2 ಕ್ಷೇತ್ರಗಳಲ್ಲಿ ಸ್ಪರ್ಧೆ: ಸಿದ್ದು, ಪರಂ ಬೇಡಿಕೆಗೆ ಹೈಕಮಾಂಡ್ ನಕಾರ?!
Recommended Video
ಬೆಂಗಳೂರು, ಏಪ್ರಿಲ್ 13: ಮೈಸೂರಿನ ಚಾಮುಂಡೇಶ್ವರಿ ಮತ್ತು ಬಾಗಲಕೋಟೆಯ ಬದಾಮಿ ಎರಡೂ ಕ್ಷೇತ್ರಗಳಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಸಹ ತುಮಕೂರಿನ ಕೊರಟಗೆರೆ ಮಾತ್ರವಲ್ಲದೆ, ಬೆಂಗಳೂರಿನ ಪುಲಕೇಶಿನಗರ ಕ್ಷೇತ್ರದಲ್ಲೂ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ.
ಆದರೆ ಈ ಇಬ್ಬರು ಘಟಾನುಘಟಿಗಳು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಹೈಕಮಾಂಡ್ ನಿಜಕ್ಕೂ ಒಪ್ಪಿಗೆ ನೀಡಿದೆಯಾ? ಕೆಲವು ಮೂಲಗಳ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ಎರಡರಲ್ಲಿ ಒಂದು ಕ್ಷೇತ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವಂತೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರಿಗೆ ಸೂಚಿಸಿದೆ.
ಬಾದಾಮಿಯನ್ನು ಸಿದ್ದರಾಮಯ್ಯಗೆ ಚಿಮ್ಮನಕಟ್ಟಿ ಬಿಟ್ಟು ಕೊಟ್ಟಿದ್ದೇಕೆ?
ಒಬ್ಬರಿಗೆ ಎರಡು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರೆ ಮತ್ತಷ್ಟು ನಾಯಕರು ಇದೇ ಬೇಡಿಕೆ ಇಡುತ್ತಾರೆ, ಇದರಿಂದ ಸಾಕಷ್ಟು ಸಮರ್ಥರೂ ಟಿಕೇಟ್ ವಂಚಿತರಾಗಬಹುದು ಎಂದು ಹೈಕಮಾಂಡ್ ಹೇಳಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯಲ್ಲಿಂದು ಮಹತ್ವದ ಸಭೆ
ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಲುವಾಗಿ ನವದೆಹಲಿಯಲ್ಲಿಂದು(ಏ.13) 10 ಗಂಟೆಗೆ ಕಾಂಗ್ರೆಸ್ ನ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈ ಸಂದರ್ಭದಲದಲ್ಲಿ ಇಬ್ಬರು ನಾಯಕರಿಗೆ ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಅವಕಾಶ ನೀಡಬೇಕೇ ಬೇಡವೆ ಎಂಬ ಕುರಿತು ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ. ಒಬ್ಬ ಅಭ್ಯರ್ಥಿಗೆ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದೆಂದು ಈಗಾಗಲೇ ಭಾರತೀಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದು, ಇದು ಈಗಾಗಲೇ ವಿಚಾರಣೆಯ ಹಂತದಲ್ಲಿರುವುದನ್ನು ಇಲ್ಲಿ ಸ್ಮರಿಸಬಹುದು.
ಸಿದ್ದರಾಮಯ್ಯನವರೇ, ಯಾವ ಕ್ಷೇತ್ರ ಬೇಕು ನಿರ್ಧರಿಸಿ!
ಬಾಗಲಕೋಟೆಯ ಬದಾಮಿ ಅಥವಾ ಮೈಸೂರಿನ ಚಾಮುಂಡೇಶ್ವರಿ ಈ ಎರಡರಲ್ಲಿ ಯಾವ ಕ್ಷೇತ್ರ ಬೇಕು ಎಂದು ನೀವೇ ನಿರ್ಧರಿಸಿ ಎಂದು ಹೈಕಮಾಂಡ್ ಸಿದ್ದರಾಮಯ್ಯನವರಿಗೆ ಕೇಳಿದೆ ಎಂಬ ವದಂತಿಯೂ ಹಬ್ಬಿದೆ. ಅಂದರೆ ಒಂದು ಕ್ಷೇತ್ರವನ್ನಷ್ಟೇ ಆಯ್ದುಕೊಳ್ಳುವಂತೆ ಸಿದ್ದು ಅವರಿಗೆ ಸೂಚಿಸಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿದ್ದರೂ ಸಿದ್ದರಾಮಯ್ಯ ಬದಾಮಿಯನ್ನೂ ಆರಿಸಿಕೊಳ್ಳುತ್ತಿರುವುದೇಕೆ? ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಪ್ರತಿಸ್ಪರ್ಧಿಯಾಗಿರುವ ಜೆಡಿಎಸ್ ನ ಜಿ.ಟಿ. ದೇವೇಗೌಡ ಪ್ರಬಲ ಅಭ್ಯರ್ಥಿ. ಮಾತ್ರವಲ್ಲ ಅಲ್ಲಿನ ಜನರ ವಿಶ್ವಾಸ ಗಳಿಸಿದ್ದಾರೆ.
ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಎದುರಿಗೆ 7 ಸವಾಲುಗಳು
ಸಿದ್ದರಾಮಯ್ಯರನ್ನು ಸೋಲಿಸುವುದೇ ಜೆಡಿಎಸ್-ಬಿಜೆಪಿ ಗುರಿ!
ಈ ಕ್ಷೇತ್ರದಲ್ಲಿ ಸಿದ್ದು ಅವರನ್ನು ಸೋಲಿಸಲೇಬೇಕೆಂದು ಬಿಜೆಪಿಯ ಹಲವು ನಾಯಕರೂ ಪಣತೊಟ್ಟಿರುವುದರಿಂದ ಸಿದ್ದರಾಮಯ್ಯ ಗೆಲುವು ಸುಲಭದ ತುತ್ತಂತೂ ಅಲ್ಲವೇ ಅಲ್ಲ. ಆದ್ದರಿಂದಲೇ ಅವರು ಬದಾಮಿಯನ್ನೂ ಆರಿಸಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದ್ದು! ಅದೂ ಅಲ್ಲದೆ, ಇತ್ತೀಚೆಗೆ ಹೊರಬಂದ ಗುಪ್ತಚರ ವರದಿಯೊಂದು ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಸೇಫ್ ಅಲ್ಲವೇ ಅಲ್ಲ ಎಂದಿರುವುದು ಅವರಲ್ಲಿ ಆತಂಕ ಶುರುವಾಗಿರುವುದಕ್ಕೆ ಮತ್ತೊಂದು ಕಾರಣ. ಈ ವರದಿಯೆಲ್ಲ ಸುಳ್ಳು ಎಂದು ಮಾಧ್ಯಮಗಳ ಮುಂದೆ ಸಿದ್ದರಾಮಯ್ಯ ಹೇಳಿದ್ದರೂ, ಒಳಗೊಳಗೇ ಭಯವಿರುವುದನ್ನು ಅಲ್ಲಗಳೆಯುವುದಕ್ಕಾಗುವುದಿಲ್ಲ. ಚಾಮುಂಡೇಶ್ವರಿ ಕ್ಷೇತ್ರ ತಮಗೆ ಮರು ಜನ್ಮ ನೀಡಿದ ಕ್ಷೇತ್ರ ಎನ್ನುವ ಸಿದ್ದರಾಮಯ್ಯ ಇಲ್ಲಿ ಸೋತರೆ ತೀವ್ರ ಮುಖಭಂಗಕ್ಕೊಳಗಾಗುವುದು ಖಂಡಿತ. ಐದು ವರ್ಷಗಳ ಕಾಲ ಯಶಸ್ವೀ ಆಡಳಿತ ನೀಡಿದ ಮುಖ್ಯಮಂತ್ರಿ ಸೋಲುವುದು ಎಂದರೆ ಅದು ಪ್ರತಿಷ್ಠೆಗೆ ಬಿದ್ದ ಕೊಡಲಿ ಏಟು. ಆದ್ದರಿಂದಲೇ ಸಿದ್ದರಾಮಯ್ಯ ಒಂದು ಕ್ಷೇತ್ರದಲ್ಲಿ ಸೋಲಾದರೂ, ಇನ್ನೋಂದರಲ್ಲಿ ಅದರ ಕಹಿಯನ್ನು ತುಂಬಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಪರಮೇಶ್ವರ್ ಕತೆಯೂ ಅದೇ!
ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್ 2013 ರ ವುಧಾನಸಭೆ ಚುನಾವಣೆಯಲ್ಲಿ ತುಮಕೂರಿನ ಕೊರಟಗೆರೆ ಕ್ಷೇತ್ರದಲ್ಲಿ ಸೋಲು ಕಾಣುವ ಮೂಲಕ ಮುಖ್ಯಮಂತ್ರಿ ಪದವಿಯನ್ನೇ ಕಳೆದುಕೊಳ್ಳಬೇಕಾಯ್ತು. ಈ ಬಾರಿ ಕೊರಟಗೆರೆಯಲ್ಲಿ ಪರಮೇಶ್ವರ್ ಪರ ಅಲೆ ಇರುವುದು ನಿಜವಾದರೂ ಕಳೆದ ಬಾರಿಯ ಸೋಲನ್ನು ಅವರಿನ್ನೂ ಮರೆತಿಲ್ಲ. 'ರಿಸ್ಕ್' ತೆಗೆದುಕೊಳ್ಳುವ ಪ್ರಮೇಯವೇ ಬೇಡ ಎಂದು ಬೆಂಗಳೂರಿನ ಪುಲಕೇಶಿನಗರವನ್ನೂ ಆಯ್ದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಹೈಕಮಾಂಡ್ ಇದಕ್ಕೆ ಅವಕಾಶ ನೀಡುವ ಸಾಧ್ಯತೆಗಳು ಕಡಿಮೆ. ಆದ್ದರಿಂದ ಅವರು ಒಂದೇ ಕ್ಷೇತ್ರವನ್ನು ಪ್ರತಿನಿಧಿಸುವುದು ಬಹುತೇಕ ಖಚತವಾಗಿದೆ.