ಸಿದ್ದರಾಮಯ್ಯ ವಿರುದ್ಧ ಕತ್ತಿ ಝಳಪಿಸುತ್ತಿದ್ದಾರೆ ಕಾಂಗ್ರೆಸ್ ಮುಖಂಡರು
ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರದ್ದು ಬಹು ವಿಶಿಷ್ಟ ಛಾಪು. ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದು. ಹಿರಿಯ ತಲೆಗಳೇ ತುಂಬಿದ್ದ ಪಕ್ಷದಲ್ಲಿ ನಾಯಕನಾಗಿ ಬೆಳೆದು ಸಿಎಂ ಕುರ್ಚಿ ಗಿಟ್ಟಿಸಿಕೊಂಡ ರಾಜಕೀಯ ಚಾಲಾಕಿ ಸಿದ್ದರಾಮಯ್ಯ.
ರಾಜ್ಯದೆಲ್ಲೆಡೆ ಅಹಿಂದ ಪಡೆಯನ್ನು ಕಟ್ಟಿ ಅಹಿಂದ ಸಮಾಜಕ್ಕೆ ಮುಖಂಡ ಎನಿಸಿಕೊಂಡು, ಮೇಲ್ವರ್ಗದ ತಲೆಯ ಮೇಲಿದ್ದ ರಾಜ್ಯ ನಾಯಕ ಪಟ್ಟವನ್ನು ಕಿತ್ತುಕೊಂಡವರು ಸಿದ್ದರಾಮಯ್ಯ. ಇಂತಿಪ್ಪ ಸಿದ್ದರಾಮಯ್ಯ ಅವರ ರಾಜಕೀಯ ಅವಸಾನದ ದಿನಗಳೇನಾದರೂ ಆರಂಭವಾಗುತ್ತಿವೆಯೇ ಎಂಬ ಅನುಮಾನ ಇತ್ತೀಚೆಗೆ ಮೂಡುತ್ತಿದೆ.
ಗೆದ್ದೇ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದ ವಿಧಾನಸಭೆ ಚುನಾವಣೆ ಸೋತ ಬಳಿಕ ಸಿದ್ದರಾಮಯ್ಯ ಅವರು ಮೂಲೆಗುಂಪಾಗುತ್ತಾರೆ ಎನ್ನಲಾಗಿತ್ತು. ಆದರೆ ಹೈಕಮಾಂಡ್ ಸಿದ್ದರಾಮಯ್ಯ ಅವರ ಕೈ ಹಿಡಿದು, ಅವರನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿಸಿತು. ಸರ್ಕಾರದ ಬಹು ಮುಖ್ಯ ಭಾಗವಾಗಿ ಸಿದ್ದರಾಮಯ್ಯ ಗುರುತಿಸಿಕೊಂಡರು.
ದರ್ಶನ್ ಸ್ಟೈಲ್ ನಲ್ಲಿ ಡೈಲಾಗ್ ಹೇಳಿದ ಸಿದ್ದರಾಮಯ್ಯ: ವಿರೋಧಿಗಳಿಗೆ ಎಚ್ಚರಿಕೆ!
ಕಾಂಗ್ರೆಸ್ ಹಲವು ಶಾಸಕರು, ಮಾಜಿ ಸಚಿವರು ಸಿದ್ದರಾಮಯ್ಯ ಅವರ ಬೆಂಬಲಿಗರಾಗಿದ್ದಾರೆ. ಸಿದ್ದರಾಮಯ್ಯ ಕಣ್ಸನ್ನೆ ಮಾಡಿದರೆ ಸರ್ಕಾರ ಉರುಳಿ ಹೋಗುತ್ತದೆ ಎಂಬ ಪರಿಸ್ಥಿತಿ ಇತ್ತು. ಆದರೆ ಈಗ ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿರುವುದು ಗೋಚರಿಸುತ್ತಿದೆ.
