ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು; 5 ಕಾರಣಗಳು
ಬೆಂಗಳೂರು, ಸೆಪ್ಟೆಂಬರ್ 15 : 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. 28 ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಲು ಪಕ್ಷ ಯಶಸ್ವಿಯಾಗಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿತ್ತು. ಕೆಪಿಸಿಸಿ ಚುನಾವಣಾ ಸೋಲಿನ ಕುರಿತು ವರದಿ ನೀಡಲು ಸತ್ಯಶೋಧನಾ ಸಮಿತಿಯನ್ನು ವಿ. ಆರ್. ಸುದರ್ಶನ್ ನೇತೃತ್ವದಲ್ಲಿ ರಚನೆ ಮಾಡಿತ್ತು.
ಲೋಕಸಭೆ ಸೋಲು : ಕೆಪಿಸಿಸಿಯಿಂದ ಸತ್ಯ ಶೋಧನಾ ಸಮಿತಿ ರಚನೆ
ಸತ್ಯಶೋಧನಾ ಸಮತಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೊರತುಪಡಿಸಿ ಉಳಿದ 27 ಕ್ಷೇತ್ರಗಳಲ್ಲಿ ಸಂಚಾರ ನಡೆಸಿ ವರದಿಯನ್ನು ತಯಾರು ಮಾಡಿದೆ. ಕಾಂಗ್ರೆಸ್ ಪಕ್ಷದ ಸೋಲಿಗೆ 5 ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದೆ.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಅಕ್ಟೋಬರ್ 2ರಂದು ಕೆಪಿಸಿಸಿ ಅಧ್ಯಕ್ಷರಿಗೆ ವರದಿಯನ್ನು ಸಮಿತಿ ಹಸ್ತಾಂತರ ಮಾಡಲಿದೆ. ಮೈತ್ರಿ ಸರ್ಕಾರದ ಗೊಂದಲ, ಸ್ಥಳೀಯ ಮಟ್ಟದ ಕಾರ್ಯಕರ್ತರ ಹೊಂದಾಣಿಕೆ ಕೊರತೆ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿಯಲ್ಲಿ ನೀಡಿರುವ 5 ಕಾರಣಗಳು ಇಲ್ಲಿವೆ.
ಲೋಕಸಭಾ ಚುನಾವಣೆ : ಕರ್ನಾಟಕದಿಂದ ಮೊದಲ ಬಾರಿ ಗೆದ್ದ 10 ಸಂಸದರು
ಕಾರಣ - 1
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದರೂ ಲೋಕಸಭಾ ಚುನಾವಣೆಯಲ್ಲಿ ಅದು ಫಲ ನೀಡಿಲಿಲ್ಲ. ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದ ಸ್ಥಳೀಯ ಮಟ್ಟದ ನಾಯಕರು, ಕಾರ್ಯಕರ್ತರು ಚುನಾವಣೆಯಲ್ಲಿ ಒಂದಾಗಿ ಕೆಲಸ ಮಾಡಲಿಲ್ಲ. ಸ್ಥಳೀಯ ಮಟ್ಟದಲ್ಲಿ ಈ ಸಮಸ್ಯೆ ಇರುವ ಬಗ್ಗೆ ಮಾಹಿತಿ ಇದ್ದರೂ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು ತಪ್ಪು, ಇದರಿಂದಾಗಿ ಹಿನ್ನಡೆ ಉಂಟಾಗಿದೆ.
ಕಾರಣ - 2
ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬಳಿಕ ಯಾವ ಕ್ಷೇತ್ರವನ್ನು ಯಾರಿಗೆ ಬಿಟ್ಟುಕೊಡಬೇಕು ಎಂಬ ಗೊಂದಲ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದ ತನಕ ಮುಂದುವರೆಯಿತು. ಇದರಿಂದಾಗಿ ಕಾರ್ಯಕರ್ತರು ಉತ್ಸಾಹದಿಂದಾಗಿ ಕೆಲಸ ಮಾಡಲು ಆಗಲಿಲ್ಲ. ಚುನಾವಣೆಯಲ್ಲಿ ಹಿನ್ನಡೆ ಆಗಲು ಇದು ಸಹ ಕಾರಣವಾಯಿತು.
ಕಾರಣ - 3
ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪಕ್ಷ ತೊರೆಯಲು ಅನರ್ಹ ಶಾಸಕರು ಸಿದ್ಧವಾಗಿದ್ದರು. ಅವರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರ ಮತ್ತು ತಮ್ಮ ಪ್ರಭಾವ ಇರುವ ಕ್ಷೇತ್ರಗಳಲ್ಲಿ ಕೆಲಸ ಮಾಡಲೇ ಇಲ್ಲ. ಇದರಿಂದಾಗಿ ಪಕ್ಷದ ಅಭ್ಯರ್ಥಿಗಳಿಗೆ ಹಿನ್ನಡೆ ಉಂಟಾಯಿತು. ಆದ್ದರಿಂದ, 1 ಸೀಟು ಗೆಲ್ಲುವುದು ಮಾತ್ರ ಸಾಧ್ಯವಾಯಿತು.
ಕಾರಣ - 4
ಉಡುಪಿ-ಚಿಕ್ಕಮಗಳೂರು, ವಿಜಯಪುರ, ಉತ್ತರ ಕನ್ನಡ ಕ್ಷೇತ್ರದಲ್ಲಿ ಜೆಡಿಎಸ್ಗೆ ನೆಲೆಯೇ ಇಲ್ಲ. ಆದರೂ ಆ ಕ್ಷೇತ್ರಗಳನ್ನು ಬಿಟ್ಟುಕೊಡಲಾಯಿತು. ಇದು ಅಕ್ಕಪಕ್ಕದ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪರಿಣಾಮ ಬೀರಿತು. ಆದ್ದರಿಂದ, ಮೂರು ಕ್ಷೇತ್ರದ ಜೊತೆಗೆ ಅಕ್ಕ-ಪಕ್ಕದ ಕ್ಷೇತ್ರದಲ್ಲಿಯೂ ಸೋಲಾಯಿತು.
ಕಾರಣ - 5
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದರೂ ಎರಡೂ ಪಕ್ಷಗಳ ನಾಯಕರ ನಡುವೆ ಮಾತಿನ ಸಮರ ನಿಲ್ಲಲಿಲ್ಲ. ನಾಯಕರ ನಡುವಿನ ಗೊಂದಲ ಕಾರ್ಯಕರ್ತರ ಮೇಲೆಯೂ ಪರಿಣಾಮ ಬೀರಿತು. ಆದ್ದರಿಂದ, ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಕೇವಲ 2 ಸೀಟುಗಳು ಮಾತ್ರ ಸಿಕ್ಕಿದವು.