ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಸಚಿವ
ಬೆಂಗಳೂರು, ಮಾರ್ಚ್ 19: ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಕಾಂಗ್ರೆಸ್ನಲ್ಲಿ ಭಿನ್ನಮತ ಹುಟ್ಟುಹಾಕುತ್ತಿದೆ. ಇಂದು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಕಾಂಗ್ರೆಸ್ನಲ್ಲೇ ಎರಡು ಬಣಗಳಾಗಿವೆ.
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ವಿರುದ್ಧ ಬಣದಲ್ಲಿ ಗುರುತಿಸಿಕೊಂಡಿರುವ ದಾವಣೆಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಪರವಾಗಿರುವ ನೀರಾವರಿ ಸಚಿವ ಎಂ.ಬಿ.ಪಾಟೀಲ ಮತ್ತು ಗಣಿ ಮತ್ತು ಭೂ-ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಅವರ ಮೇಲೆ ಹರಿಹಾಯ್ದಿದ್ದಾರೆ.
LIVE: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದರೆ ಧರ್ಮಯುದ್ಧ
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿನಯ್ ಕುಲಕರ್ಣಿ ಅವರ ವಿರುದ್ಧ ಏಕವಚನಲ್ಲಿ ಸಂಭೋಧಿಸಿ 'ಕುಲಕರ್ಣಿ ಭಾರಿ ದೊಡ್ಡವನಂತೆ ಬೀಗುತ್ತಿದ್ದಾನೆ, ಡೈರಿ ಪಾರಂ ಮಾಡಿಕೊಂಡು ಭಾರಿ ಬೆಳೆದುಬಿಟ್ಟಿದ್ದಾನೆ, ನಾನಿಲ್ಲದೆ ಧಾರವಾಡದ ಪೇಡ ತಯಾರಾಗುವುದೇ ಇಲ್ಲ ಎಂದು ಕೊಂಡು ಬಿಟ್ಟಿದ್ದಾನೆ' ಎಂದು ಆಕ್ರೋಶ ಭರಿತವಾಗಿ ಮಾತನಾಡಿದರು.
ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರ ಬಗ್ಗೆಯೂ ಮಾತನಾಡಿದ ಅವರು ಧಿಡೀರ್ ಶ್ರೀಮಂತರಾದ್ರೆ ಹೀಗೆ ಆಗುವುದು, ಎಂ.ಬಿ.ಪಾಟೀಲ್ ಕಥೆಯೂ ಅಷ್ಟೆ, ಆತನಿಗೆ ದಿಢೀರ್ನೆ ಬಂದೊದಗಿದ ಸಚಿವ ಸ್ಥಾನ ಆತನ ತಲೆಯನ್ನು ತಿರುಗಿಸಿವೆ' ಎಂದು ಅವರು ಹೇಳಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸಚಿವ ಸಂಪುಟ ಸಭೆ ಬಗ್ಗೆ ಮಾತನಾಡಿದ ಅವರು, ಸಂಪುಟದಲ್ಲಿ ಎಲ್ಲವೂ ಚರ್ಚೆಗೆ ಬರುತ್ತವೆ ಅಲ್ಲಿ ಚರ್ಚೆ ಮಾಡಿ ಅವರ ಹುಳುಕು ಹೊರಹಾಕುತ್ತೀನಿ ಎಂದ ಅವರು ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡಿದರೆ ರಾಜಿನಾಮೆ ನೀಡುತ್ತೇನೆ ಎಂದು ಹೇಳಿಲ್ಲ, ಅದೆಲ್ಲಾ ಮಾಧ್ಯಮಗಳ ಸೃಷ್ಠಿ ಅಷ್ಟೆ ಎಂದರು..
ವರದಿ ಅಂಗೀಕರಿಸಿ, ಇಲ್ಲ ಹೋರಾಟ ಎದುರಿಸಿ: ಲಿಂಗಾಯತರ ಎಚ್ಚರಿಕೆ