ಟ್ವಿಟರ್ ವಾರ್: "ಮುಖ್ಯಮಂತ್ರಿಗಳೇ ನೀವು ತಡೆಯಾಜ್ಞೆ ಅರ್ಜಿ ಸಲ್ಲಿಸಲ್ವಾ?"
ಬೆಂಗಳೂರು, ಮಾರ್ಚ್.06: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮತ್ತು ಮಿತ್ರ ಮಂಡಳಿಯ ಆರು ಮಂದಿ ಸಚಿವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವಿಟರ್ ವಾರ್ ಶುರುವಾಗಿದೆ.
ಬಾಂಬೆ ಫ್ರೆಂಡ್ಸ್ ಎಂತಲೇ ಕರೆಸಿಕೊಳ್ಳುವ ಸಚಿವರ ನಡೆಯನ್ನು ಕಾಂಗ್ರೆಸ್ ಟೀಕಿಸಿದೆ. "ಕುಂಬಳಕಾಯಿ ಕಳ್ಳ ಅಂದರೆ ಕರ್ನಾಟಕದ ಬಿಜೆಪಿ ಸಚಿವರೇಕೆ ಹೆಗಲು ಮುಟ್ಟಿ ನೋಡಿಕೊಳ್ತಿದ್ದಾರೆ?. ಸಿಡಿ ಶಬ್ದ ಕೇಳಿದರೆ ಸರ್ಕಾರದ ಇಡೀ ಸಂಪುಟವೇ ಏಕೆ ಬೆಚ್ಚಿ ಬೀಳುತ್ತಿದೆ?." ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. "6 ಸಚಿವರು ಏಕೆ ಸುದ್ದಿ ಪ್ರಸಾರಕ್ಕೆ ಮುಂಜಾಗ್ರತೆಯಲ್ಲಿ ತಡೆ ತರುತ್ತಿದ್ದಾರೆ?. ಸರ್ಕಾರದ ರಚನೆಯಿಂದ ಹಿಡಿದು ಸಂಪುಟ ವಿಸ್ತರಣೆಯವರೆಗೂ ಬೃಹತ್ ಹಗರಣ ಅಡಗಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಶಾಕಿಂಗ್ ಸುದ್ದಿ: ಸಿಡಿ ಬಗ್ಗೆ ಸಚಿವರಿಗೆ ಮೊದಲೇ ಸುಳಿವು ಸಿಕ್ಕಿತ್ತಾ?
ಕಾಂಗ್ರೆಸ್ ಪಕ್ಷಕ್ಕೆ ಟ್ವಿಟರ್ನಲ್ಲಿ ಬಿಜೆಪಿ ಕರ್ನಾಟಕ ನೀಡಿರುವ ಉತ್ತರಕ್ಕೆ ಪ್ರತಿಯಾಗಿ ಕಾಂಗ್ರೆಸ್ ತಿರುಗೇಟು ನೀಡುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ಟ್ವಿಟರ್ ವಾರ್ ಹೇಗಿತ್ತು. ಯಾವ ವಿಷಯಗಳು ಟ್ವಿಟ್ಟರ್ ಕದನಕ್ಕೆ ಸಾಕ್ಷಿಯಾದವು ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.
"ಬಿಎಸ್ ವೈ ಅವರೇ ನೀವು ತಡೆಯಾಜ್ಞೆ ತರುವುದಿಲ್ಲವೇ?"
"ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬೆನ್ನಲ್ಲೇ ಸಾಲಾಗಿ ಮಿತ್ರಮಂಡಳಿ ಸಚಿವರು ಕೋರ್ಟ್ ಮೊರೆ ಹೋಗಿರುವ ಬಗ್ಗೆ ಕಾಂಗ್ರೆಸ್ ಲೇವಡಿ ಮಾಡಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದಂತೆ ಕಣ್ಣಿನಲ್ಲಿ ನೋಡಲಾಗದ ಸಿಡಿಗಳು ಇವೆಯಂತೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ನೀವು ತಡೆಯಾಜ್ಞೆ ತರುವುದಿಲ್ಲವೇ" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿಯಂದ ಆಪರೇಷನ್ ಹಸ್ತದ ಪ್ರಸ್ತಾಪ
"ತಮ್ಮದೇ ಪಕ್ಷದ ಶಾಸಕರ ಹಿತಾಸಕ್ತಿ ಕಾಪಾಡಲು ಸಾಧ್ಯವಾಗದ ಕಾಂಗ್ರೆಸ್, ತಮ್ಮ ಶಾಸಕರು ಅನ್ಯ ಪಕ್ಷ ಸೇರಿದಾಗ ತನ್ನ ಮೇಲಿನ ನಿಷ್ಕೃಿಯತೆಯನ್ನು ಮುಚ್ಚಿಹಾಕಲು ಸೃಷ್ಟಿಸಿದ ಪದವೇ ಆಪರೇಷನ್ ಕಮಲ. ದೇವರಾಜ ಅರಸು ಸರ್ಕಾವನ್ನು ಈ ಹಿಂದೆ ಭಾರತೀಯ ಕಾಂಗ್ರೆಸ್ ಪಕ್ಷದ ದೆಹಲಿ ನಾಯಕರು ಬುಡಮೇಲುಗೊಳಿಸಿದ್ದಕ್ಕೆ ಏನೆನ್ನುತ್ತೀರಿ?. ಅದು, ಆಪರೇಷನ್ ಹಸ್ತವೇ" ಎಂದು ಬಿಜೆಪಿ ಪ್ರಶ್ನಿಸಿದೆ.
ಜಾರಕಿಹೊಳಿ ಸಿಡಿ ಸ್ಪೋಟವಾಗುತ್ತಿದ್ದಂತೆ ಕೋರ್ಟ್ ಮೊರೆ ಹೋದ ಆರು ಸಚಿವರು!
ಭಾರತೀಯ ಜನತಾ ಪಕ್ಷಕ್ಕೆ ಕಾಂಗ್ರೆಸ್ ಪ್ರತ್ಯುತ್ತರ
"ಹೌದ.. ಹೌದು. ಬಾಂಬೆಗೆ ಕರೆದುಕೊಂಡು ಹೋಗಿ ತಾವು ತುಂಬಾ ಚೆನ್ನಾಗಿ ಹಿತಾಸಕ್ತಿ ಕಾಪಾಡಿರುವುದು ನಿಮ್ಮ ಸಚಿವರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರಲ್ಲಿಯೇ ತಿಳಿಯುತ್ತಿದೆ. ಇಡೀ ರಾಜ್ಯ ಛೀ.. ಥೂ.. ಎನ್ನುತ್ತಿದೆ ನಿಮ್ಮ ಸಿಡಿ ಸರ್ಕಾರವನ್ನು ನೋಡಿ. ನಿಮ್ಮವರೇ ನಿಮಗೆ ಬ್ಲಾಕ್ಮೇಲ್ ಜನತಾ ಪಾರ್ಟಿ ಎಂದಿದ್ದೇಕೆ ಎಂದು ತಿಳಿಯುತ್ತಿದೆ" ಎಂಬುದಾಗಿ ಕಾಂಗ್ರೆಸ್ ಟ್ವಿಟರ್ ನಲ್ಲಿ ತಿರುಗೇಟು ನೀಡಿದೆ.
ಬಾಂಬೆ ಸ್ನೇಹಿತರ ವಿರುದ್ಧ ಬಿಜೆಪಿ ಗುರಾಣಿ
"ಹನಿಟ್ರ್ಯಾಪ್, ಸಿಡಿ, ಆಪರೇಷನ್ ಕಮಲ, ನೀವು ಸೃಷ್ಟಿಸಿದ ಗುರಾಣಿ ಅಲ್ಲವೇ?. ಬಾಂಬೆ ಬಾಯ್ಸ್ ಅತೃಪ್ತಿಯನ್ನು ತೃಪ್ತಗೊಳಿಸಿ, ಈಗ ಒಂದೊಂದೇ ಗುರಾಣಿ ಬಿಡುತ್ತಿರುವಿರಿ. ಕರ್ನಾಟಕ ಬಿಜೆಪಿಯೇ ನಿಮ್ಮ ರಾಜಕೀಯ ವ್ಯಭಿಚಾರಕ್ಕೆ ದೇಶದ ಎದುರು ಕನ್ನಡಿಗರು ತಲೆ ತಗ್ಗಿಸುವಂತಾಗಿದೆ. ಇಷ್ಟಾದರೂ ನಿಮಗೆ ಲಜ್ಜೆ ಇಲ್ಲದಿರುವುದು ದುರ್ದೈವ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.