ರಾಜ್ಯ ಬಜೆಟ್ ಅಧಿವೇಶನ: ಕಾಂಗ್ರೆಸ್ ಶಾಸಕ ವಿಧಾನಸಭೆಯಲ್ಲಿ ಅಂಗಿ ಬಿಚ್ಚಿದ್ದು ಯಾಕೆ?
ಬೆಂಗಳೂರು, ಮಾ. 04: ರಾಜ್ಯ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆಯೆ ವಿಧಾನಸಭೆಯಲ್ಲಿ ನಿರೀಕ್ಷೆಯಂತೆ ಕೋಲಾಹಲ ಉಂಟಾಗಿದೆ. ಆದರೆ ಆ ಕೋಲಾಹಲಕ್ಕೆ 'ಸಿಡಿ' ಸ್ಫೋಟ ಕಾರಣವಲ್ಲ ಎಂಬುದು ವಿಶೇಷ. ಬಜೆಟ್ ಅಧಿವೇಶನ ಆರಂಭದ ಮೊದಲೆರಡು ದಿನಗಳನ್ನು ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯದ ಮೇಲೆ ಚರ್ಚೆ ನಡೆಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಜೆಂಡಾ ನಿಗದಿ ಮಾಡಿದ್ದರು. ಅದು ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಗಿದೆ.
ಚರ್ಚೆ ವಿರೋಧಿಸಿ ವಿಧಾನಸಭೆಯಲ್ಲಿ ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮಾಡುವಾಗ ಅಂಗಿ ತೆಗೆದು ಪ್ರತಿಭಟನೆ ಮಾಡಲು ಕಾಂಗ್ರೆಸ್ ಶಾಸಕರೊಬ್ಬರು ಮುಂದಾಗಿದ್ದರು. ಅದನ್ನು ಗಮನಿಸಿದ ಕಾಂಗ್ರೆಸ್ ಹಿರಿಯ ಶಾಸಕ ಡಿ.ಕೆ. ಶಿವಕುಮಾರ್ ಅವರು ಆ ಶಾಸಕರು ಬಿಚ್ಚಿದ್ದ ಅಂಗಿ ಹಾಕಿದರು. ಇದೇ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಆ ಶಾಸಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜೊತೆಗೆ ನಿಮ್ಮ ಈ ವರ್ತನೆ ನಿಮ್ಮ ಕ್ಷೇತ್ರದ ಜನರಿಗೆ ಮಾಡುವ ಅವಮಾನ ಎಂದು ಎಚ್ಚರಿಸಿದರು.
ಸದನದ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರೊಬ್ಬರನ್ನು ಸದನದಿಂದ ಅಮಾನತು ಮಾಡಲಾಗಿದೆ. ಜೊತೆಗೆ ಕಾಂಗ್ರೆಸ್ ಧರಣಿ ಹಿನ್ನೆಲೆಯಲ್ಲಿ ಮಹತ್ವದ ಬಜೆಟ್ ಅಧಿವೇಶನ ಮೊದಲ ದಿನವೇ ಗದ್ದಲಕ್ಕೆ ಬಲಿಯಾಗುವ ಎಲ್ಲ ಲಕ್ಷಣಗಳು ಕಂಡು ಬಂದಿವೆ.
ಒಂದೇ ಚುನಾವಣೆಗೆ ಕಾಂಗ್ರೆಸ್ ಭಾರಿ ವಿರೋಧ
ರಾಜ್ಯ ಬಜೆಟ್ ಅಧಿವೇಶದನ ಮೊದಲ ಎರಡು ದಿನಗಳನ್ನು ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯದ ಮೇಲೆ ಚರ್ಚಿಸಲು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಅಜೆಂಡಾ ನಿಗದಿ ಮಾಡಿದ್ದರು. ಆದರೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೆ ಈ ವಿಚಾರದ ಮೇಲೆ ಚರ್ಚೆಗೆ ನಮ್ಮ ವಿರೋಧವಿದೆ ಎಂದು ಕಾಂಗ್ರೆಸ್ ಸದಸ್ಯರು ಗದ್ದಲ ಆರಂಭಿಸಿದರು. ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಚರ್ಚೆಗೆ ತಮ್ಮ ವಿರೋಧವಿದೆ ಎಂದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಹಾಕಲು ಆರಂಭಿಸಿದ್ದರು.
ಇದು ಆರ್ಎಸ್ಎಸ್ ಅಜೆಂಡಾ ಎಂದ ಕಾಂಗ್ರೆಸ್
ಒಂದು ರಾಷ್ಟ್ರ-ಒಂದು ಚುನಾವಣೆ ಎಂಬುದು ಇದು ಆರ್ಎಸ್ಎಸ್ ಅಜೆಂಡಾ. ಯಾವುದೇ ಕಾರಣಕ್ಕೂ ಈ ಚರ್ಚೆಗೆ ನಮ್ಮ ಸಮ್ಮತಿಯಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಈ ಚರ್ಚೆಗೆ ನಮ್ಮ ಸಹಮತವಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದೇ ಚುನಾವಣೆ ಜಾರಿಯಾಗಬೇಕಿದೆ. ಸದ್ಯ ಬಹಳಷ್ಟು ಚುನಾವಣೆಗಳು ನಡೆಯುವುದರಿಂದ ಸಮಸ್ಯೆ ಆಗುತ್ತಿದೆ. ಒಂದೇ ಚುನಾವಣೆ ಇದ್ದರೆ ಎಲ್ಲರಿಗೂ ಸಹಾಯಕವಾಗುತ್ತದೆ. ಹೀಗಾಗಿ ಈ ವಿಷಯದ ಮೇಲೆ ಚರ್ಚೆ ಅತ್ಯವಶ್ಯಕವಾಗಿದೆ. ಚರ್ಚೆಗೆ ನೀವು ಅವಕಾಶ ಮಾಡಿಕೊಡಿ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರಲ್ಲಿ ಮನವಿ ಮಾಡಿಕೊಂಡರು.
