ಅತೃಪ್ತರ ವಿರುದ್ದ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಹಿಂದೇಟು, ಕಾರಣವೇನು?
ಬೆಂಗಳೂರು, ಫೆಬ್ರವರಿ 09: ಕಾಂಗ್ರೆಸ್ ಅತೃಪ್ತ ಶಾಸಕರಿಗೆ ಎಡರೆಡು ಬಾರಿ ನೊಟೀಸ್ ನೀಡಲಾಗಿದೆ. ವಿಪ್ ಸಹ ಜಾರಿ ಮಾಡಲಾಗಿ ಅದನ್ನು ಅವರು ಉಲ್ಲಂಘಿಸಿದ್ದೂ ಆಗಿದೆ. ಆದರೆ ಕಾಂಗ್ರೆಸ್ ಮಾತ್ರ ಅತೃಪ್ತರ ವಿರುದ್ಧ ಕ್ರಮಕ್ಕೆ ಮನಸ್ಸು ಮಾಡುತ್ತಿಲ್ಲ.
ಸಿಎಲ್ಪಿ ಸಭೆ, ಅಧಿವೇಶನ ಯಾವುದಕ್ಕೂ ಅತೃಪ್ತ ಶಾಸಕರು ಬಂದಿಲ್ಲ. ಬಜೆಟ್ ಮುಂಚಿನ ಸಿಎಲ್ಪಿ ಸಭೆಗೆ ಬರಲೇಬೇಕೆಂದು ವಿಪ್ ಸಹ ಜಾರಿ ಮಾಡಿಲಾಗಿತ್ತು. ಅದನ್ನೂ ಅತೃಪ್ತ ಶಾಸಕರು ಉಲ್ಲಂಘಿಸಿದ್ದಾರೆ. ಆದರೂ ಸಹ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕಾಂಗ್ರೆಸ್ ಧೈರ್ಯ ಮಾಡುತ್ತಿಲ್ಲ.
ನಾಲ್ವರು ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಲು ತೀರ್ಮಾನ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಸ್ವತಃ ಅತೃಪ್ತ ಶಾಸಕರ ವಿರುದ್ಧ ಗುಟುರು ಹಾಕಿದ್ದರು. 'ಶಾಸಕಾಂಗ ಸಭೆಗೆ ಬರದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು' ಎಂದು ಟ್ವಿಟ್ಟರ್ನಲ್ಲಿ ಸಹ ಘೋಷಿಸಿದ್ದರು. ಆದರೆ ಅವರೂ ಸಹ ಅತೃಪ್ತರನ್ನು ಅಲ್ಲಾಡಿಸಲಾಗಿಲ್ಲ.
ಅತೃಪ್ತ ಕೈ ಶಾಸಕರಿಗೆ ಮೊದಲ ಶಾಕ್: ಉಮೇಶ್ ಜಾಧವ್ ನಿಗಮ ಸ್ಥಾನ ರದ್ದು
ಮೂರು-ನಾಲ್ಕು ಜನ ಅತೃಪ್ತ ಶಾಸಕರನ್ನು ಅಲ್ಲಾಡಿಸಲು ಸಾಧ್ಯವಾಗದಷ್ಟು ಅಶಕ್ತವಾಯಿತೆ ಕಾಂಗ್ರೆಸ್ ಎಂಬ ಅನುಮಾನ ಇದರಿಂದ ಬರುವುದು ಸಹಜ. ಆದರೆ, ಇದಕ್ಕೆ ಬೇರೆಯ ಕೋನಗಳು ಇವೆ.
ಅತೃಪ್ತ ಶಾಸಕರ ಮೇಲೆ ನಿಗಾ ಇಡಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್
ಇಬ್ಬರು ಪಕ್ಷೇತರರ ಬೆಂಬಲ ಕಳೆದುಕೊಂಡಿದೆ
ಇಬ್ಬರು ಪಕ್ಷೇತರರ ಬೆಂಬಲ ಕಳೆದುಕೊಂಡಿರುವ ಮೈತ್ರಿ ಸರ್ಕಾರ ಈಗಾಗಲೇ ಸಂಕಷ್ಟದಲ್ಲಿದೆ. ಈಗ ಈ ನಾಲ್ಕು ಶಾಸಕರನ್ನು ಕಾಂಗ್ರೆಸ್ನಿಂದ ಅನರ್ಹ ಮಾಡಿದರೆ ಅವರೂ ಬಿಜೆಪಿ ಪಾಲಾಗುವುದರಲ್ಲಿ ಸಂಶಯವೇ ಇಲ್ಲ. ಅದು ಕಾಂಗ್ರೆಸ್ಗೆ ಬೇಕಿಲ್ಲ. ಆದರೆ ಅತೃಪ್ತರ ತಾಳಕ್ಕೆ ಕುಣಿಯುವುದೂ ಸಹ ಕಾಂಗ್ರೆಸ್ಗೆ ಸಾಧ್ಯವಿಲ್ಲ.
ಶಿಸ್ತು ಕ್ರಮ ಜರುಗಿಸಿದರೆ ಅತೃಪ್ತರು ಬಿಜೆಪಿಗೆ?
