ಹೃದಯವಂತ ಯಡಿಯೂರಪ್ಪ: ಹೊಗಳಿ ಅಟ್ಟಕ್ಕೇರಿಸಿದ ಜಮೀರ್ ಅಹ್ಮದ್
ಬೆಂಗಳೂರು, ಏಪ್ರಿಲ್ 14: ರಾಜಕೀಯದಲ್ಲಿ ಅಪರೂಪ ಎನ್ನುವಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹಾಡಿ ಹೊಗಳಿದ್ದಾರೆ.
ಇತ್ತೀಚಿನ ಮತೀಯ ದ್ವೇಷದ ವಾತಾವರಣದ ಬಗ್ಗೆ ಮಾತನಾಡುತ್ತಿದ್ದ ಜಮೀರ್, "ಇಂದಿನ ಪರಿಸ್ಥಿತಿಗೆ ಯಡಿಯೂರಪ್ಪನವರಂತಹ ಮುತ್ಸದ್ದಿಯ ಮಾತು ಬಹಳ ಅಗತ್ಯವಿತ್ತು. ಯಡಿಯೂರಪ್ಪನವರ ಹೇಳಿಕೆ ನನಗೆ ಬಹಳ ಖುಷಿ ತಂದಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅನ್ನದೇ ನಾವು ಒಟ್ಟಾಗಿ ಬದುಕಬೇಕು, ಜೊತೆಯಾಗಿ ಸಾಗಬೇಕು ಎಂದು ಯಡಿಯೂರಪ್ಪನವರು ಹೇಳಿದ್ದಾರೆ, ಇದು ಖುಷಿ ಪಡುವ ವಿಚಾರ" ಎಂದು ಜಮೀರ್ ಅಭಿಪ್ರಾಯ ಪಟ್ಟಿದ್ದಾರೆ.
ಚಂದ್ರು ಪ್ರಕರಣ ಮುಂದಿಟ್ಟುಕೊಂಡು ಗಲಭೆ ಸೃಷ್ಟಿಸಲು ಬಿಜೆಪಿ ಯತ್ನ: ಜಮೀರ್
"ಯಡಿಯೂರಪ್ಪನವರು ತಾವೊಬ್ಬ ಜಾತ್ಯತೀಯ ನಾಯಕ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ನಾನು ಈ ಹಿಂದೆ ಹಲವು ಬಾರಿ ಹೇಳಿದ್ದೆ, ಅವರು ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ ಎಂದು. ಬಿಜೆಪಿಯಲ್ಲಿದ್ದರೂ, ಅವರೊಬ್ಬರು ಸೆಕ್ಯೂಲರ್ ಲೀಡರ್ ಎಂದು ನಾನು ಬಹಳ ಜನರ ಬಳಿ ಹೇಳಿದ್ದೇನೆ"ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
"ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮತೀಯ ಗಲಭೆಯ ಒಂದು ಸಣ್ಣ ಉದಾಹರಣೆಗಳು ನಮ್ಮ ಮುಂದೆ ಇಲ್ಲ. ಈಗ ಏನಕ್ಕೆ ನಡೆಯುತ್ತಿದೆ ಎಂದರೆ ಬಿಜೆಪಿ ಸರಕಾರದಲ್ಲಿ ಜಾತ್ಯತೀಯತೆ ಎನ್ನುವುದು ಇಲ್ಲ. ನಮ್ಮ ಯಡಿಯೂರಪ್ಪನವರಿಂದ ಇದನ್ನು ಕಲಿತುಕೊಳ್ಳಬೇಕು"ಎಂದು ಜಮೀರ್ ಹೇಳಿದ್ದಾರೆ.
"ಯಡಿಯೂರಪ್ಪನವರು ಹೃದಯದಿಂದ ಕೆಲಸವನ್ನು ಮಾಡುತ್ತಾರೆ, ಕುಮಾರಸ್ವಾಮಿ ಅಥವಾ ಬೇರೆಯವರ ರೀತಿಯಲ್ಲಿ ಬರೀ ಬಾಯಿ ಮಾತಿನಲ್ಲಲ್ಲ. ಇದಕ್ಕಾಗಿ, ಯಡಿಯೂರಪ್ಪನವರನ್ನು ಖುದ್ದಾಗಿ ಭೇಟಿಯಾಗಿ ಅಭಿನಂದನೆ ಸಲ್ಲಿಸಲು ಪ್ರಯತ್ನಿಸಿದ್ದೆ"ಎಂದು ಜಮೀರ್ ಹೇಳಿಕೆಯನ್ನು ನೀಡಿದ್ದಾರೆ.
"ಯಡಿಯೂರಪ್ಪನವರು ಬೆಳಗಾವಿ ಪ್ರವಾಸ, ಅಲ್ಲಿಂದ ಮೂರು ದಿನ ಶಿಕಾರಿಪುರದಲ್ಲಿ ಇರುತ್ತಾರೆ ಎಂದು ಗೊತ್ತಾಗಿ ದೂರವಾಣಿ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಭಗವಂತ ಅವರನ್ನು ಚೆನ್ನಾಗಿ ಇಟ್ಟರಲಿ, ಇಂತಹ ನಾಯಕರು ನಮಗೆ ಬೇಕು"ಎಂದು ಜಮೀರ್ ಅಹ್ಮದ್ ಖಾನ್ ಅವರು ಯಡಿಯೂರಪ್ಪನವರು ಹೊಗಳಿದ್ದಾರೆ.