ಪರಮೇಶ್ವರ್, ಡಿ ಕೆ ಶಿವಕುಮಾರ್ ಹೆಲ್ಮೆಟ್ ಹಾಕೊಳ್ಳಿ ಸರ್.. ಹೆಲ್ಮೆಟ್
ಕುರುಡುಮಲೈ ಗಣೇಶನಿಗೆ ಅಡ್ಡಬಿದ್ದು ಕಾಂಗ್ರೆಸ್ ನಾಯಕರ ದಂಡು ಕೋಲಾರದಿಂದ 'ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ' ಯಾತ್ರೆ ಆರಂಭಿಸಿದೆ. ಇನ್ನೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ 'ನವಕರ್ನಾಟಕ ನಿರ್ಮಾಣ ಯಾತ್ರೆ' ಬೆಳಗಾವಿ ಜಿಲ್ಲೆಯಲ್ಲಿ ಸಾಗುತ್ತಿದೆ.
ಕೋಲಾರದಲ್ಲಿ ಆರಂಭವಾದ ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿ ಕೆ ಹರಿಪ್ರಸಾದ್ ಮುಂತಾದ ನಾಯಕರು ಸಾಥ್ ನೀಡಿದ್ದಾರೆ. ನಮ್ಮದೇ ಮೂಲ ಕಾಂಗ್ರೆಸ್ ಅಂತಾ .. ಯಾತ್ರೆಯಲ್ಲಿದ್ದ ಕಾರ್ಯಕರ್ತನೊಬ್ಬ ಹೇಳುತ್ತಿದ್ದನಂತೆ...
ಇರಲಿ.. ಏನಾದಾರೂ ಮಾಡ್ಕೊಳ್ಳಿ.. ವಿಚಾರಕ್ಕೆ ಬರುವುದಾದರೆ, ಈ ಹಿಂದೊಮ್ಮೆ 'ನಾನು ಹಿಂದೂ ಆಗಿ ಹುಟ್ಟಿದ್ದಕ್ಕೆ ಅವಮಾನವಾಗುತ್ತಿದೆ' ಎಂದಿದ್ದ ಪರಮೇಶ್ವರ್ ಅವರು, ಗಣೇಶನಿಗೆ ನಮಸ್ಕರಿಸಿ, ಬೈಕ್ ಜಾಥಾ ಮೂಲಕ ಮುಳಬಾಗಿಲು ಕಡೆ ತೆರಳಿದ್ದಾರೆ.
ವಿಚಾರ ಅದಲ್ಲಾ.. ಈ ಹಿಂದೆ ಗೃಹ ಸಚಿವರಾಗಿದ್ದ ಪರಮೇಶ್ವರ್, ತಮ್ಮದೇ ಸರಕಾರ ಫೆಬ್ರವರಿ 1, 2016ರಲ್ಲಿ ಜಾರಿಗೆ ತಂದ (ಸುಪ್ರೀಂಕೋರ್ಟ್ ಆದೇಶದ ಮೇರೆಗೆ) ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಬೈಕ್ ಜಾಥಾ ವೇಳೆ, ಬೈಕ್ ಓಡಿಸುವವರಾಗಲಿ, ಹಿಂದೆ ಕೂತ ಪರಮೇಶ್ವರ್ ಆಗಲಿ ಹೆಲ್ಮೆಟ್ ಹಾಕಿಕೊಂಡಿರಲಿಲ್ಲ..
ಜೊತೆಗೆ ಮತ್ತೊಂದು ಬೈಕನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಹಾಲೀ ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರೂ ಹೆಲ್ಮೆಟ್ ಹಾಕಿಕೊಳ್ಳದೇ ಗಾಡಿ ಚಲಾಯಿಸಿದ್ದಾರೆ. ಅವರ ಹಿಂದೆ ಕೂತವರದ್ದೂ ಅದೇ ಕಥೆ!