ಹಾಗಾಗಿಯೇ ಕಾಂಗ್ರೆಸ್ ಪಕ್ಷ ಅತೃಪ್ತರ ವಿರುದ್ಧ ಕ್ರಮ ಜರುಗಿಸದೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಅತೃಪ್ತರನ್ನು ಕಾಂಗ್ರೆಸ್ನಿಂದ ಹೊರಗಟ್ಟಿದರೆ ಅವರು ಬಿಜೆಪಿಗೆ ಸೇರಲು ಸರ್ವ ಮುಕ್ತರಾಗಿಬಿಡುತ್ತಾರೆ. ವಿಪ್ ಉಲ್ಲಂಘಿಸಿದ್ದಕ್ಕೆ ಸ್ಪೀಕರ್ಗೆ ದೂರು ಕೊಡಬಹುದಾದರೂ ಸರ್ಕಾರ ಉರುಳಿ ಹೊಸ ಸರ್ಕಾರ ಬಂದು ಸ್ಪೀಕರ್ ಬದಲಾಗಿ ಬಿಜೆಪಿಯವರೇ ಸ್ಪೀಕರ್ ಆದರೆ ಅವರು ವಿಪ್ ಉಲ್ಲಂಘನೆ ಪ್ರಕರಣವನ್ನು ಮುಂದಕ್ಕೆ ದೂಡುತ್ತಾ ಹೋಗುವ ಸಂಭವ ಇದೆ. ಇದು ಕಾಂಗ್ರೆಸ್ಗೆ ಅರಿವಿದೆ.
ಸಂಖ್ಯಾಬಲ ಎಷ್ಟಿದೆ?
ಇಬ್ಬರು ಪಕ್ಷೇತರರು ಈಗಾಗಲೇ ಮೈತ್ರಿ ಸರ್ಕಾರಕ್ಕೆ ಗುಡ್ ಬೈ ಹೇಳಿದ್ದು, ಬಿಜೆಪಿ ತೆಕ್ಕೆಗೆ ಜಾರಿದ್ದಾರೆ. ಕಾಂಗ್ರೆಸ್ ಶಾಸಕ ಗಣೇಶ್ ಅವರ ಸದಸ್ಯತ್ವವನ್ನು ಕೆಪಿಸಿಸಿ ರದ್ದು ಮಾಡಿದೆ. ಅಲ್ಲಿಗೆ ಮೂರು ಜನ ಶಾಸಕರ ಬಲವನ್ನು ಮೈತ್ರಿ ಸರ್ಕಾರ ಕಳೆದುಕೊಂಡಿದೆ. ಈಗ ಮೈತ್ರಿ ಸರ್ಕಾರದ ಸಂಖ್ಯಾ ಬಲ ಕೇವಲ 117 ಅಕಸ್ಮಾತ್ ಈ ಮೂವರು ಅತೃಪ್ತರ ಸದಸ್ಯತ್ವ ರದ್ದು ಮಾಡಿದರೆ ಸಂಖ್ಯಾಬಲ 114 ಕ್ಕೆ ಬಂದು ನಿಲ್ಲುತ್ತದೆ. ಅದು ಅತ್ಯಂತ ಅಪಾಯಕಾರಿ.
ಅತೃಪ್ತರ ಒಂದು ಕಾಲು ಈಗಾಗಲೇ ಬಿಜೆಪಿಯಲ್ಲಿ?
ಉಮೇಶ್ ಜಾಧವ್, ರಮೇಶ್ ಜಾರಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಅವರುಗಳು ವಿಪ್ ಉಲ್ಲಂಘನೆ ಮಾಡಿದ್ದು, ಅವರ ಒಂದು ಈಗಾಗಲೇ ಬಿಜೆಪಿ ಪಾಳಯದಲ್ಲಿದೆ. ಅಕಸ್ಮಾತ್ ಕಾಂಗ್ರೆಸ್ ಪಕ್ಷವು ಅವರ ಮೇಲೆ ಶಿಸ್ತು ಕ್ರಮ ಜರುಗಿಸಿ ಪಕ್ಷದ ಸದಸ್ಯತ್ವ ರದ್ದು ಮಾಡಿದಲ್ಲಿ, ಸುಲಭವಾಗಿ ಬಿಜೆಪಿಗೆ ಹಾರುತ್ತಾರೆ. ವಿಪ್ ಉಲ್ಲಂಘನೆಗಾಗಿ ಕಾಂಗ್ರೆಸ್ ದೂರು ನೀಡುವುದಾದರೂ ಅದು ಬೇಗನೆ ಇತ್ಯರ್ಥವಾಗುತ್ತದೆ ಎಂದು ಹೇಳಲಾಗದು. ಸಿದ್ದರಾಮಯ್ಯ ಅವಧಿಯಲ್ಲಿ ಏಳು ಜನ ಜೆಡಿಎಸ್ ಶಾಸಕರು ವಿಪ್ ಉಲ್ಲಂಘಿಸಿದ್ದರು ಆದರೆ ಅವರ ಸದಸ್ಯತ್ವ ರದ್ದಾಗಿರಲಿಲ್ಲ.
ಅತೃಪ್ತರನ್ನು ಬೆದರಿಸುವ ತಂತ್ರ
ಶಾಸಕ ಉಮೇಶ್ ಜಾಧವ್ ಅವರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ರದ್ದು ಮಾಡಿ, ಅತೃಪ್ತರಿಗೆ ಬೆದರಿಕೆ ಒಡ್ಡುವ ತಂತ್ರವನ್ನು ಕೆಪಿಸಿಸಿ ಮಾಡಿತ್ತು. ಆದರೆ ಅದರಿಂದ ಹೆಚ್ಚೇನು ಪ್ರಯೋಜನವಾದಂತೆ ಕಾಣುವುದಿಲ್ಲ. ಅತೃಪ್ತ ಶಾಸಕರನ್ನು ತಹಬದಿಗೆ ತರಲು ಕೆಪಿಸಿಸಿ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.