ನಾಳೆ ಗುಜರಾತ್ ಶಾಸಕರು ತವರಿಗೆ ವಾಪಸ್
ಬೆಂಗಳೂರು, ಆಗಸ್ಟ್ 6: ನಗರದ 'ಈಗಲ್ಟನ್-ದಿ ಗಾಲ್ಫ್ ವಿಲೇಜ್ ರೆಸಾರ್ಟ್'ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತಿನ ಕಾಂಗ್ರೆಸ್ ಶಾಸಕರು ಸೋಮವಾರ ತಮ್ಮ ರಾಜ್ಯಕ್ಕೆ ವಾಪಸಾಗಲಿದ್ದಾರೆ.
ಬೆಂಗಳೂರಿನಿಂದ ಶಾಸಕರು ಗುಜರಾತಿನ ನೀಜಾನಂದ್ ರೆಸಾರ್ಟ್ ಗೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಮೊದಲ ಬ್ಯಾಚ್ ನ 10 ಕಾಂಗ್ರೆಸ್ ಶಾಸಕರು ನಾಳೆ ಬೆಳಿಗ್ಗೆ 4 ಗಂಟೆಗೆ ಗುಜರಾತ್ ವಿಮಾನವೇರಲಿದ್ದಾರೆ. ಇನ್ನುಳಿದವರು ಮಧ್ಯಾಹ್ನ ಹೊತ್ತಿಗೆ ಗುಜರಾತ್ ರಾಜಧಾನಿ ಅಹಮದಾಬಾದ್ ಗೆ ಪ್ರಯಾಣ ಬೆಳೆಸಲಿದ್ದಾರೆ.
ಡಿಕೆ ಶಿವಕುಮಾರ್, ಡಿಕೆ ಸುರೇಶ್ ಮತ್ತು ಕಾಂಗ್ರೆಸ್ ನಾಯಕರು ವಿಮಾನ ನಿಲ್ದಾಣದವರೆಗೆ ಕಾಂಗ್ರೆಸ್ ನಾಯಕರಿಗೆ ಜತೆಯಾಗಲಿದ್ದಾರೆ.
ಇನ್ನು ನಿನ್ನೆಯಷ್ಟೇ ಕಾಂಗ್ರೆಸ್ ಶಾಸಕರು ರಾಜ್ಯಪಾಲ ವಜೂಭಾಯಿ ವಾಲಾರನ್ನು ಭೇಟಿಯಾಗಿ ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ ಶನಿವಾರ ಗುಜರಾತ್ ನಲ್ಲಿ ಆಪರೇಷನ್ ಕಮಲಕ್ಕೆ ಬೆದರಿ ಈ ಶಾಸಕರೆಲ್ಲಾ ಬೆಂಗಳೂರಿಗೆ ಬಂದಿದ್ದರು. ಇದೀಗ ಮಂಗಳವಾರ ಗುಜರಾತ್ ನಲ್ಲಿ ರಾಜ್ಯಸಭಾ ಚುನಾವಣೆ ನಡೆಯಲಿದ್ದು ಅದಕ್ಕೂ ಮೊದಲು ಶಾಸಕರು ವಾಪಸ್ ಗುಜರಾತ್ ತಲುಪುತ್ತಿದ್ದಾರೆ.