ಎನ್.ಎ.ಹ್ಯಾರೀಸ್ 'ಕೈ' ತಪ್ಪಲಿದೆಯೇ ಶಾಂತಿನಗರದ ಟಿಕೆಟ್?
ಬೆಂಗಳೂರು, ಫೆಬ್ರವರಿ 23 : ಮೊಹಮ್ಮದ್ ನಲಪಾಡ್ ಯು.ಬಿ.ಸಿಟಿಯಲ್ಲಿ ರದ್ದಾಂತ ಮಾಡಿ ಜೈಲು ಸೇರಿದ್ದಾರೆ. ಇತ್ತ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರೀಸ್ ಅವರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ. ಈ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಮೊಹಮ್ಮದ್ ನಲಪಾಡ್ ಪ್ರಕರಣವನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ತೆಗೆದುಕೊಂಡಿದೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ, ಆದ್ದರಿಂದ, ಪಕ್ಷ ತನ್ನ ಇಮೇಜ್ ಉಳಿಸಿಕೊಳ್ಳಲು ಪ್ರಯತ್ನ ಮಾಡಲಿದೆ.
ಯುಬಿ ಸಿಟಿಯಿಂದ ಜೈಲು : ನಲಪಾಡ್ ಪ್ರಕರಣದ 10 ಬೆಳವಣಿಗೆ
ಎನ್.ಎ.ಹ್ಯಾರೀಸ್ ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ. ಬೆಂಗಳೂರು ನಗರದ ಕಾಂಗ್ರೆಸ್ ಶಾಸಕರು ಮತ್ತು ನಾಯಕರು ಟಿಕೆಟ್ ನೀಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂಬ ಸುದ್ದಿಗಳು ಹಬ್ಬಿದೆ.
ಎನ್.ಎ.ಹ್ಯಾರೀಸ್ ಶಾಂತಿನಗರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದಾರೆ. 2008ರ ಚುನಾವಣೆಯಲ್ಲಿ 42,423 ಮತ, 2013ರ ಚುನಾವಣೆಯಲ್ಲಿ 54,342 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದರು.
ಆದರೆ, ಪುತ್ರ ಮೊಹಮ್ಮದ್ ನಲಪಾಡ್ ಮಾಡಿದ ರಂಪಾಟದಿಂದಾಗಿ ಹ್ಯಾರೀಸ್ಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ. ಹ್ಯಾರೀಸ್ ಅವರ ಬದಲು ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡಿ ಎಂದು ಒತ್ತಾಯಿಸಲಾಗುತ್ತಿದೆ.
ಕಾಂಗ್ರೆಸ್ ಪಕ್ಷದ ಯಾವ ನಾಯಕರು ಸಹ ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್ ಸಹ ಟಿಕೆಟ್ ಹಂಚಿಕೆಯ ಬಗ್ಗೆ ಇನ್ನೂ ಗಮನಹರಿಸಿಲ್ಲ. ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಟಿಕೆಟ್ ಹಂಚಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಎನ್.ಎ.ಹ್ಯಾರೀಸ್ ಅವರಿಗೆ ಟಿಕೆಟ್ ಸಿಗಲಿದೆಯೇ? ಕಾದು ನೋಡಬೇಕು.