ಡಿಕೆ ಸುರೇಶ್ಗೆ ಕರೆ ಮಾಡಿ ಧೈರ್ಯ ತುಂಬಿದ ಸೋನಿಯಾ
ನವದೆಹಲಿ, ಸೆಪ್ಟೆಂಬರ್ 23: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಅವರಿಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ.
ತಿಹಾರ್ ಜೈಲಿನಲ್ಲಿರುವ ಇಬ್ಬರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲು ತೆರಳಿದ್ದರು ಆದರೆ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರನ್ನು ಮಾತ್ರ ಭೇಟಿ ಮಾಡಲು ಅವಕಾಶ ದೊರೆತಿತ್ತು. ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ ಹಾಗಾಗಿ ಡಿಕೆ ಸುರೇಶ್ ಅವರಿಗೆ ಎರಡು ಬಾರಿ ಕರೆ ಮಾಡಿ ಧೈರ್ಯತುಂಬಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಡಿಕೆ ಶಿವಕುಮಾರ್ ಭೇಟಿ ಮಾಡದೆ ಹೊರಟ ಸೋನಿಯಾ: ಕಾರಣಗಳು
ಸೋನಿಯಾ ಗಾಂಧಿ ಭೇಟಿ ಬಳಿಕ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಪರವಾಗಿ ಅವರ ಕುಟುಂಬಸ್ಥರ ಬಳಿ ಟ್ವೀಟ್ ಮಾಡಿಸಿದ್ದು, ನಾನು ಕಾಂಗ್ರೆಸ್ನಷ್ಟೇ ಪ್ರಬಲನಾಗಿದ್ದೇನೆ ಎಂದು ಹೇಳಿದ್ದಾರೆ. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳು ಪ್ರಕಟಗೊಳ್ಳುತ್ತಿವೆ.
ಕಾಂಗ್ರೆಸ್ ಪಕ್ಷ ಎಲ್ಲಿಯವರೆಗೆ ಪ್ರಬಲ ಮತ್ತು ಧೈರ್ಯವಾಗಿರುವುದೋ ಅಲ್ಲಿಯವರೆಗೆ ನಾನೂ ಪ್ರಬಲವಾಗಿ ಮತ್ತು ಧೈರ್ಯಶಾಲಿಯಾಗಿರುತ್ತೇನೆ ಎಂದಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಿ ಚಿದಂಬರಂ ಅವರನ್ನು ತಿಹಾರ್ ಜೈಲಿನಲ್ಲಿ ಇಂದು ಭೇಟಿಯಾಗಿದ್ದರು.
ಇಂದು ಬೆಳಗ್ಗೆ ತಿಹಾರ್ ಜೈಲಿಗೆ ಆಗಮಿಸಿದ ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರು ಕೇವಲ ಪಿ. ಚಿದಂಬರಂ ಅವರನ್ನು ಭೇಟಿಯಾಗಲಷ್ಟೇ ಸಾಧ್ಯವಾಯಿತು. ಡಿಕೆಶಿ ಅವರನ್ನು ಭೇಟಿಯಾಗಲು ಕೈ ಅಧಿನಾಯಕಿಗೆ ಅವಕಾಶ ಸಿಗಲಿಲ್ಲ . ಡಿಕೆ ಶಿವಕುಮಾರ್ ಅವರಿಗೆ ನ್ಯಾಯಾಂಗ ಬಂಧನ ಮುಂದುವರೆಯಲಿದ್ದು ಸೆ.25ಕ್ಕೆ ಜಾಮೀನು ಅರ್ಜಿ ಕುರಿತ ತೀರ್ಪು ಹೊರಬೀಳಲಿದೆ.