ಲಸಿಕೆ ಅಭಾವಕ್ಕೆ ಕಾಂಗ್ರೆಸ್ ಕಾರಣ: ತಮಗೆ ತಾವೇ ಗೋಲು ಹೊಡೆದು ಕೊಂಡ ಎಚ್ಡಿಕೆ
ಬೆಂಗಳೂರು, ಮೇ 19: ದೇಶ ಇಂದು ಎದುರಿಸುತ್ತಿರುವ ಲಸಿಕೆ ಅಭಾವಕ್ಕೆ ಕಾಂಗ್ರೆಸ್ ಕೂಡಾ ಕಾರಣ ಎನ್ನುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದು ಹೀಗೆ, "ಜನರು ಕೊರೊನಾ ವ್ಯಾಕ್ಸಿನ್ ಪಡೆಯಲು ಹಿಂಜರಿಯುತ್ತಿರುವುದಕ್ಕೆ ಕಾಂಗ್ರೆಸ್ ಅಪಪ್ರಚಾರ ಕಾರಣ ಎನ್ನುವ @BJP4Karnataka ಆರೋಪ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ನಡೆಸುತ್ತಿರುವ ಹತಾಶ ಪ್ರಯತ್ನ ಅಷ್ಟೆ. ವ್ಯಾಕ್ಸಿನ್ ಪಡೆಯಲು ಜನ ಕ್ಯೂನಲ್ಲಿದ್ದಾರೆ, ಮೊದಲು ಅವರಿಗೆ ಕೊಡಿ, ಆ ಮೇಲೆ ನಮ್ಮ ಕಡೆ ಬೊಟ್ಟು ಮಾಡಿ"ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ಘೋಷಿಸಿದ ಆರ್ಥಿಕ ಪ್ಯಾಕೇಜ್ "ಊಟಕ್ಕಿಲ್ಲದ ಉಪ್ಪಿನಕಾಯಿ"!
"ಕೊರೊನಾ ವ್ಯಾಕ್ಸಿನನ್ನು ಎಲ್ಲರಿಗೂ ಉಚಿತವಾಗಿ ಹಂಚಿ ಎನ್ನುವುದೇ ನಮ್ಮ ಮೂಲ ಬೇಡಿಕೆ. ನಾವು ವ್ಯಾಕ್ಸಿನನ್ನು ಎಂದೂ ವಿರೋಧಿಸಿಲ್ಲ, ಅದರ ಸತ್ವಪರೀಕ್ಷೆಯ ಫಲಿತಾಂಶಕ್ಕಿಂತ ಮೊದಲು ಕೇವಲ ಪ್ರಚಾರಕ್ಕಾಗಿ ಬಳಕೆಗೆ ಬಿಡುಗಡೆ ಮಾಡಬಾರದೆಂಬ ತಜ್ಞರ ಅಭಿಪ್ರಾಯಕ್ಕೆ @INCIndia ಪಕ್ಷ ಸಹಮತ ವ್ಯಕ್ತಪಡಿಸಿತ್ತು"ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
"ಕೊರೊನಾ ವ್ಯಾಕ್ಸಿನನ್ನು ಕೊರೊನಾ ವಾರಿಯರ್ಸ್ ಗಾಗಿ ಬಿಡುಗಡೆಗೊಳಿಸಿದ್ದು ಜನವರಿ 18ರಂದು. ಪ್ರಧಾನಮಂತ್ರಿ ಮತ್ತು ಕೇಂದ್ರ ಆರೋಗ್ಯ ಸಚಿವರು ವ್ಯಾಕ್ಸಿನ್ ಪಡೆಯುವ ಧೈರ್ಯ ತೋರಿಸಿದ್ದು ಮಾರ್ಚ್ ಒಂದರಂದು. ಎಲ್ಲದರಲ್ಲಿಯೂ ನಾವೇ ಮೊದಲು ಎಂದು ಎದೆ ತಟ್ಟಿಕೊಳ್ಳುವ @narendramodi ಅವರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂಜರಿದದ್ದು ಯಾಕೆ?"ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೊರೊನಾ: ರಾಜಧಾನಿ ಬೆಂಗಳೂರಿನಲ್ಲಿ ಆಶಾದಾಯಕ ಬೆಳವಣಿಗೆ!
ಫಲಿತಾಂಶ ಕಾದು ನೋಡಿ ವ್ಯಾಕ್ಸಿನ್ ಹಾಕಿಸಿಕೊಂಡರು. 56 ಇಂಚು ಎಂದರೆ ಇದೇನಾ?
