ಹಾಗಾದರೆ, ಈಶ್ವರಪ್ಪನವರೇ ನಿಮ್ಮ ಪ್ರಕಾರ ಸಿಎಂ ಬೊಮ್ಮಾಯಿ ರಾಷ್ಟ್ರ ವಿರೋಧಿಯೇ?
ಸಚಿವ ಕೆ.ಎಸ್.ಈಶ್ವರಪ್ಪನವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ದ ತಿರುಗಿ ಬಿದ್ದಿದೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ರಾಷ್ಟ್ರ ವಿರೋಧಿ ಎಂದು ಕರೆಯುತ್ತೀರಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಹೊರಗಿನಿಂದ ಬಂದವರಿಂದ ಬಿಜೆಪಿ ಸರಕಾರ ರಚನೆಯಾಗಿದೆ ಎನ್ನುವುದನ್ನು ಮತ್ತೆ ಪುನರುಚ್ಚಿಸಿರುವ ಈಶ್ವರಪ್ಪ, ಮುದಿನ ದಿನಗಳಲ್ಲಿ ನಮ್ಮ ಸ್ವಂತ ಬಲದಿಂದ ಅಧಿಕಾರ ನಡೆಸುತ್ತೇವೆ. ಸಿದ್ದರಾಮಯ್ಯನವರು ಕನಸು ಕಾಣುವುದನ್ನು ಬಿಡಲಿ ಎಂದು ಹೇಳಿದ್ದರು.
ಬೊಮ್ಮಾಯಿ ಸಂಪುಟ ಸೇರಿದ ಕೆ. ಎಸ್. ಈಶ್ವರಪ್ಪ ಪರಿಚಯ
ಮುಂದಿನ ಸಿಎಂ ರಾಷ್ಟ್ರವಾದಿ ಆಗುತ್ತಾರೆ ಎಂದು ಈಶ್ವರಪ್ಪನವರ ಹೇಳಿಕೆಗೆ ಕಾಂಗ್ರೆಸ್ ಅಣಕವಾಡಿದ್ದು, ಹಾಗಾದರೆ ಈಗಿರುವ ಮುಖ್ಯಮಂತ್ರಿ ನಿಮ್ಮ ಪ್ರಕಾರ ರಾಷ್ಟ್ರ ವಿರೋಧಿಯೇ ಎಂದು ಪ್ರಶ್ನಿಸಿದೆ. ಟ್ವೀಟ್ ಮೂಲಕ ಕಾಂಗ್ರೆಸ್ ಮಾಡಿರುವ ಪ್ರಶ್ನೆಗೆ ಬಿಜೆಪಿಯಿಂದ ಇನ್ನೂ ಉತ್ತರ ಬಂದಿಲ್ಲ.
ಜಮೀರ್ ಮನೆ ಮೇಲೆ ಇಡಿ ದಾಳಿ ಹಿಂದಿನ ರೂವಾರಿ ಯಾರು? ಬಿಜೆಪಿ ಸ್ಪೋಟಕ ಹೇಳಿಕೆ
ಜಮೀರ್ ಅಹ್ಮದ್ ಖಾನ್ ಅವರ ಮನೆಯ ಮೇಲೆ ನಡೆದ ಇಡಿ ದಾಳಿಯ ವಿಚಾರದಲ್ಲೂ, ಎರಡು ರಾಷ್ಟ್ರೀಯ ಪಕ್ಷಗಳು ಆರೋಪ/ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಈಗ, ಈಶ್ವರಪ್ಪನವರು ಮೈಸೂರಿನಲ್ಲಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ, ಕಾಂಗ್ರೆಸ್ ಅಣಕವಾಡುತ್ತಿದೆ.
ನಾನು ಮುಂದಿನ ಡಿಸಿಎಂ ಆಗುತ್ತೇನೆ ಎಂದು ನನ್ನ ಅಭಿಮಾನಿಗಳು ಬಯಸಿದ್ದರು
ಕುಟುಂಬ ಸಮೇತ ಚಾಮುಂಡಿ ಬೆಟ್ಟ ಮತ್ತು ಸುತ್ತೂರು ಮಠಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಗುರುವಾರ (ಆಗಸ್ಟ್ 5) ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಮಾತನಾಡುತ್ತಿದ್ದ ಈಶ್ವರಪ್ಪ, "ನಾನು ಮುಂದಿನ ಡಿಸಿಎಂ ಆಗುತ್ತೇನೆ ಎಂದು ನನ್ನ ಅಭಿಮಾನಿಗಳು ಬಯಸಿದ್ದರು. ಆದರೆ, ಕೆಲವರು ನನಗೆ ಸಚಿವ ಸ್ಥಾನ ಕೂಡಾ ಸಿಗುವುದಿಲ್ಲ ಎನ್ನುವ ಸುದ್ದಿಯನ್ನು ಹಬ್ಬಿಸಿದ್ದರು. ರಾಜಕಾರಣದಲ್ಲಿ ಇದೆಲ್ಲಾ ಸಹಜ, ಸಮಯ ಸಂದರ್ಭ ಬಂದಾಗ ಇಂತಹ ಸುದ್ದಿಗಳಿಗೆ ಸೂಕ್ತ ಉತ್ತರವನ್ನು ನೀಡುತ್ತೇನೆ" ಎಂದು ಈಶ್ವರಪ್ಪ ಹೇಳಿದ್ದರು.
