ಕಾಂಗ್ರೆಸ್ ಶಾಸಕರಿಗೆ ಮುಂಬೈಗೆ ಹೋಗಲು ಹೇಳಿದ್ದೇ ನಾನು: ಕುಮಾರಸ್ವಾಮಿ
ಚಿಕ್ಕಮಗಳೂರು, ಸೆಪ್ಟೆಂಬರ್ 22: 'ಕಾಂಗ್ರೆಸ್ನ ಮೂವರೂ ಶಾಸಕರು ನನ್ನ ಜತೆ ಸಂಪರ್ಕದಲ್ಲಿ ಇದ್ದಾರೆ. ಅವರನ್ನು ಮುಂಬೈಗೆ ನಾವೇ ಕಳುಹಿಸಿರುವುದು' ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
'ಕುಮಾರಸ್ವಾಮಿ ಅರ್ಬನ್ ನಕ್ಸಲೈಟ್': ಬಿಜೆಪಿ ಮುಖಂಡರ ವಿರುದ್ಧ ಜೆಡಿಎಸ್ ದೂರು
ಜೆಡಿಎಸ್ನ ಮತ್ತೊಬ್ಬ ಶಾಸಕನನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಅವರೆಲ್ಲ ಜವಾಬ್ದಾರಿ ಇರುವ ಶಾಸಕರು. ಪಕ್ಷವನ್ನು ಬಿಡುವುದಿಲ್ಲ ಎಂದು ಹೇಳಿದರು.
ಸರ್ಕಾರ ಟೇಕಾಫ್ ಆಗಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಹೇಳುತ್ತಿದ್ದಾರೆ. ಅವರು ಸಮ್ಮಿಶ್ರ ಸರ್ಕಾರ ಕೆಡವಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಸರ್ಕಾರ ಬಿಎಸ್ವೈ ಅವರ ಸರ್ಕಾರದಂತೆ ಡಿನೋಟಿಫೈನಲ್ಲಿ ಟೇಕಾಫ್ ಆಗಿಲ್ಲ ಎಂದು ಲೇವಡಿ ಮಾಡಿದರು.
ಸಿಹಿ ಸುದ್ದಿ ನೀಡದ ಬಿಎಸ್ವೈ!
ಸೋಮವಾರ ಸಿಹಿ ಸುದ್ದಿ ನೀಡುವುದಾಗಿ ಬಿಎಸ್ವೈ ಹೇಳುತ್ತಿದ್ದಾರೆ. ಇಂತಹ ದಿನ ಪ್ರಮಾಣ ವಚನ ಎಂದು ಹೇಳುತ್ತಾರೆ. ಹೀಗೆ ಮೂರು ನಾಲ್ಕು ಬಾರಿ ಅವರ ಗಡುವು ಮುಗಿದಿದೆ. ಅವರು ಆತುರದಲ್ಲಿದ್ದಾರೆ. ಆದರೆ, ಇಲ್ಲಿಯವರೆಗೂ ಸಿಹಿ ಸುದ್ದಿ ನೀಡಿಲ್ಲ ಎಂದು ವ್ಯಂಗ್ಯವಾಡಿದರು.
ಬೆಳಗಾವಿ ಮುಖಂಡರಲ್ಲಿ ಇರುವುದು ಚಿಕ್ಕ ಮನಸ್ತಾಪ. ಕಾಂಗ್ರೆಸ್ನಲ್ಲಿ ಯಾವ ಬಿರುಕೂ ಇಲ್ಲ. ಸಣ್ಣ ಜರುಕು ಉಂಟಾಗಿದೆಯಷ್ಟೇ. ಸರ್ಕಾರ ಸುಭದ್ರವಾಗಿದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಬೆಂಕಿ ಹಚ್ಚುವುದು ಅಪರಾಧವಲ್ಲವೇ?
ದಂಗೆ ಕುರಿತು ನಾನು ಹೇಳಿದ ಒಂದೇ ಪದವನ್ನು ಎರಡು ದಿನಗಳಿಂದ ಚರ್ಚಿಸಲಾಗುತ್ತಿದೆ. ನಾನು ಹೇಳಿದ್ದು ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ.
ಬಿಜೆಪಿ ಮುಖಂಡರು ರಾಜ್ಯಕ್ಕೆ ಬೆಂಕಿ ಹಚ್ಚುವುದಾಗಿ ಈ ಹಿಂದೆ ಹೇಳಿಕೆ ನೀಡಿದ್ದರು. ಅದು ಅಪರಾಧವಲ್ಲ, ನಾನು ಹೇಳಿದ್ದು ಮಾತ್ರ ಅಪರಾಧವೇ?
