ಎಚ್ ಡಿಕೆ ಏಟಿಗೆ ಕೈ ವಿಲವಿಲ, ತೈಲ ಬೆಲೆ ಏರಿಕೆ ವಾಪಸ್ ಗೆ ಚಿಂತನೆ
Recommended Video
ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡುವ ತೀರ್ಮಾನವನ್ನು ರಾಜ್ಯ ಸರಕಾರ ಹಿಂಪಡೆಯುವ ಸಾಧ್ಯತೆಗಳಿವೆ. ರೈತರ ಸಾಲ ಮನ್ನಾದಿಂದ ಮೈತ್ರಿ ಸರಕಾರಕ್ಕೆ ವರ್ಚಸ್ಸು ಹೆಚ್ಚುತ್ತದೆ ಎಂಬ ಲೆಕ್ಕಾಚಾರವೇ ಇತ್ತು. ಆದರೆ ರೈತರ ಸಾಲ ಮನ್ನಾ ಮಾಡುವ ಅವಧಿಯ ಮಧ್ಯೆ ಕೇಳಿಬಂದ ಎಷ್ಟೋ ಮಾತುಗಳಿಂದ ಈ ಸರಕಾರ ಹಾಗೂ ಕುಮಾರಸ್ವಾಮಿ ಅವರ ಬಗ್ಗೆ ಬೇಸರ ಬಂದುಹೋಗಿತ್ತು.
ಎಲ್ಲ ಬಣ್ಣವನ್ನು ಮಸಿ ನುಂಗಿತು ಎಂಬ ಮಾತೊಂದಿದೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರಕ್ಕೆ ಈ ಮಾತು ಸರಿಯಾಗಿ ಒಪ್ಪುತ್ತದೆ. ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಮಾತಿನಂತೆ ಕೃಷಿ ಸಾಲ ಮನ್ನಾದ ಘೋಷಣೆಯನ್ನೇನೋ ಮಾಡಿದರು ಮುಖ್ಯಮಂತ್ರಿ ಕುಮಾರಸ್ವಾಮಿ. ಆದರೆ ಇದರಿಂದ ರೈತರೂ ಸಂತುಷ್ಟರಾಗಲಿಲ್ಲ. ಇತರ ವರ್ಗಕ್ಕೂ ಸಮಾಧಾನ ಆಗಲಿಲ್ಲ.
ಸಾಲಮನ್ನಾ ಹಿಂದಿನ ಜಾತಿ ಲೆಕ್ಕದ ಬಗ್ಗೆ ಕೇಳಲಾದ ಪ್ರಶ್ನೆಗೆ ದೇವೇಗೌಡರು ಗರಂ
ಅದಕ್ಕೆ ಕಾರಣವಾಗಿದ್ದು ಪೆಟ್ರೋಲ್ -ಡೀಸೆಲ್ ಸೆಸ್ ಹೆಚ್ಚಿಸಿದ್ದರಿಂದ ಎಲ್ಲ ವರ್ಗಕ್ಕೂ ಸಹಜವಾಗಿವೇ ಅಸಮಾಧಾನವಾಗಿದೆ. ಕೃಷಿಕರ ಸಾಲ ಮನ್ನಾ ಮಾಡಿದ್ದರಿಂದ ಲೋಕಸಭೆ ಚುನಾವಣೆ ಹೊತ್ತಿಗೆ ಲಾಭ ಆಗಬಹುದು ಎಂಬ ಲೆಕ್ಕಾಚಾರ ಏನಿತ್ತು, ಅದು ಮುಖ್ಯವಾಗಿ ಕಾಂಗ್ರೆಸ್ ಗೆ ಉಲ್ಟಾ ಹೊಡೆಯುತ್ತದೆ ಎಂಬ ಸಂದೇಶ ರವಾನೆ ಆಗುತ್ತಿದ್ದಂತೆ ಎಚ್ಚೆತ್ತ ಕೈ ಹೈಕಮಾಂಡ್, ಪೆಟ್ರೋಲ್- ಡೀಸೆಲ್ ಸೆಸ್ ಏರಿಕೆ ನಿರ್ಧಾರ ಹಿಂಪಡೆಯುವಂತೆ ಈಗಾಗಲೇ ಕೇಳಿಕೊಂಡಿದೆ ಎಂಬ ಮಾಹಿತಿ ಹರಿದಾಡುತ್ತಿದೆ.
ಹಳ್ಳ ಹಿಡಿದ ಕಾಂಗ್ರೆಸ್ ಹೋರಾಟ
ಕಳೆದ ಗುರುವಾರ ಬಜೆಟ್ ಮಂಡನೆ ವೇಳೆ ಪೆಟ್ರೋಲ್- ಡೀಸೆಲ್ ಮೇಲಿನ ಸೆಸ್ ಅನ್ನು ಶೇಕಡಾ ಎರಡರಷ್ಟು ಏರಿಕೆ ಮಾಡುವ ಪ್ರಸ್ತಾವ ಇಟ್ಟಿದ್ದಾರೆ ಕುಮಾರಸ್ವಾಮಿ. ಅವರ ಮಹಾತ್ವಾಕಾಂಕ್ಷೆಯ ಹಾಗೂ ಪ್ರತಿಷ್ಠೆಯ ಕೃಷಿ ಸಾಲ ಮನ್ನಾಕ್ಕಾಗಿ 34 ಸಾವಿರ ಕೋಟಿ ರುಪಾಯಿ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಇದು ಅನಿವಾರ್ಯ ಆಗಿತ್ತು. ಈ ನಿರ್ಧಾರ ಮುಖ್ಯವಾಗಿ ಕಾಂಗ್ರೆಸ್ ಗೆ ಬಿಸಿ ತುಪ್ಪವಾಗಿತ್ತು. ಏಕೆಂದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರಬಲವಾಗಿ ಬಳಸುತ್ತಿರುವ ಅಸ್ತ್ರ ತೈಲ ಬೆಲೆ ಏರಿಕೆಯದು. ಯಾವಾಗ ಮೈತ್ರಿ ಸರಕಾರದಲ್ಲಿರುವ ಜೆಡಿಎಸ್ ನ ಕುಮಾರಸ್ವಾಮಿ ಅವರೇ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಗೆ ಮುಂದಾದರೋ ಅಲ್ಲಿಗೆ ಕಾಂಗ್ರೆಸ್ ನ ಹೋರಾಟ ಹಳ್ಳ ಹಿಡಿದಂತಾಯಿತು.
ಚರ್ಚೆಯೇ ಮಾಡದೆ ತೆಗೆದುಕೊಂಡ ನಿರ್ಧಾರ
ದಿಢೀರ್ ಎಚ್ಚರವಾದ ಕಾಂಗ್ರೆಸ್, ನಮ್ಮ ಹತ್ತಿರ ಈ ಬಗ್ಗೆ ಚರ್ಚೆಯೇ ಮಾಡದೆ ಕುಮಾರಸ್ವಾಮಿ ಅವರು ಬೆಲೆ ಏರಿಸುವ ನಿರ್ಧಾರ ಕೈಗೊಂಡಿದ್ದಾರೆ. ಈ ಪ್ರಸ್ತಾವವನ್ನು ವಾಪಸ್ ಪಡೆಯುವಂತೆ ಹೇಳ್ತೀವಿ. ಲೋಕಸಭೆ ಚುನಾವಣೆಯನ್ನು ಕಣ್ಣೆದುರು ಇಟ್ಟುಕೊಂಡು ಇಂಥ ತಪ್ಪು ಹೆಜ್ಜೆ ಇರಿಸಲು ಹೇಗೆ ಸಾಧ್ಯ ಎಂದು ಕೈ ಪಕ್ಷದ ಹಿರಿಯ ನಾಯಕರು ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನ ಪಟ್ಟಿದ್ದಾರೆ.
ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡರು
ಮೋದಿ ಆಡಳಿತಾವಧಿಯಲ್ಲಿ ಪೆಟ್ರೋಲ್- ಡೀಸೆಲ್ ದರ ಏರಿಕೆ ಆಗಿಹೋಯಿತು ಎಂದು ಕಾಂಗ್ರೆಸ್ ಕಣ್ಣೀರು ಹಾಕುತ್ತಿರುವುದು ಆಷಾಢಭೂತಿತನ ಅಂತ ಒಂದು ಕಡೆ ಬಿಜೆಪಿಯವರು, ಮತ್ತೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಝಾಡಿಸಲು ಶುರು ಮಾಡಿದ್ದಾರೆ. ಇನ್ನೂ ಕೆಲವರು ಕರ್ನಾಟಕದಲ್ಲಿನ ಮೈತ್ರಿ ಸರಕಾರ ತೈಲ ಬೆಲೆ ಏರಿಕೆ ಮಾಡಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಮನ್ವಯ ಸಮಿತಿಯಲ್ಲಿ ಚರ್ಚೆ ಆಗಿರಲಿಲ್ಲ
ಜೆಡಿಎಸ್ ನ ಹಿರಿಯ ನಾಯಕರೊಬ್ಬರು ನೀಡಿರುವ ಮಾಹಿತಿ ಪ್ರಕಾರವೇ ಹೇಳುವುದಾದರೆ, ಬಜೆಟ್ ಪೂರ್ವ ಚರ್ಚೆಯ ಸಂದರ್ಭದಲ್ಲಿ ತೈಲ ಬೆಲೆ ಏರಿಕೆ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯೇ ಆಗಿಲ್ಲ. ಆ ಸಮಿತಿ ಸಭೆಯಲ್ಲಿ ಸಾಲ ಮನ್ನಾ ಮಾಡುವುದಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು. ಹಾಗೂ ಅದಕ್ಕೆ ಬೇಕಾದ ಸಂಪನ್ಮೂಲ ಕ್ರೋಡೀಕರಣಕ್ಕೆ ಯೋಜನೆ ರೂಪಿಸಿಕೊಳ್ಳಿ ಎಂದಷ್ಟೇ ತಿಳಿಸಲಾಗಿತ್ತು. ಹೀಗೆ ತೈಲ ಬೆಲೆ ಏರಿಕೆ ಮಾಡಬಹುದು ಎಂಬ ಯಾವ ಸುಳಿವು ಕೂಡ ಕಾಂಗ್ರೆಸ್ ಗೆ ಇರಲೇ ಇಲ್ಲ ಎನ್ನುತ್ತಾರೆ ಆ ನಾಯಕರು. ಆ ಕಾರಣಕ್ಕೆ ಮುಂದಿನ ವಾರ ತೈಲ ಬೆಲೆ ಏರಿಕೆ ನಿರ್ಧಾರವನ್ನು ವಾಪಸ್ ಪಡೆಯುತ್ತಾರೆ ಅಂತಲೂ ಸೇರಿಸುತ್ತಾರೆ.