ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರಿಂದ 'ದೆಹಲಿ ಲಾಬಿ'
ಬೆಂಗಳೂರು, ಮೇ 26: ಬೆಂಗಳೂರಿನಲ್ಲಿ ಶುಕ್ರವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ವಿಶ್ವಾಸಮತ ಗೆಲ್ಲುತ್ತಿದ್ದಂತೆ ಸಂಪುಟ ರಚನೆ ಕಸರತ್ತು ಬಿರುಸು ಪಡೆದುಕೊಂಡಿದೆ. ಅಧಿವೇಶನ ಮುಗಿಯುತ್ತಿದ್ದಂತೆ ಹಿಲ್ಟನ್ ಹೋಟೆಲ್ ನಲ್ಲಿದ್ದ ಕೆಲವು ಶಾಸಕರು ರೂಂ ಖಾಲಿ ಮಾಡಿಕೊಂಡು ಮನೆ ತಲುಪಿದರೆ ಇನ್ನು ಕೆಲವು ನಾಯಕರು ನೇರ ದೆಹಲಿ ವಿಮಾನ ಹತ್ತಿದ್ದಾರೆ.
ವಿಚಿತ್ರವೆಂದರೆ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮತ್ತು ಡಿ.ಕೆ. ಶಿವಕುಮಾರ್ ಇಂದು ಜೆಡಿಎಸ್ ನಾಯಕರ ಜೊತೆ ಮಾತುಕತೆ ಮುಗಿಸಿ ದೆಹಲಿ ತಲುಪುವ ಮೊದಲೇ ಕೆಲವು ಪಕ್ಷದ ನಾಯಕರು ಹೈಕಮಾಂಡ್ ಬಾಗಿಲು ತಟ್ಟಲಾರಂಭಿಸಿದ್ದಾರೆ.
ಮುಗಿಯದ ಕಾಂಗ್ರೆಸ್ - ಜೆಡಿಎಸ್ ಸಂಪುಟ ರಚನೆಯ ಸರ್ಕಸ್
ಸಚಿವ ಸ್ಥಾನಕ್ಕಾಗಿ, ಪ್ರಮುಖ ಖಾತೆಗಾಗಿ ಕೆಲವು ಶಾಸಕರು ದೆಹಲಿಯಲ್ಲಿ ಲಾಬಿ ನಡೆಸಲಾರಂಭಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಎಸ್.ಆರ್. ಪಾಟೀಲ್ ಮತ್ತು ದಿನೇಶ್ ಗುಂಡೂರಾವ್ ದೆಹಲಿಯಲ್ಲೇ ಬೀಡು ಬಿಟ್ಟಿದ್ದು ಸಚಿವ ಸ್ಥಾನಕ್ಕಾಗಿ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇದೀಗ ರಾಜ್ಯದಿಂದ ತೆರಳಿದ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಲಿದ್ದು ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ.