ ಪತನಗೊಳಿಸುವ ಪ್ರಯತ್ನದಲ್ಲಿಯೇ ಇದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅಧಿಕಾರ ತ್ಯಾಗಕ್ಕೆ ಒಪ್ಪದ ಸಚಿವರು, ಇಕ್ಕಟ್ಟಿನಲ್ಲಿ ಮೈತ್ರಿ ಸರ್ಕಾರ
ಯಡಿಯೂರಪ್ಪ ಅವರಿಗೆ ಅವಕಾಶ ನೀಡಿದ್ದರೂ, ತಮ್ಮ ಬಹುಮತ ಸಾಬೀತುಪಡಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಈಗ ವಿರೋಧಪಕ್ಷದಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಬಿಟ್ಟು ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ಸರ್ಕಾರದ ಹಿಂದಿನ ಎಲ್ಲ ಯೋಜನೆಗಳೂ ಈಗ ಕೂಡ ಮುಂದುವರಿಯುತ್ತಿವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಏನು ಮಾಡುತ್ತದೆ ಎಂಬುದನ್ನು ಈ ಹಿಂದೆಯೇ ನೋಡಿದ್ದೇವೆ ಎಂದು ಅವರು ಸರಣಿ ಟ್ವೀಟ್ಗಳಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ.
ಅವರು ಮಾಡಿರುವ ಸರಣಿ ಟ್ವೀಟ್ಗಳು ಇಲ್ಲಿವೆ...
|
ಜನಾದೇಶವನ್ನು ತಿರಸ್ಕರಿಸಿದಂತೆ
ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಜನತೆ ನೀಡಿದ ತೀರ್ಪನ್ನು ನಾವು ತಲೆಬಾಗಿ ಒಪ್ಪಿಕೊಂಡಿದ್ದೇವೆ. ಆದರೆ ರಾಜ್ಯ ಬಿಜೆಪಿ ನಾಯಕರು ತಮಗೆ ಬಹುಮತವಿಲ್ಲದಿದ್ದರೂ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಅಧಿಕಾರದ ಗದ್ದುಗೆ ಏರುವ ಪ್ರಯತ್ನವನ್ನು ಮಾತ್ರ ಇಂದಿಗೂ ಕೈಬಿಟ್ಟಿಲ್ಲ. ಇದು ನಾಡಿನ ಜನಾದೇಶವನ್ನು ತಿರಸ್ಕರಿಸಿದಂತಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
|
ಸರ್ಕಾರ ಬೀಳಿಸುವುದರಲ್ಲೇ ಮಗ್ನ
ಸಮ್ಮಿಶ್ರ ಸರ್ಕಾರ ರಚನೆ ಆದ ದಿನದಿಂದ ಇಂದಿನವರೆಗೂ ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡದೆ ಕೇವಲ ಸರ್ಕಾರ ಬೀಳಿಸುವುದರಲ್ಲೇ ಮಗ್ನವಾಗಿದೆ. ಕಾಂಗ್ರೆಸ್ ಶಾಸಕರು ನಮ್ಮ ಜೊತೆಯಿದ್ದಾರೆ, ಕೆಲವು ಜೆಡಿಎಸ್ ಶಾಸಕರು ಬಿಜೆಪಿ ಸೇರುತ್ತಾರೆ, ನಾಳೆ ಸರ್ಕಾರ ಬೀಳಲಿದೆ, ತಿಂಗಳ ಅಂತ್ಯಕ್ಕೆ ಸರ್ಕಾರ ಬೀಳಲಿದೆ ಎಂದು ಬಿಜೆಪಿಯವರು ಹೇಳುತ್ತಲೇ ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಿರ್ದಯ ರಾಜಕಾರಣಕ್ಕೆ ಚಡಪಡಿಸುತ್ತಿದ್ದ ಅಂಬಿ: ಸಿದ್ದರಾಮಯ್ಯ ಒಗಟು ಟ್ವೀಟ್
|
ಸರ್ಕಾರ ಬೀಳಿಸುವುದೊಂದೆ ಪರಿಹಾರವಲ್ಲ
ಶಾಸಕರಿಗೆ ಹಣದ ಆಮಿಷವೊಡ್ಡಿ, ಬೆದರಿಸಿ ಸರ್ಕಾರ ಸಮರ್ಪಕ ಆಡಳಿತ ನಡೆಸದಂತೆ ಅಸ್ಥಿರಗೊಳಿಸುವ ಪ್ರಯತ್ನ ನಡೆಸುವುದು ಸಂವಿಧಾನ ಬಾಹಿರವಲ್ಲವೇ? ರಾಜ್ಯದ ಜನತೆ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆಂದು ಭಾವಿಸಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆ ಎಂದ ಮೇಲೆ ಪಕ್ಷದೊಳಗೆ ಸಣ್ಣ ಪುಟ್ಟ ಮನಸ್ತಾಪಗಳಿರುತ್ತದೆ. ಸರ್ಕಾರ ಬೀಳಿಸುವುದೊಂದೇ ಪರಿಹಾರವಲ್ಲ ಎಂದಿದ್ದಾರೆ.
|
ಯಡಿಯೂರಪ್ಪ ಅವಕಾಶ ನೀಡಲಾಗಿತ್ತು
ಯಡಿಯೂರಪ್ಪನವರಿಗೆ ಈ ಹಿಂದೆಯೇ ಬಹುಮತ ಸಾಬೀತುಪಡಿಸಲು ಅವಕಾಶ ನೀಡಲಾಗಿತ್ತು, ಆದರೆ ಬಹುಮತ ಸಾಬೀತು ಮಾಡಲಾಗದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ನಂತರದಲ್ಲಿ ಜನಾದೇಶವನ್ನು ಗೌರವಿಸಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡುವುದು ಬಿಟ್ಟು ಕುದುರೆ ವ್ಯಾಪಾರಕ್ಕೆ ನಿಂತಿರುವುದು ನಾಚಿಕೆಗೇಡಿನ ವಿಚಾರವಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಸಭೆ : ಮೂವರು ಶಾಸಕರು ಗೈರು!
|
ಬಿಜೆಪಿಯವರು ಮಾಡುವುದನ್ನು ಹಿಂದೆಯೂ ನೋಡಿದ್ದೇವೆ
ಅನ್ನಭಾಗ್ಯ, ಕೃಷಿಹೊಂಡ, ಕ್ಷೀರಭಾಗ್ಯ, ಕ್ಷೀರಧಾರೆ, ಪಶುಭಾಗ್ಯ ಹೀಗೆ ಹಿಂದಿನ ಸರ್ಕಾರದ ಎಲ್ಲಾ ಜನಪರ ಯೋಜನೆಗಳು ಈಗಲೂ ಮುಂದುವರೆಯುತ್ತಿದೆ. ಬಿಜೆಪಿ ಆಡಳಿತವಿರುವ ಬೇರೆ ರಾಜ್ಯಗಳಲ್ಲಿ ಈ ಯೋಜನೆಗಳೇಕೆ ಜಾರಿಯಾಗಿಲ್ಲ? ಇಲ್ಲಿ ಅಧಿಕಾರಕ್ಕೆ ಬಂದರೆ ಬಿಜೆಪಿಯವರು ಏನು ಮಾಡುತ್ತಾರೆ ಎಂದು ಹಿಂದೆಯೂ ನೋಡಿದ್ದೇವೆ, ಮತ್ತೆ ಅದನ್ನೇ ಮಾಡುತ್ತಾರಷ್ಟೆ ಎಂದು ಲೇವಡಿ ಮಾಡಿದ್ದಾರೆ.