ಸಂಪುಟ ವಿಸ್ತರಣೆ ಬಳಿಕ ಒಗ್ಗೂಡಿದ ಕಾಂಗ್ರೆಸ್ ಅತೃಪ್ತ ಶಾಸಕರು?
ಬೆಂಗಳೂರು, ಜೂನ್ 17 : ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಉಂಟಾಗಿದೆ. ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರು ಒಗ್ಗೂಡಲು ವೇದಿಕೆ ಸಿದ್ಧವಾಗುತ್ತಿದೆ. ಇದನ್ನು ಶಮನ ಮಾಡಲು ಕಾಂಗ್ರೆಸ್ ಸಂಪುಟ ಪುನಾರಚನೆ ಬಗ್ಗೆ ಚಿಂತನೆ ನಡೆಸುತ್ತಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಖಾಲಿ ಇದ್ದ ಮೂರು ಸ್ಥಾನಗಳ ಪೈಕಿ 2 ಸ್ಥಾನಗಳನ್ನು ಶುಕ್ರವಾರ ಭರ್ತಿ ಮಾಡಲಾಗಿದೆ. ಕಾಂಗ್ರೆಸ್ ಕೋಟಾದಲ್ಲಿ ಖಾಲಿ ಇದ್ದ ಒಂದು ಸ್ಥಾನವನ್ನು ಪಕ್ಷೇತರ ಶಾಸಕರಿಗೆ ನೀಡಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ.
ಉಲ್ಟಾ ಹೊಡೆದ ಮಹೇಶ್ ಕುಮಟಳ್ಳಿ, ತಣ್ಣಗಾಯಿತೆ ಅತೃಪ್ತರ ಬಂಡಾಯ?
ಕಾಂಗ್ರೆಸ್ ಪಕ್ಷದಲ್ಲಿ ಡಜನ್ಗೂ ಅಧಿಕ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಸಚಿವ ಸಂಪುಟ ಪುನಾರಚನೆಯಾದರೆ ಕೆಲವು ಶಾಸಕರಿಗೆ ಸಚಿವ ಸ್ಥಾನ ಸಿಗುತ್ತಿತ್ತು. ಆದರೆ, ಕಾಂಗ್ರೆಸ್ ಇದ್ದ ಒಂದು ಸಚಿವ ಸ್ಥಾನವನ್ನು ಪಕ್ಷೇತರ ಶಾಸಕರಿಗೆ ನೀಡಿ, ಸರ್ಕಾರ ಭದ್ರಪಡಿಸಿಕೊಳ್ಳುವ ಹೆಜ್ಜೆ ಇಟ್ಟಿದೆ.
ಸರ್ಕಾರದ ವಿರುದ್ಧ ಕೆಂಪು ಬಾವುಟ ಹಾರಿಸಿದ ಶಾಸಕ ಬಿ.ಸಿ.ಪಾಟೀಲ್
ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಡಾ. ಸುಧಾಕರ್ ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಮಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ ಹಾಗೂ ಅಥಣಿ ಶಾಸಕ ಮಹೇಶ್ ಕಮಟಳ್ಳಿ ಅವರು ಸಹ ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ.....
ಅಂದು ಸರ್ಕಾರಿ ನೌಕರ, ಇಂದು ಸಚಿವ : ಎಚ್.ನಾಗೇಶ್ ಪರಿಚಯ!
ರಮೇಶ್ ಜಾರಕಿಹೊಳಿ ಭೇಟಿ
ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಮಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ ಹಾಗೂ ಅಥಣಿ ಶಾಸಕ ಮಹೇಶ್ ಕಮಟಳ್ಳಿ ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಸುಧಾಕರ್ ಅವರು ಭೇಟಿಯಾಗಿ ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ರಮೇಶ್ ಜಾರಕಿಹೊಳಿ ಒಪ್ಪಲಿಲ್ಲ
ರಮೇಶ್ ಜಾರಕಿಹೊಳಿ ಅವರನ್ನು ಸಮಾಧಾನಪಡಿಸಲು ಅವರಿಗೆ ಸಚಿವ ಸ್ಥಾನದ ಆಫರ್ ನೀಡಲಾಗಿತ್ತು. ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಕೋಟಾದಲ್ಲಿ ಖಾಲಿ ಇರುವ ಸಚಿವ ಸ್ಥಾನವನ್ನು ನೀಡುವ ಭರವಸೆ ನೀಡಿದ್ದರು. ಆದರೆ, ರಮೇಶ್ ಜಾರಕಿಹೊಳಿ ಅವರು ಇದಕ್ಕೆ ಒಪ್ಪಿಗೆ ನೀಡಲಿಲ್ಲ.
ತಾಳ್ಮೆಯಿಂದ ಕಾಯಬೇಕು
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಈ ಕುರಿತು ಮಾತನಾಡಿದ್ದು, 'ಎಂಟು ತಿಂಗಳ ಬಳಿಕ ಸಂಪುಟ ಪುನಾರಚನೆಯಾಗಲಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ಅಲ್ಲಿಯ ತನಕ ತಾಳ್ಮೆಯಿಂದ ಕಾಯಬೇಕು' ಎಂದು ಹೇಳಿದ್ದಾರೆ.
ಬಿ.ಸಿ.ಪಾಟೀಲ್ ಹೇಳುವುದೇನು?
'ನಾನೇನು ಮಂತ್ರಿಗಿರಿ ಕೇಳಿರಲಿಲ್ಲ. ನೀನು ಬೇಡ ಅಂದರೂ ಲೋಕಸಭಾ ಚುನಾವಣೆ ಬಳಿಕ ನಿನ್ನನ್ನು ಮಂತ್ರಿ ಮಾಡ್ತಿನಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಚುನಾವಣೆ ಮುಗಿದ ಬಳಿಕ ಉಲ್ಟಾ ಹೊಡೆದಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ನನ್ನ ಜೊತೆ ಮಾತನಾಡುವ ನೈತಿಕತೆ ಉಳಿದಿಲ್ಲ' ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?
'ಸರ್ಕಾರ ಬೀಳಿಸುವ ಯತ್ನಕ್ಕೆ ನಾವಂತೂ ಕೈ ಹಾಕುವುದಿಲ್ಲ. ಅತೃಪ್ತರು ಅವರಾಗಿಯೇ ಬಂದರೆ ಸರ್ಕಾರ ರಚನೆ ಮಾಡಲು ಸಿದ್ಧ. ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರು ಪಕ್ಷಕ್ಕೆ ಬರುವುದಾದರೆ ಬರಲಿ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.