"ಬೇರೆಲ್ಲ ದೇಶಗಳ ಪ್ರಧಾನಿ/ಅಧ್ಯಕ್ಷರು ಕೊರೊನಾ ವಾರಿಯರ್ಸ್ ರಂತೆ ಮೊದಲು ವ್ಯಾಕ್ಸಿನ್ ಹಾಕಿಸಿಕೊಂಡು ಜನರಿಗೆ ಧೈರ್ಯ ತುಂಬಿದ್ದರೆ ನಮ್ಮ ಪ್ರಧಾನಿ @narendramodi ಅವರು ಮಾತ್ರ ಫಲಿತಾಂಶ ಕಾದು ನೋಡಿ ವ್ಯಾಕ್ಸಿನ್ ಹಾಕಿಸಿಕೊಂಡರು. 56 ಇಂಚಿನ ಎದೆಯ ಧೈರ್ಯ ಎಂದರೆ ಇದೇನಾ?"ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಬಿಜೆಪಿ ಸರ್ಕಾರ ಈಗ ವಿರೋಧ ಪಕ್ಷಗಳನ್ನು ಹಳಿಯುವುದು ತಮಾಷೆಯಾಗಿದೆ
"ಭಾರತದಲ್ಲಿ ಎರಡೂ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡವರು 4 ಕೋಟಿ ಜನ ಮಾತ್ರ (3%), ಕರ್ನಾಟಕದಲ್ಲಿ ಕೇವಲ 25 ಲಕ್ಷ ಜನ. ಇದಕ್ಕೆ ವ್ಯಾಕ್ಸಿನ್ ಕೊರತೆಯೇ ಕಾರಣ ಹೊರತು ಜನರ ಹಿಂಜರಿಕೆ ಅಲ್ಲ. ಜನರ ಬೇಡಿಕೆಗೆ ತಕ್ಕಂತೆ ವ್ಯಾಕ್ಸಿನ್ ಪೂರೈಸಲಾಗದ ಕೇಂದ್ರ ಮತ್ತು ರಾಜ್ಯ @BJP4India ಸರ್ಕಾರ ಈಗ ವಿರೋಧ ಪಕ್ಷಗಳನ್ನು ಹಳಿಯುವುದು ತಮಾಷೆಯಾಗಿದೆ." ಸಿದ್ದರಾಮಯ್ಯ ಟ್ವೀಟ್.
ದೇಶದ ಜನ ಈಗ ಮೋದಿಗೆ ಕಿವಿಗೊಡಲ್ಲ, ಕಾಂಗ್ರೆಸ್ ಮಾತಿಗೆ ಬೆಲೆಕೊಡುತ್ತಾರೆ ಎಂದರ್ಥವೇ
"ಮೊದಲು ಕೊರೊನಾ ಕಾಣಿಸಿಕೊಂಡಾಗ ತಟ್ಟೆ ಬಡಿಯಿರಿ, ದೀಪ ಹಚ್ಚಿರಿ ಎಂದು ಪ್ರಧಾನಿಯವರು ಕರೆ ನೀಡಿದಾಗ ಇಡೀ ದೇಶ ಕುಣಿದಾಡಿತ್ತು. ಆದರೆ ವ್ಯಾಕ್ಸಿನ್ ವಿಷಯದಲ್ಲಿ ಮಾತ್ರ ಜನ ಕಾಂಗ್ರೆಸ್ ಮಾತಿಗೆ ತಲೆದೂಗಿದ್ದಾರೆ ಎಂದರೆ ದೇಶದ ಜನ ಈಗ @narendramodi ಮಾತಿಗೆ ಕಿವಿಗೊಡಲ್ಲ, ಕಾಂಗ್ರೆಸ್ ಮಾತಿಗೆ ಬೆಲೆಕೊಡುತ್ತಾರೆ ಎಂದರ್ಥವೇ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
|
ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿರುವುದಕ್ಕೆ ಕಾಂಗ್ರೆಸ್ ಅಪಪ್ರಚಾರ ಕಾರಣ
"ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿರುವುದಕ್ಕೆ ಕಾಂಗ್ರೆಸ್ ಅಪಪ್ರಚಾರ ಕಾರಣ ಎಂದು ಆರೋಪಿಸುವ ಮೂಲಕ @hd_kumaraswamy ತಮಗೆ ತಾವೇ ಗೋಲು ಹೊಡೆದುಕೊಂಡಿದ್ದಾರೆ. ಕಾಂಗ್ರೆಸ್ ಪ್ರಚಾರ ನಂಬಿ ನೀವು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮಾರ್ಚ್ 23ರ ವರೆಗೆ ಕಾದು ಕೂತಿದ್ದೇ?"
"ಸರ್ವರಿಗೂ ಉಚಿತ ವ್ಯಾಕ್ಸಿನ್ ಹಾಕುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆಗೂಡಿ @H_D_Devegowda ಅವರು ಪ್ರಧಾನಿಗೆ ಪತ್ರ ಬರೆದಿದ್ದರು. hd_kumaraswamy ಅವರು ಇಂತಹ ಬಾಲಿಷ ಹೇಳಿಕೆ ನೀಡುವ ಮೊದಲು ತಂದೆಯ ಸಲಹೆ ಪಡೆಯುವುದು ಒಳ್ಳೆಯದು" ಎನ್ನುವ ಸಲಹೆಯನ್ನು ಸಿದ್ದರಾಮಯ್ಯನವರು ಕುಮಾರಸ್ವಾಮಿಗೆ ಟ್ವೀಟ್ ಮೂಲಕ ನೀಡಿದ್ದಾರೆ.
Recommended Video