ಸದನದಲ್ಲಿ ಅಂಗಿ ಬಿಚ್ಚಿದ ಕಾಂಗ್ರೆಸ್ ಶಾಸಕ
ಇನ್ನು ಸದನದ ಬಾವಿಗಿಳಿದು ಧರಣಿ ಮಾಡುತ್ತಿದ್ದ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರು ಪ್ರತಿಭಟನಾರ್ಥವಾಗಿ ಅಂಗಿ ಬಿಚ್ಚಿ ಧರಣಿ ಮಾಡಲು ಮುಂದಾದರು. ತಕ್ಷಣ ಅವರನ್ನು ಗಮನಿಸಿದ ಕಾಂಗ್ರೆಸ್ ಹಿರಿಯ ಶಾಸಕ ಡಿ.ಕೆ. ಶಿವಕುಮಾರ್ ಅವರು ಸಂಗಮೇಶ್ ಅವರಿಗೆ ಅಂಗಿ ಹಾಕಿಕೊಳ್ಳುವಂತೆ ಸೂಚಿಸಿದರು. ತಾವೇ ಅಂಗಿಯನ್ನು ಹಾಕಿದರು ಕೂಡ.
ಇದೇ ವೇಳೆ ಸ್ಪೀಕರ್ ಕಾಗೇರಿ ಮಧ್ಯಪ್ರವೇಶ ಮಾಡಿ, ಈ ರೀತಿಯಾಗಿ ವರ್ತನೆ ಮಾಡಬೇಡಿ. ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ರೀ ಸಂಗಮೇಶ್ ನೀವು ಇಂತಹ ವರ್ತನೆಯನ್ನು ಭದ್ರಾವತಿಯಲ್ಲಿ ಇಟ್ಟುಕೊಳ್ಳಿ. ಸದನದಲ್ಲಿ ಈ ರೀತಿಯಾಗಿ ನಡೆದುಕೊಳ್ಳಬೇಡಿ ಎಂದು ಭದ್ರಾವತಿ ಸಂಗಮೇಶ್ ವಿರುದ್ಧ ಕಾಗೇರಿ ಆಕ್ರೋಶ ಭರಿತರಾಗಿ ತರಾಟೆಗೆ ತೆಗೆದುಕೊಂಡರು. ಜೊತೆಗೆ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿ ಸ್ಪೀಕರ್ ಕಾಗೇರಿ ಆದೇಶ ಮಾಡಿದರು. ಸದನವನ್ನು ಮುಂದೂಡಿದ್ದರೂ ಶಾಸಕ ಸಂಗಮೇಶ್ ಅವರು ನಿಂತಲ್ಲಿಯೇ ನಿಂತಿದ್ದರು.
Recommended Video
ಸಂಗಮೇಶ್ ಅಮಾನತುಗೊಳಿಸಿ ಸ್ಪೀಕರ್ ಆದೇಶ
ಮುಂದೂಡಲಾಗಿದ್ದ ವಿಧಾನಸಭೆ ಕಲಾಪ ಮತ್ತೆ ಆರಂಭವಾದಾಗ ಕಾಂಗ್ರೆಸ್ ಸದಸ್ಯರ ಧರಣಿ ಸತ್ಯಾಗ್ರಹ ಮುಂದುವರೆದಿತ್ತು. ಸ್ಪೀಕರ್ ಕಾಗೇರಿ ಅವರು ಚರ್ಚೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು. ಆದರೆ ಅದಕ್ಕೆ ಕಾಂಗ್ರೆಸ್ ಸದಸ್ಯರು ಒಪ್ಪಲಿಲ್ಲ. ಇದೇ ಸಂದರ್ಭದಲ್ಲಿ ಸದನದೊಳಗೆ ಶರ್ಟ್ ಬಿಚ್ಚಿ ಧರಣಿಗೆ ಮುಂದಾಗಿದ್ದ ಸದಸ್ಯ ಸಂಗಮೇಶ್ ಅವರು ಸದನಕ್ಕೆ ಬರದಂತೆ ಒಂದು ವಾರ ಕಾಲ ಅಮಾನತುಗೊಳಿಸಿ ಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಘೋಷಣೆ ಮಾಡಿದರು. ಆಗ ಮತ್ತಷ್ಟು ಗದ್ದಲ ಉಂಟಾಗಿದ್ದರಿಂದ ವಿಧಾನಸಭೆ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದಾರೆ.