ಜಮೀರ್ ಅಹ್ಮದ್ ದಿಢೀರ್ ದೆಹಲಿಗೆ: ತಕ್ಷಣವೇ ಅಶೋಕ್ ಭೇಟಿ ಮಾಡಿದ ಬೇಗ್!
ಬೆಂಗಳೂರು, ಆ. 21: ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ದೆಹಲಿಗೆ ತೆರಳಿದ್ದಾರೆ. ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅರವನ್ನು ಭೇಟಿ ಮಾಡಿ ಶಾಸಕ ಜಮೀರ್ ಅಹ್ಮದ್ ಸುಧೀರ್ಘ ಚರ್ಚೆ ನಡೆಸಿದ್ದರು. ಆ ಕಡೆ ಜಮೀರ್ ಅಹ್ಮದ್ ದೆಹಲಿಗೆ ತೆರಳುತ್ತಿದ್ದಂತೆಯೆ, ಈ ಕಡೆ ಮಾಜಿ ಸಚಿವ ರೋಷನ್ ಬೇಗ್ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ವಿಧಾನಸೌಧದಲ್ಲಿ ಅಶೋಕ್ ಬೇಟಿ ಮಾಡಿದ್ದ ರೋಷನ್ ಬೇಗ್ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಜೊತೆಗೆ ಮಾಜಿ ಸಚಿವ ಜಮೀರ್ ಅಹ್ಮದ್ ಅವರ ದೆಹಲಿ ಪ್ರಯಾಣಕ್ಕೂ, ರೋಷನ್ ಬೇಗ್ ಸಚಿವ ಆರ್. ಅಶೋಕ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿರುವುದಕ್ಕೂ ಒಂದಕ್ಕೊಂದು ಸಂಬಂಧವಿದೆ ಎಂದು ಮಾತುಗಳು ವಿಧಾನಸೌಧದಲ್ಲಿ ಕೇಳಿ ಬಂದಿವೆ. ಅಷ್ಟಕ್ಕೂ ಜಮೀರ್ ಅಹ್ಮದ್ ದಿಢೀರ್ ದೆಹಲಿಗೆ ಹೋಗಿದ್ಯಾಕೆ? ರೋಷನ್ ಬೇಗ್ ಸಚಿವ ಆರ್. ಅಶೋಕ್ರನ್ನು ಭೇಟಿ ಮಾಡಿರುವುದು ಜಮೀರ್ ದೆಹಲಿ ಭೇಟಿಗೆ ಸಂಬಂಧವಿದೆಯಾ? ಮುಂದಿದೆ ಮಾಹಿತಿ!
ಡಿಕೆಶಿ ಭೇಟಿ ಬಳಿಕ ದಿಢೀರ್ ದೆಹಲಿಗೆ ತೆರಳಿದ ಜಮೀರ್!
ಶುಕ್ರವಾರ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಚರ್ಚಿಸಿದ ಬಳಿಕ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಶನಿವಾರ ಬೆಳಗ್ಗೆ ದೆಹಲಿಗೆ ಹೋಗಿದ್ದಾರೆ. ದೆಹಲಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿಯೇ ಡಿ.ಕೆ. ಶಿವಕುಮಾರ್ ಅವರನ್ನು ಜಮೀರ್ ಅಹ್ಮದ್ ಭೇಟಿ ಮಾಡಿದ್ದರು ಎಂಬ ಮಾಹಿತಿ ಬಂದಿದೆ. ಹಿಂದೆ ಡಿ.ಕೆ. ಶಿವಕುಮಾರ್ ಎದುರಿಸಿದ್ದ ಇಡಿ ತನಿಖೆಯನ್ನು ಈಗ ಜಮೀರ್ ಎದುರಿಸುತ್ತಿದ್ದಾರೆ. ಹೀಗಾಗಿ ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ್ದ ಜಮೀರ್ ಅಹ್ಮದ್ ಈ ಎಲ್ಲವನ್ನೂ ಚರ್ಚೆ ಮಾಡಿದ್ದಾರೆ. ಅದಕ್ಕೆ ಡಿ.ಕೆ. ಶಿವಕುಮಾರ್ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ. ಡಿಕೆಶಿ ಸೂಚನೆಯಂತೆ ಜಮೀರ್ ದೆಹಲಿಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಡಿ.ಕೆ. ಶಿವಕುಮಾರ್ ಜಮೀರ್ಗೆ ಹೇಳಿದ್ದೇನು?
ವಿಚಾರಣೆಗೆ ಹಾಜರಾಗುವಂತೆ ಇಡಿ ಶಾಸಕ ಜಮೀರ್ ಅಹ್ಮದ್ಗೆ ನೋಟೀಸ್ ಕೊಟ್ಟಿದ್ದ ಹಿನ್ನೆಲೆಯಲ್ಲಿ ಡಿಕೆಶಿ ಜೊತೆಗೆ ಜಮೀರ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವ ಮೊದಲು ಹಿರಿಯ ನ್ಯಾಯವಾದಿಯನ್ನು ಅದರಲ್ಲೂ ಹಿರಿಯ ನ್ಯಾಯವಾದಿ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ರನ್ನು ಭೇಟಿ ಮಾಡಿ ಸಲಹೆ ಪಡೆಯುವಂತೆ ಡಿಕೆಶಿ ಜಮೀರ್ ಅಹ್ಮದ್ಗೆ ಸೂಚಿಸಿದ್ದಾರೆ. ಡಿಕೆಶಿ ಸಲಹೆಯಂತೆ ದೆಹಲಿಗೆ ತೆರಳಿರುವ ಜಮೀರ್ ಅಹ್ಮದ್ ಇಂದು ಅಥವಾ ನಾಳೆ ಖ್ಯಾತ ನ್ಯಾಯವಾದಿ ಕಪಿಲ್ ಸಿಬಲ್ ಭೇಟಿಗೆ ಪ್ರಯತ್ನ ನಡೆಸಿದ್ದಾರೆ. ಜೊತೆಗೆ ತನ್ನ ಪ್ರಕರಣದಲ್ಲೂ ವಕಾಲತ್ತು ಮಾಡುವಂತೆ ಜಮೀರ್ ಅಹ್ಮದ್ ಅವರು ಸಿಬಲ್ರಿಗೆ ಮನವಿ ಮಾಡಲಿದ್ದಾರೆ ಎಂಬ ಮಾಹಿತಿಯಿದೆ.
|
ಕುತೂಹಲ ಮೂಡಿಸಿದ ಬೇಗ್, ಅಶೋಕ್ ಭೇಟಿ!
ಶಾಸಕ ಜಮೀರ್ ಅಹ್ಮದ್ ದೆಹಲಿಗೆ ತೆರಳುತ್ತಲೇ ಮಾಜಿ ಸಚಿವ ರೋಷನ್ ಬೇಗ್ ಗಲಿಬಿಲಿಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಧಾನಸೌಧದಲ್ಲಿ ಕಂದಾಯ ಸಚಿವ ಅಶೋಕ್ರನ್ನು ರೋಷನ್ ಬೇಗ್ ಭೇಟಿ ಮಾಡಿದ್ದರು ಎಂಬ ಮಾಹಿತಿ ಬಂದಿದೆ. ಐಎಂಎ ಹಗರಣದ ಆರೋಪ ಹಿನ್ನೆಲೆಯಲ್ಲಿ ರೋಷನ್ ಬೇಗ್ ನಿವಾಸದ ಮೇಲೂ ಇಡಿ ದಾಳಿ ನಡೆದಿತ್ತು. ಈಗ ತಮಗೂ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಬಹುದೆಂಬ ಆತಂಕ ರೋಷನ್ ಬೇಗ್ ಅವರಿಗೆ ಎದುರಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಹೀಗಾಗಿಯೇ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ರೋಷನ್ ಬೇಗ್ ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇಬ್ಬರೂ ನಾಯಕರು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ ದೆಹಲಿ ಭೇಟಿ ಬಗ್ಗೆ ಶಾಸಕ ಜಮೀರ್ ಅಹ್ಮದ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ವೈಯಕ್ತಿಕ ಕೆಲಸ ಮೇಲೆ ದೆಹಲಿಗೆ ಬಂದಿದ್ದೆನೆ!
ದೆಹಲಿ ತಲುಪಿದ ಬಳಿಕ ಪ್ರತಿಕ್ರಿಯೆ ಕೊಟ್ಟಿರುವ ಶಾಸಕ ಜಮೀರ್ ಅಹ್ಮದ್, "ನಂಗೆ 'ಇಡಿ' ಇಲಾಖೆಯಿಂದ ಯಾವುದೇ ನೋಟೀಸ್ ಬಂದಿಲ್ಲ. ನೋಟೀಸ್ ಬಂದರೆ ಅದನ್ನು ಮಾಧ್ಯಮಗಳಿಗೆ ತೋರಿಸಿಯೇ ಬರುತ್ತೇನೆ. ನಂಗೆ ಇಡಿ ನೋಟೀಸ್ ಬಂದಿದೆ ಅನ್ನೋದು ಸುಳ್ಳು. ನನ್ನ ವೈಯಕ್ತಿಕ ಕೆಲಸಕ್ಕೆ ಬಂದಿದ್ದೇನೆ. ಫೇಸ್ ಬುಕ್ನಲ್ಲಿ ಬರೆದಿರುವುದು ನನ್ನ ಅಭಿಪ್ರಾಯವಷ್ಟೇ. ಅದನ್ನು ಯಾರೂ ತಿರುಚುವುದು ಬೇಡ" ಎಂದು ಹೇಳಿದ್ದಾರೆ. ಅಷ್ಟಕ್ಕೂ ಅವರು ಫೇಸ್ಬುಕ್ನಲ್ಲಿ ಏನು ಬರೆದುಕೊಂಡಿದ್ದರು? ಮುಂದಿದೆ ಮಾಹಿತಿದ!
ಜಮೀರ್ ಫೇಸ್ಬುಕ್ನಲ್ಲಿ ಹೇಳಿದ್ದೇನು?
ಈ ಎಲ್ಲ ಬೆಳವಣಿಗೆಗಳು ಚರ್ಚೆಗೆ ಕಾರಣವಾಗಿರುವುದು ಶುಕ್ರವಾರ ಅವರು ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡಿರುವ ವಿಚಾರಗಳು. "ನನ್ನ ಆಸ್ತಿಯೆಂದರೆ ನನ್ನ ಜನ. ನಾನು ರಾಜಕೀಯ ಜೀವನದಲ್ಲಿರುವವರೆಗೆ ನನ್ನ ಜನ ತಲೆತಗ್ಗಿಸುವಂತ ಯಾವ ಕೆಲಸವನ್ನೂ ಮಾಡುವುದಿಲ್ಲ. ನನ್ನ ಆಸ್ತಿಯೂ ಅವರೇ. ಇ.ಡಿ ದಾಳಿಯಿಂದ ಹಲವರ ಅನುಮಾನಗಳು ಪರಿಹಾರವಾದದ್ದೇ ನನಗೆ ಖುಷಿಯ ವಿಚಾರ. ನಾನು ಮನೆಯನ್ನು ಕಟ್ಟಿಸಿದ್ದೆ ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ. ಈ ಕಾರಣಕ್ಕಾಗಿ ನನ್ನ ಮೇಲೆ ಇ.ಡಿ ದಾಳಿಯಾಯಿತು. ಇ.ಡಿ ಯವರು ಯಾವ ನಿರೀಕ್ಷೆಯಿಂದ ನನ್ನ ಮೇಲೆ ದಾಳಿ ಮಾಡಿದ್ದರೋ ಆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ದೇಶದ ವಿವಿಧ ರಾಜ್ಯಗಳ ಪ್ರಬಲ ಮುಸ್ಲಿಂ ನಾಯಕರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅವರಿಗೆ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿದೆ. ಇಂತಹ ಷಡ್ಯಂತ್ರದ ಭಾಗವಾಗಿ ನನ್ನ ಮೇಲೂ ಹಲವು ರೀತಿ ದಾಳಿಗಳಾಗುತ್ತಿವೆ. ಆದರೆ ಇದ್ಯಾವುದಕ್ಕೂ ನಾನು ಹೆದರುವುದಿಲ್ಲ" ಎಂದು ಬರೆದು ಕೊಂಡಿದ್ದರು.