ಎಐಸಿಸಿ ಪುನಾರಚನೆ: ಮಲ್ಲಿಕಾರ್ಜುನ್ ಖರ್ಗೆ ಹಿಂದಿಕ್ಕಿದ ಎಚ್.ಕೆ. ಪಾಟೀಲ್!
ಬೆಂಗಳೂರು, ಸೆ. 12: ಕಾಂಗ್ರೆಸ್ ಹೈಕಮಾಂಡ್ ಎಐಸಿಸಿ ಪುನಾರಚನೆ ಮಾಡುತ್ತಿದ್ದಂತೆಯೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿಯೂ ಮಹತ್ವದ ಬೆಳವಣಿಗೆಗಳಾಗಿವೆ. ಕಾಂಗ್ರೆಸ್ ಹೈಕಮಾಂಡ್ ಕೆಲವು ಅನಿರೀಕ್ಷಿತ ತೀರ್ಮಾನಗಳನ್ನು ಕೈಗೊಂಡಿದ್ದು, ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಮುಖಗಳಿಗೆ ಮನ್ನಣೆ ಕೊಟ್ಟಿದೆ. ಈ ಬದಲಾವಣೆಯಲ್ಲಿ ರಾಜ್ಯದ ಕೆಲ ಕಾಂಗ್ರೆಸ್ ಹಿರಿಯ ಮುಖಂಡರಿಗೆ ಹಿನ್ನಡೆಯಾಗಿದ್ದರೆ, ಮತ್ತೆ ಕೆಲವರಿಗೆ ಬಡ್ತಿ ಸಿಕ್ಕಿದೆ.
ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಎಐಸಿಸಿ ಹೊಸ ಜವಾಬ್ದಾರಿಯನ್ನು ಕೊಟ್ಟಿದೆ. ದಕ್ಷಿಣ ಭಾರತದ ಬಹುದೊಡ್ಡ ರಾಜ್ಯ ಮಹಾರಾಷ್ಟ್ರದ ಉಸ್ತುವಾರಿಯನ್ನು ಎಚ್.ಕೆ. ಪಾಟೀಲ್ ಅವರಿಗೆ ಎಐಸಿಸಿ ವಹಿಸಿದ್ದು, ಜೊತೆಗೆ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಖಾಯಂ ಆಹ್ವಾನಿತರ ಪಟ್ಟಿಗೆ ಅವರನ್ನು ಸೇರಿಸಲಾಗಿದೆ. ಇದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ದೊರೆತಿರುವ ಬಡ್ತಿ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಮಾಜಿ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಈ ವರಗೆ ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿದ್ದರು.
ಹಿರಿತನ ಬಳಸಿಕೊಂಡ ಎಐಸಿಸಿ
ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರ ಹಿರಿತನವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ. ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದಾಗ ಎಚ್.ಕೆ. ಪಾಟೀಲ್ ಅವರೂ ರೇಸ್ನಲ್ಲಿದ್ದರು. ಜೊತೆಗೆ ಎಚ್.ಕೆ. ಪಾಟೀಲ್ ಕುಟುಂಬ ತಮ್ಮ ತಂದೆಯ ಕಾಲದಿಂದಲೂ ಗಾಂಧಿ ಕುಟುಂಬದ ಒಡನಾಡಿಗಳು. ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಅವರ ಸೇವೆಯನ್ನು ಪಡೆದುಕೊಳ್ಳಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಉತ್ತರ ಕರ್ನಾಟಕ ಪ್ರಭಾವಿ ಕಾಂಗ್ರೆಸ್ ನಾಯಕರಾಗಿರುವುದರಿಂದ ಮಹಾರಾಷ್ಟ್ರದ ರಾಜಕಾರಣಿಗಳೊಂದಿಗೆ ಉತ್ತಮ ಬಾಂಧವ್ಯವಿದೆ. ಅದನ್ನೂ ಬಳಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದಂತಿದೆ. ಇಂಗ್ಲೀಷ್ ಹಾಗೂ ಹಿಂದಿ ಭಾಷೆಯ ಮೇಲಿನ ಹಿಡಿತ ಹಾಗೂ ಮರಾಠಿ ಭಾಷೆಯನ್ನು ಕೂಡ ಮಾತನಾಡುವುದು ಎಚ್.ಕೆ. ಪಾಟೀಲ್ ಅವರನ್ನು ಮಹಾರಾಷ್ಟ್ರ ಉಸ್ತುವಾರಿ ಮಾಡಲು ಪ್ರಮುಖ ಕಾರಣ ಎನ್ನಲಾಗಿದೆ.