ಆದರೆ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸಿದ್ದರಾಮಯ್ಯ ಅವರ ಪ್ರಭಾವ ಇಳಿಜಾರಿನ ಕಡೆಗೆ ಸಾಗುತ್ತಿದೆ. ಅಲ್ಪಸಂಖ್ಯಾತರು ತಲೆಯ ಮೇಲೆ ಹೊರಿಸಿಕೊಂಡು ಮೆರೆಸಿದ್ದರು ಸಿದ್ದರಾಮಯ್ಯ ಅವರನ್ನು ಆದರೆ ಸಿದ್ದರಾಮಯ್ಯ ಸಮಕಾಲಿನವರಾದ ರೋಷನ್ ಬೇಗ್ ನೇರವಾಗಿ ಸಿದ್ದರಾಮಯ್ಯ ವಿರುದ್ಧವೇ ವಾಗ್ದಾಳಿ ಮಾಡಿದರು.
ರಮೇಶ್ ಜಾರಕಿಹೊಳಿ ಬಳಗ ಜೊತೆಗಿಲ್ಲ
ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಗಾಗಿ ಧರ್ಮಸ್ಥಳ ಸೇರಿದ್ದಾಗ ಹೆಲಿಕಾಪ್ಟರ್ನಲ್ಲಿ ಹುಡುಕಿಕೊಂಡು ಬಂದು ದಿನವೆಲ್ಲಾ ಇದ್ದು ಮಾತನಾಡಿಸಿ ಹೋಗಿದ್ದ ರಮೇಶ್ ಜಾರಕಿಹೊಳಿ ಮತ್ತು ಅವರ ಬೆಂಬಲಿತ ಶಾಸಕರು ಈಗ ಸಿದ್ದರಾಮಯ್ಯ ಅವರ ಫೋನಿಗೆ ಸಿಗುತ್ತಲೇ ಇಲ್ಲ. ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಸತೀಶ್ ಜಾರಕಿಹೊಳಿ, ಆನಂದ್ ಸಿಂಗ್, ನಾಗೇಂದ್ರ, ಮಹೇಶ್ ಕುಮಟಳ್ಳಿ ಇವರೆಲ್ಲಾ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು, ಆದರೆ ಈಗ ಪರಿಸ್ಥಿತಿ ಬದಲಾಗಿರುವುದು ಗೊತ್ತಾಗುತ್ತಿದೆ.
ಸಿಎಂ ಹುದ್ದೆಗೆ ಸಿದ್ದರಾಮಯ್ಯ ಸೂಚಿಸಿದ ಇಬ್ಬರು ನಾಯಕರು ಯಾರು?
ಕಾಂಗ್ರೆಸ್ ಹಿರಿ ತಲೆಗಳು ಸಿದ್ದರಾಮಯ್ಯ ವಿರುದ್ಧ
ಸಿದ್ದರಾಮಯ್ಯ ಅವರಿಗೆ ಪ್ರಮುಖ ಹಿನ್ನಡೆ ಆಗುತ್ತಿರುವುದು ಕಾಂಗ್ರೆಸ್ನ ಹಿರಿ ತಲೆಗಳಿಂದ. ಯಾರನ್ನೆಲ್ಲಾ ಬದಿಗೆ ಸರಿಸಿ ಕಾಂಗ್ರೆಸ್ನಲ್ಲಿ ಸ್ವಂತ ಬಲದಿಂದಲೇ ನಾಯಕ ಪಟ್ಟಕ್ಕೆ ಏರಿದ್ದರೋ ಆ ಬದಿಗೆ ಸರಿಸಲ್ಪಟ್ಟವರೆಲ್ಲಾ ಒಂದಾಗುವ ಲಕ್ಷಣಗಳು ಕಂಡು ಬರುತ್ತಿವೆ.
ವಲಸಿಗರ ಕಾಟ ಹೆಚ್ಚಾಗಿದೆ ಎಂದಿದ್ದ ರಾಮಲಿಂಗಾ ರೆಡ್ಡಿ
ರೋಷನ್ ಬೇಗ್ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಬಳಿಕ, ರಾಮಲಿಂಗಾ ರೆಡ್ಡಿ ಅವರು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಸಿದ್ದರಾಮಯ್ಯ ವಲಸಿಗರು ಎಂಬುದನ್ನು ಎತ್ತಿ ತೋರಿಸಿ, ವಲಸಿಗರ ಹಾವಳಿ ಹೆಚ್ಚಾಗಿದೆ ಎಂದು ಸಿದ್ದರಾಮಯ್ಯ ಅವರ ಆಟೋಪಾಟಕ್ಕೆ ಅಂತ್ಯ ಹಾಡಬೇಕು ಎಂದು ಸೂಚಿಸಿದ್ದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಗಟ್ಟಿ, ಬಿಜೆಪಿ ಲೆಕ್ಕಾಚಾರ ಬುಡಮೇಲು!
ಎಚ್.ಕೆ.ಪಾಟೀಲ್ ಅವರು ಸಹ ತಿರುಗಿಬಿದ್ದಿದ್ದಾರೆ
ರಾಮಲಿಂಗಾ ರೆಡ್ಡಿ ಅವರಿಗೆ ದನಿ ಗೂಡಿಸಿದ ಹಿರಿಯ ಕಾಂಗ್ರೆಸ್ಸಿಗ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು ಸಹ ಸಿದ್ದರಾಮಯ್ಯ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ತಮ್ಮ ಅಸಮಾಧಾನದ ಕಿಡಿ ಹೊರಹಾಕಿದ್ದರು. ಹಿರಿಯರೆಲ್ಲಾ ಒಗ್ಗಟ್ಟಾಗಿ ಹೈಕಮಾಂಡ್ ಅನ್ನು ಭೇಟಿ ಮಾಡಬೇಕು ಎಂದು ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ. ಅವರ ಉದ್ದೇಶ ಸ್ಪಷ್ಟ, ಹೈಕಮಾಂಡ್ಗೆ ಸಿದ್ದರಾಮಯ್ಯ ವಿರುದ್ಧ ದೂರು ನೀಡಬೇಕು ಅಷ್ಟೆ.
ಖರ್ಗೆ, ಪರಮೇಶ್ವರ್, ಸಿದ್ದರಾಮಯ್ಯ ಮಧ್ಯೆ ತಣ್ಣನೆಯ ವಾರ್
ಇನ್ನು ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಮಧ್ಯೆ ತಣ್ಣನೆಯ ರಾಜಕೀಯ ವೈಷಮ್ಯ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದಾಗಿನಿಂದಲೂ ನಡೆಯುತ್ತಲೇ ಇದೆ. ಅದು ಗೊತ್ತಿಲ್ಲದೇ ಇರುವಂತಹದ್ದುಲ್ಲ. ಇವರೆಲ್ಲಾ ಒಟ್ಟಾಗಿ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದರೆ ಸಿದ್ದರಾಮಯ್ಯ ರಾಜಕೀಯ ಅಂತ್ಯ ಕೊನೆಯಾದಂತೆಯೇ.
ಸಂಪುಟ ವಿಸ್ತರಣೆ ಯಾವಾಗ? ಸಿದ್ದರಾಮಯ್ಯ ಅವರದ್ದು ಒಂದೇ ಉತ್ತರ
ಸಿದ್ದರಾಮಯ್ಯ ಮುಂದಿನ ನಡೆ ಏನಾಗಿರುತ್ತದೆ?
ಆದರೆ ಸಿದ್ದರಾಮಯ್ಯ ಸಾಮಾನ್ಯ ರಾಜಕಾರಣಿಯಲ್ಲ. ದೇವೇಗೌಡ ಅವರ ಬಿಗಿ ಕಪಿಮುಷ್ಟಿಯಿದ್ದರೂ ಬೆರಳುಗಳ ಮಧ್ಯೆ ನುಣುಚಿಕೊಂಡು ರಾಜಕೀಯ ಗಮ್ಯ ತಲುಪಿದವರು ಅವರು. ಕಾಂಗ್ರೆಸ್ಗೆ ಸೇರಿದ ಮೇಲೆ ಅವರು ಕೆಲವರ ವಿಶ್ವಾಸಗಳಿಸಿದ್ದು, ಹಾದಿಗೆ ಅಡ್ಡವಾದವರನ್ನು ಬದಿಗೆ ಸರಿಸಿದ್ದೆಲ್ಲವನ್ನೂ ಗಮನಿಸಿದರೆ ಅವರ ಚಾಣಾಕ್ಷತನ ಅರ್ಥವಾದೀತು. ಸಿದ್ದರಾಮಯ್ಯ ಅವರು ಈಗ ತಮ್ಮೆದುರು ಇರುವ ಸವಾಲನ್ನು ಹೇಗೆ ಸ್ವೀಕರಿಸುತ್ತಾರೆ ಮತ್ತು ಹೇಗೆ ಹೊರಬರುತ್ತಾರೆ ಎಂದು ನೋಡಬೇಕಿದೆ.