ಉಪಚುನಾವಣೆ ಅಭ್ಯರ್ಥಿ, ಕ್ಷೇತ್ರ ಹಂಚಿಕೆ ಬಗ್ಗೆ ಅ.09 ಕ್ಕೆ ಕಾಂಗ್ರೆಸ್ ಸಭೆ
ಬೆಂಗಳೂರು, ಅಕ್ಟೋಬರ್ 08: ರಾಜ್ಯದಲ್ಲಿ ಮೂರು ಲೋಕಸಭೆ ಎರಡು ವಿಧಾನಸಭೆ ಉಪಚುನಾವಣೆಗೆ ದಿನಾಂಕ ಘೋಷಣೆ ಆಗಿದ್ದು. ಅಭ್ಯರ್ಥಿ ಆಯ್ಕೆಗೆ ನಾಳೆ (ಅಕ್ಟೋಬರ್ 09) ಕಾಂಗ್ರೆಸ್ ಪಕ್ಷವು ಸಭೆ ಸೇರಲಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಹಿರಿಯ ನಾಯಕ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಹಾಗೂ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಜಿಲ್ಲಾ ಉಸ್ತುವಾರಿ ಸಚಿವರುಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಉಪಚುನಾವಣೆ: 5 ಕ್ಷೇತ್ರಗಳ ಸಂಭಾವ್ಯ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳು
ಒಟ್ಟು ಐದು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದ್ದು, ಮೈತ್ರಿ ಸರ್ಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಯಾವ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಯಾವ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುತ್ತದೆ ಎಂಬುದನ್ನೂ ಸಹ ನಾಳೆ ಚರ್ಚಿಸಲಾಗುತ್ತದೆ.
ಎಲ್ಲೆಲ್ಲಿ ಚುನಾವಣೆ?
ಸಿ.ಎಸ್.ಪುಟ್ಟರಾಜು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಮಂಡ್ಯ ಲೋಕಸಭಾ ಕ್ಷೇತ್ರ. ಶ್ರೀರಾಮುಲು ರಾಜೀನಾಮೆ ಇಂದ ತೆರವಾದ ಬಳ್ಳಾರಿ ಕ್ಷೇತ್ರ, ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಶಿವಮೊಗ್ಗ ಲೋಕಸಭಾ ಕ್ಷೇತ್ರ ಹಾಗೂ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರ ಹಾಗೂ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರ ಅಕಾಲಿಕ ಮರಣದಿಂದ ತೆರವಾದ ಜಮಖಂಡಿ ಕ್ಷೇತ್ರದಲ್ಲಿ ಉಪ ಚುನಾವಣೆ ನವೆಂಬರ್ 3 ರಂದು ನಡೆಯಲಿದೆ.
ಬಳ್ಳಾರಿ ಲೋಕಸಭಾ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿಗೆ ದೊಡ್ಡ ಸವಾಲು
ಉಪ-ಚುನಾವಣೆ ಮೈತ್ರಿ ಬಗ್ಗೆ ಚರ್ಚೆ
ಒಟ್ಟಾಗಿ ಮುಂಬರುವ ಲೋಕಸಭೆ ಚುನಾವಣೆ ಎದುರಿಸುವ ನಿರ್ಧಾರ ಪ್ರಕಟಿಸಿರುವ ಜೆಡಿಎಸ್-ಕಾಂಗ್ರೆಸ್ ಪಕ್ಷವು ಉಪಚುನಾವಣೆಯಲ್ಲೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಆ ಬಗ್ಗೆ ನಾಳೆ ನಡೆಯುವ ಸಭೆಯಲ್ಲಿ ತೀರ್ಮಾನವಾಗಲಿದೆ. ಚುನಾವಣಾ ಮೈತ್ರಿ ಮಾಡಿಕೊಂಡರೆ ಯಾವ ಪಕ್ಷ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತದೆ ಎಂಬುದು ಮುಖ್ಯವಾಗುತ್ತದೆ.
ಬಳ್ಳಾರಿ ಲೋಕಸಭಾ ಉಪಚುನಾವಣೆ ಉಸ್ತುವಾರಿ ಡಿಕೆಶಿ ಹೆಗಲಿಗೆ
ಕಾಂಗ್ರೆಸ್ ಎಲ್ಲೆಲ್ಲಿ ಸ್ಪರ್ಧೆ ಸಾಧ್ಯತೆ?
ಕಾಂಗ್ರೆಸ್-ಜೆಡಿಎಸ್ ನಡುವೆ ಚುನಾವಣೆ ಮೈತ್ರಿ ಬಹುತೇಕ ಪಕ್ಕಾ. ಕಾಂಗ್ರೆಸ್ ಪಕ್ಷವು ಶಿವಮೊಗ್ಗದಲ್ಲಿ ಹಾಗೂ ಬಳ್ಳಾರಿಯಲ್ಲಿ ಸ್ಪರ್ಧಿಸಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ಸಾಧ್ಯತೆ ದಟ್ಟವಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿ ರಾಮನಗರದಲ್ಲಿ ಜೆಡಿಎಸ್ ಗೆ ಬಿಟ್ಟುಕೊಟ್ಟರೆ. ಜಮಖಂಡಿಯಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ.
ಉಪಚುನಾವಣೆಯಲ್ಲಿ ದೊಡ್ಡ ನಾಯಕರ ಪ್ರತಿಷ್ಠೆಯ ದಂಗಲ್
ಚುನಾವಣಾ ಉಸ್ತುವಾರಿ ನೇಮಕ
ಉಪಚುನಾವಣೆಗೆ ಉಸ್ತುವಾರಿ ನೇಮಕವೂ ನಾಳಿನ ಸಭೆಯಲ್ಲಿ ಅಂತ್ಯಗೊಳ್ಳಲಿದೆ. ಕಾಂಗ್ರೆಸ್ ಸ್ಪರ್ಧಿಸುವ ಉಳಿದ ಕ್ಷೇತ್ರಗಳಿಗೂ ಉಸ್ತುವಾರಿಯನ್ನು ನೇಮಿಸಲಾಗುತ್ತದೆ. ಬಳ್ಳಾರಿ ಜಿಲ್ಲೆ ಲೋಕಸಭಾ ಕ್ಷೇತ್ರ ಚುನಾವಣೆ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ಅವರ ಹೆಗಲಿಗೆ ವಹಿಸುವ ಸಾಧ್ಯತೆ ಹೆಚ್ಚಿದೆ. ಹೀಗಾದಲ್ಲಿ ಬಳ್ಳಾರಿ ಚುನಾವಣೆ ಶ್ರೀರಾಮುಲು v/s ಡಿ.ಕೆ.ಶಿವಕುಮಾರ್ ಎಂದೆನಿಸಿಕೊಳ್ಳಲಿದೆ.
ಪ್ರಚಾರ ತಂತ್ರ, ರಣತಂತ್ರ
ಈ ಉಪಚುನಾವಣೆಯಲ್ಲಿ ವಿಧಾನಸಭೆ ಚುನಾವಣೆಗಿಂತ ಲೋಕಸಭೆ ಚುನಾವಣೆ ಹೆಚ್ಚು ಪ್ರತಿಷ್ಠೆಯ ಕಣವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅದರಲ್ಲೂ ಶಿವಮೊಗ್ಗ ಮತ್ತು ಬಳ್ಳಾರಿ ಕ್ಷೇತ್ರಗಳು ಬಿಜೆಪಿ, ಕಾಂಗ್ರೆಸ್ಗೆ ಭಾರಿ ಪ್ರತಿಷ್ಠೆಯ ಕಣವಾಗಲಿವೆ. ಹಾಗಾಗಿ ಪ್ರಚಾರ ಹಾಗೂ ಚುನಾವಣಾ ರಣತಂತ್ರಗಳ ಬಗ್ಗೆಯೂ ನಾಳಿನ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಗುತ್ತದೆ.
ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳು ಯಾರ್ಯಾರು?
ಜಮಖಂಡಿ ವಿಧಾನಸಭೆ ಚುನಾವಣೆಗೆ ದಿವಂಗತ ಶಾಸಕ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮಗೌಡ ಅವರಿಗೆ ಟಿಕೆಟ್ ಪಕ್ಕಾ ಆಗಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಎದುರುಗಡೆ ಕಾಂಗ್ರೆಸ್ನ ಕಿಮ್ಮನೆ ರತ್ನಾಕರ ಅಥವಾ ಮಂಜುನಾಥ ಬಂಡಾರಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಬಳ್ಳಾರಿ ಕ್ಷೇತ್ರದಿಂದ ಎಂ.ರಾಮಪ್ರಸಾದ್ ಹೆಸರು ಕೇಳಿಬರುತ್ತಿದ್ದು ಅವರೇ ಅಂತಿಮ ಆಯ್ಕೆ ಆಗುವ ಸಾಧ್ಯತೆ ಇದೆ.