ಕಾಂಗ್ರೆಸ್ನ ಗತವೈಭವ
ಇದೇ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರು, ಪಕ್ಷದ ಅಧಿನಾಯಕಿ, ಪಕ್ಷದ ಅಧ್ಯಕ್ಷಿಣಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ, ಕೃತಜ್ಞತೆ ಸಲ್ಲಿಸುವೆ. ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯತ್ವದ ಜೊತೆಗೆ ಮಹಾರಾಷ್ಟ್ರದ ಉಸ್ತುವಾರಿಯನ್ನೂ ನೀಡಿದ್ದಾರೆ. ಮಹಾರಾಷ್ಟ್ರ ಬಹುದೊಡ್ಡ ರಾಜ್ಯವಷ್ಟೇ ಅಲ್ಲ, ರಾಜಕೀಯವಾಗಿ ದೇಶದಲ್ಲೇ ಮಹತ್ವದ ರಾಜ್ಯ. ಮಹಾರಾಷ್ಟ್ರದಲ್ಲಿ ಈಗ ಸಾಕಷ್ಟು ಸವಾಲುಗಳಿವೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ನ ಗತವೈಭವ ಸ್ಥಾಪಿಸಲು ಯತ್ನಿಸುವೆ ಎಂದಿದ್ದಾರೆ.
ಹೊಸ ಜವಾಬ್ದಾರಿ
ಪಕ್ಷ ಗಟ್ಟಿಗೊಳಿಸಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಮಾರ್ಗದರ್ಶನ ನನಗೆ ಇರುತ್ತದೆ. ವೇಣುಗೋಪಾಲ್ ಅವರಿಗೂ ನನ್ನ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖರೆಲ್ಲರಿಗೂ ಕೃತಜ್ಞತೆ. ವೀರಪ್ಪ ಮೊಯ್ಲಿಯವರು ಮೊದಲು ನನ್ನನ್ನು ಮಂತ್ರಿ ಮಾಡಿದ್ದರು.
ಎಸ್ ಎಂ ಕೃಷ್ಣಾ ಅವರು ಮುಖ್ಯಮಂತ್ರಿ ಆಗಿದ್ದಾಗ ಜಲಸಂಪನ್ಮೂಲ ಸಚಿವನಾಗಿ ಕೆಲಸ ಮಾಡಿದ್ದೆ. ದಿ. ಧರಂಸಿಂಗ್ ಅವರು ಸಿಎಂ ಆಗಿದ್ದಾಗ ಕಾನೂನು ಮಂತ್ರಿ ಆಗಿ ಕೆಲಸ ಮಾಡಿದ್ದೆ. ಸಿದ್ದರಾಮಯ್ಯ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವನಾಗಿ ಕೆಲಸ ಮಾಡಿದ್ದೆ. ಈಗ ಹೊಸ ಜವಾಬ್ದಾರಿ ನೀಡಿದ್ದಾರೆ ಎಂದು ಎಚ್.ಕೆ. ಪಾಟೀಲ್ ಹೇಳಿದ್ದಾರೆ.
Recommended Video
ಮೂಲ ಕಾಂಗ್ರೆಸ್ಸಿಗ
ನಾನು ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಸೇರಿದವನು. ಪಕ್ಷದಲ್ಲಿ ಹಲವು ಸ್ಥಾನಮಾನಗಳನ್ನು ಪಡೆದಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರು ಮಹಾರಾಷ್ರದ ಉಸ್ತುವಾರಿಯಾಗಿದ್ದರು. ಅದರ ಪ್ರಯೋಜನ ನನಗೆ ಸಿಗಲಿದೆ. ಜೊತೆಗೆ ಅವರ ಮಾರ್ಗದರ್ಶನವೂ ನನಗೆ ಸಿಗಲಿದೆ ಎಂದು ಎಚ್ ಕೆ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.
ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರ ತಂದೆ ದಿ. ಕೆ.ಎಚ್. ಪಾಟೀಲ್ ಅವರೂ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದರು. ಮುಖ್ಯಮಂತ್ರಿ ಹುದ್ದೆಯ ಸನಿಹಕ್ಕೆ ಬಂದು ಸಿಎಂ ಆಗಿರಲಿಲ್ಲ. ಹೀಗಾಗಿ ಹಿಂದಿನಿಂದಲೂ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಮಾಜಿ ಸಚಿವ ಎಚ್.ಕೆ. ಪಾಟೀಲ್ ಕುಟುಂಬದ ಒಡನಾಟವಿದೆ. ಅದೂ ಹೊಸ ಹುದ್ದೆ ಕೊಡಲು ಪ್ರಮುಖ ಕಾರಣ ಎನ್ನಲಾಗಿದೆ.