ಇಷ್ಟೂ ಸಾಲದು ಎನ್ನುವಂತೆ ಬೈಕ್ ಜಾಥಾದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಜೈಕಾರ ಹಾಕಿಕೊಂಡು ತೆರಳಿದ್ದ ಕಾಂಗ್ರೆಸ್ಸಿನ ಯಾವುದೇ ಕಾರ್ಯಕರ್ತ ಹೆಲ್ಮೆಟ್ ಹಾಕಿಕೊಳ್ಳದೇ ಸಾಗಿದ್ದಾರೆ. ಆ ಮೂಲಕ ಹೆಲ್ಮೆಟ್ ಕಂಪಲ್ಸರಿ ಎನ್ನುವ ಕಾನೂನಿನ ಬೇಲಿಯನ್ನು ತಾವೇ ಮುರಿದಿದ್ದಾರೆ.
ಬೈಕ್ ಸವಾರ ಮತ್ತು ಪಿಲ್ಲನ್ ರೈಡರ್ ಹೆಲ್ಮೆಟ್ ಹಾಕಿಕೊಳ್ಳಲೇ ಬೇಕೆಂಬ ಕಾನೂನನ್ನು ಹೋದ ವರ್ಷ ಫೆಬ್ರವರಿ ತಿಂಗಳಲ್ಲಿ ಸಿದ್ದರಾಮಯ್ಯ ಸರಕಾರ ಜಾರಿಗೆ ತಂದಿತ್ತು. ಈಗ ತಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಲ್ಮೆಟ್ ಹಾಕಿಕೊಳ್ಳದೇ ಕೋಲಾರ ಜಿಲ್ಲೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗಿದ್ದಾರಲ್ಲಾ ಇದಕ್ಕೆ ಏನನ್ನೋಣ?
ಇದೇ ಬಡಬಾಯಿ ಜನಸಾಮಾನ್ಯ ಹೆಲ್ಮೆಟ್ ಹಾಕಿಕೊಳ್ಳದೇ ಸವಾರಿ ಮಾಡಿದರೆ ಟ್ರಾಫಿಕ್ ಪೊಲೀಸರು ಸುಮ್ನನಿರುತ್ತಿದ್ರಾ? ಗಾಡಿ ಓಡಿಸುತ್ತಿದ್ದ ಕಾಂಗ್ರೆಸ್ ಮುಖಂಡರ ಬಳಿ ಡಿಎಲ್ ಇದೆಯಾ, ಗಾಡಿಯ ಆರ್ಸಿ ಬುಕ್ ಇದೆಯಾ ಎನ್ನುವುದನ್ನು ಆಮೇಲೆ ಕೇಳೋಣ, ಮೊದಲಿಗೆ ಹೆಲ್ಮೆಟ್ ಹಾಕಿಕೊಳ್ಳಬೇಕು ಎನ್ನುವ ಕಾನೂನು ಇದೆ ಎನ್ನುವುದನ್ನು ಟ್ರಾಫಿಕ್ ವಿಭಾಗದವರು ಕಾಂಗ್ರೆಸ್ ಮುಖಂಡರ ಗಮನಕ್ಕೆ ತಂದಿದ್ದಾರೋ ಗೊತ್ತಿಲ್ಲಾ...
ಅಂದ ಹಾಗೇ.. ಕೆಲವು ದಿನಗಳ ಹಿಂದೆ ಬಿಜೆಪಿಯವರ ಬೈಕ್ ಜಾಥಾಗೆ ಕೆಲವೊಂದು ಜಿಲ್ಲೆಗಳಲ್ಲಿ ಅನುಮತಿ ನಿರಾಕರಿಸಿದ್ದ ಸಿದ್ದರಾಮಯ್ಯ ಸರಕಾರ, ಕೋಲಾರದಲ್ಲಿನ ತಮ್ಮ ಪಕ್ಷದಿಂದ ಆಯೋಜಿಸಲಾಗಿದ್ದ ಬೈಕ್ ಜಾಥಾಗೆ ಅಂದೆಂಗೆ ಪರ್ಮಿಷನ್ ಕೊಟ್ರು ಅಂತಾ ಬಿಜೆಪಿ ಮುಖಂಡರು ಗೊಣಗುತ್ತಿದ್ರಂತೆ..