ಬಿಎಸ್ ಯಡಿಯೂರಪ್ಪ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ನಮ್ಮ ಶಾಸಕರಿಗೆ ಎಷ್ಟು ಆಮಿಷ ಒಡ್ಡಿದ್ದಿರಿ ಎಂದು ಹೇಳಬೇಕಾ? ಯಡಿಯೂರಪ್ಪ ಪ್ರಜಾಪ್ರಭುತ್ವದ ಚಿಂತಕರು. ನಾವು ಹಳ್ಳಿಯಿಂದ ಬಂದವರು ಎಂದು ಮಾರ್ಮಿಕವಾಗಿ ಹೇಳಿದರು.
ಗುತ್ತೇದಾರ್ಗೆ ಆಮಿಷ ನೀಡಿರಲಿಲ್ಲವೇ?
ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಬಿ.ಎಸ್. ಯಡಿಯೂರಪ್ಪ, ಸುಭಾಷ್ ಗುತ್ತೇದಾರ್ ಮತ್ತು ಆಲಂದ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಜೆಡಿಎಸ್ ಸೇರುವಂತೆ ಆಸೆ ತೋರಿಸಿದ್ದು ನಿಜ ತಾನೆ ಎಂದು ಪ್ರಶ್ನಿಸಿದರು.
ಕಮಿಷನ್ ಏಜೆಂಟ್
ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸಹಮತವಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ಇದರ ಮಧ್ಯೆ ನಮ್ಮನ್ನು ಏಕೆ ಎಳೆದು ತರುತ್ತೀರಿ? ನಮ್ಮ ಪಾತ್ರವೇನಿದೆ. ವಿನಾಕಾರಣ ಬಿಜೆಪಿ ಬಗ್ಗೆ ಮಾತನಾಡದೆ ಅಭಿವೃದ್ಧಿ ಮಾಡಿ. ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ಕೊಡುತ್ತೇವೆ. ಕೆಲಸ ಮಾಡಿ. ಸರ್ಕಾರ ಇದೆ ಎಂದು ಅದನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಎಂದ ಯಡಿಯೂರಪ್ಪ, ಕುಮಾರಸ್ವಾಮಿ ಅವರು ವರ್ಗಾವಣೆ ದಂಧೆಯಲ್ಲಿ ಕಮಿಷನ್ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ರೆಸಾರ್ಟ್ಗೆ ಶಿಫ್ಟ್?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 'ಕಾವೇರಿ' ನಿವಾಸದಲ್ಲಿ ಶನಿವಾರ ಸಂಜೆ ಕಾಂಗ್ರೆಸ್ ಶಾಸಕರ ಸಭೆ ನಡೆದಿದೆ. ಅಕ್ಟೋಬರ್ 3ರಂದು ಪರಿಷತ್ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೂ ಎಲ್ಲ ಶಾಸಕರನ್ನು ರೆಸಾರ್ಟ್ನಲ್ಲಿ ಇರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು ಎನ್ನಲಾಗಿದೆ.
ಸೆ.25ರಂದು ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ. ಸಭೆ ಬಳಿಕ ಪರಿಷತ್ ಚುನಾವಣೆವರೆಗೂ ಶಾಸಕರ ರಕ್ಷಣೆ ಮಾಡುವ ಸಲುವಾಗಿ ಕಾಂಗ್ರೆಸ್ ರೆಸಾರ್ಟ್ಗೆ ಎಲ್ಲರನ್ನೂ ಸ್ಥಳಾಂತರಿಸಲು ಚಿಂತನೆ ನಡೆಸಿದೆ.
ಅಸಮಾಧಾನವಿಲ್ಲ
ನಮ್ಮಲ್ಲಿ ಪಕ್ಷದ ವಿರುದ್ಧ ಯಾವ ಅಸಮಾಧಾನವೂ ಇಲ್ಲ. ಇದ್ದ ಅಸಮಾಧಾನ ಅಂತ್ಯವಾಗಿದೆ. ನಾವು ಪಕ್ಷ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಎಪಿಎಲ್ಡಿ ಬ್ಯಾಂಕ್ ವಿಚಾರದಲ್ಲಿ ಜಯ ನಮ್ಮದಾಗಿದೆ. ಸಮಸ್ಯೆಗಳನ್ನು ಮಾತುಕತೆ ಮಾಡಿ ಬಗೆಹರಿಸಲಾಗಿದೆ. ತಾವು ಯಾವುದೇ ರೆಸಾರ್ಟ್ಗೂ ಹೋಗುವುದಿಲ್ಲ ಎಂದು ಗೋಕಾಕ್ನಲ್ಲಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.