ನಮ್ಮ ವರಿಷ್ಠರು ರಾಷ್ಟ್ರೀಯವಾದಿ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಹುದು
"ಹೊರಗಿನಿಂದ ಬಂದವರ (ಬಾಂಬೆ ಫ್ರೆಂಡ್ಸ್) ಸಹಕಾರದಿಂದ ಬಿಜೆಪಿ ಸರಕಾರ ರಾಜ್ಯದಲ್ಲಿದೆ. ಮುಂದಿನ ದಿನಗಳಲ್ಲಿ ನಮ್ಮ ಸ್ವಯಂ ಶಕ್ತಿಯಿಂದಲೇ ನಾವು ಅಧಿಕಾರಕ್ಕೆ ಬರುತ್ತೇವೆ. ಆಗ, ನಮ್ಮ ವರಿಷ್ಠರು ರಾಷ್ಟ್ರೀಯವಾದಿ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಹುದು. ಸಿದ್ದರಾಮಯ್ಯನವರನ್ನು ನಾವೆಲ್ಲಾ ಹುಲಿ ಅಂದುಕೊಂಡಿದ್ದೆವು, ಆದರೆ ಅವರು ಇಲಿಯಾಗಿ ಒದ್ದಾಡುತ್ತಿದ್ದಾರೆ"ಎಂದು ಈಶ್ವರಪ್ಪ ಹೇಳಿಕೆಯನ್ನು ನೀಡಿದ್ದರು.
ಬಿಜೆಪಿಯಲ್ಲಿ ವಲಸಿಗರನ್ನು 'ಹೊರಗಿನವರು' ಎಂಬ ಭಾವನೆಯಲ್ಲಿಯೇ ಕಾಣಲಾಗುತ್ತಿದೆ
ಈಶ್ವರಪ್ಪನವರ ಈ ಹೇಳಿಕೆಗೆ ಕೆಪಿಸಿಸಿ ಟ್ವೀಟ್ ಮಾಡಿದ್ದು ಹೀಗೆ, "@ikseshwarappa ಅವರೇ, ನಿಮ್ಮ ಮಾತಿನ ಅರ್ಥ ಈಗಿನ ಸಿಎಂ ರಾಷ್ಟ್ರ ವಿರೋಧಿಯೇ!? ಇದು ಆಪರೇಷನ್ ಕಮಲದ ಅನೈತಿಕ ಸರ್ಕಾರ ಎಂಬುದನ್ನ ಒಪ್ಪಿಕೊಳ್ಳುತ್ತಾ, ಹೊರಗಿನವರ ಬೆಂಬಲದಲ್ಲಿದೆ ಈ ಸರ್ಕಾರ ಎಂದಿದ್ದೀರಿ. ಬಿಜೆಪಿಯಲ್ಲಿ ವಲಸಿಗರನ್ನು 'ಹೊರಗಿನವರು' ಎಂಬ ಭಾವನೆಯಲ್ಲಿಯೇ ಕಾಣಲಾಗುತ್ತಿದೆ ಎನ್ನಲು ಈ ಮಾತು ಪುಷ್ಠಿ ಕೊಡುತ್ತದೆ!" ಎಂದು ಈಶ್ವರಪ್ಪನವರ ಕಾಲೆಳೆದಿದೆ.
Recommended Video
ಮೂಲ-ವಲಸಿಗ ಚರ್ಚೆಗೆ ನಾಂದಿ ಹಾಡಲಿದೆಯೇ ಎಂದು ಕಾದು ನೋಡಬೇಕಿದೆ
ಯಡಿಯೂರಪ್ಪನವರ ಪದತ್ಯಾಗಕ್ಕೂ ಮುನ್ನ ಈಶ್ವರಪ್ಪನವರು ಹೊರಗಿನಿಂದ ಬಂದವರ ಸಹಕಾರದಿಂದ ಬಿಜೆಪಿ ಸರಕಾರ ನಡೆಸಿದೆ ಎನ್ನುವ ಮಾತನ್ನು ಹೇಳುತ್ತಲೇ ಇದ್ದರು. ಇದಕ್ಕೆ ವಲಸೆ ಸಚಿವರು ವಿರೋಧ ವ್ಯಕ್ತ ಪಡಿಸಿದ್ದರಿಂದ ಈ ಹೇಳಿಕೆ ಹಿನ್ನಲೆಗೆ ಸರಿದಿತ್ತು. ಈಗ, ಈಶ್ವರಪ್ಪನವರು ಮತ್ತೆ ಈ ಹೇಳಿಕೆಯನ್ನು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತೆ ಮೂಲ-ವಲಸಿಗ ಚರ್ಚೆಗೆ ನಾಂದಿ ಹಾಡಲಿದೆಯೇ ಎಂದು ಕಾದು ನೋಡಬೇಕಿದೆ.