ಕಾಂಗ್ರೆಸ್ ಡಬಲ್ ಡೋರ್ ಬಸ್: ಸಚಿವ ಸುಧಾಕರ್ ವ್ಯಂಗ್ಯ
ಬೆಂಗಳೂರು, ಆಗಸ್ಟ್ 11: "ಕಾಂಗ್ರೆಸ್ ನಾಯಕರು ರಾಜಕೀಯ ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿಯೇ ಅವರೆಲ್ಲ ನಾಯಕತ್ವ ಬದಲಾವಣೆ ಕುರಿತು ಸುಳ್ಳು ಸುದ್ದಿ ಹರಡುವ ಮೂಲಕ ತಾವು ಸುದ್ದಿಯಲ್ಲಿರುವ ಪ್ರಯತ್ನಿಸುತ್ತಿದ್ದಾರೆ" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕಿಡಿ ಕಾರಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, "ನಾಯಕತ್ವ ಬದಲಾವಣೆ ಕುರಿತು ಸುಳ್ಳು ಸುದ್ದಿ ಹೇಳುವ ಮೂಲಕ ರಾಜಕೀಯ ನಿರುದ್ಯೋಗಿಗಳಾಗಿರುವ ಕಾಂಗ್ರೆಸ್ ನಾಯಕರು ತಾವು ಸುದ್ದಿಯಲ್ಲಿರಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯವಾಗಿ ಕ್ರಿಯಾಶೀಲರಾಗಿರಲು ಕಾಂಗ್ರೆಸ್ ನಾಯಕರು ಹೆಣಗಾಡುತ್ತಿದ್ದಾರೆ. ಅವರ ಈ ಅಜ್ಞಾನಕ್ಕೆ ನಗಬೇಕು" ಎಂದು ಲೇವಡಿ ಮಾಡಿದರು.
1947ರ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ಸೇ ಬೇರೆ: ಎಚ್ಡಿಕೆ ಕಿಡಿ
"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಾನ ಬದಲಾವಣೆ ಕುರಿತು ಮಾಜಿ ಶಾಸಕರು ಹೇಳಿಕೆ ನೀಡಿದ್ದರೆ, ಅದಕ್ಕೆ ಅವರೇ ಜವಾಬ್ದಾರಿ ಆಗುತ್ತಾರೆ ಹೊರತು ಪಕ್ಷವಲ್ಲ. ಈ ವಿಚಾರದಲ್ಲಿ ಪಕ್ಷವನ್ನು ಹೊಣೆಯಾಗಿಸಲು ಸಾಧ್ಯವಿಲ್ಲ. ನಾಯಕತ್ವ ಬದಲಾವಣೆ ಕೇವಲ ಊಹಾಪೋಹ" ಎಂದರು.
"ಮುಂದಿನ ವಿಧಾನಸಭಾ ಚುನಾವಣೆಯನ್ನು ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ವರಿಷ್ಠರು ಹೇಳಿದ್ದಾರೆ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದರು.
"ಮುಖ್ಯಮಂತ್ರಿಯಾಗಿ ಅತ್ಯಂತ ಕಡಿಮೆ ಅವಧಿಯಲ್ಲೇ ಬಸವರಾಜ ಬೊಮ್ಮಾಯಿ ರಾಜ್ಯದ ರೈತರು, ಮಹಿಳೆಯರು, ಯುವಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಡಳಿತವನ್ನು ಉತ್ತಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಸರ್ಕಾರ ಜನಪರವಾದದ್ದು ಎಂದು ತೋರಿಸಿಕೊಟ್ಟಿದ್ದಾರೆ. ಮುಖ್ಯವಾಗಿ ಕೇಂದ್ರ ನಾಯಕರ ಜೊತೆಗೆ ಉತ್ತಮ ಸಂಬಂಧ ಇರಿಸಿಕೊಳ್ಳಲು ಬೊಮ್ಮಾಯಿ ಅವರು ಆಗಾಗ್ಗೆ ದೆಹಲಿಗೆ ಹೋಗುತ್ತಾರೆ. ಅಧಿಕಾರದಲ್ಲಿರುವ ಪಕ್ಷದ ರಾಜ್ಯ ನಾಯಕರು ಕೇಂದ್ರ ಹೈಕಮಾಂಡ್ ಭೇಟಿ ಮಾಡುವುದು ಸಹಜ ವಿಚಾರ" ಎಂದು ಸುಧಾಕರ್ ವಿವರಿಸಿದರು.
ಕಾಂಗ್ರೆಸ್ ಬಸ್ಗೆ 2 ಸ್ಟೇರಿಂಗ್; "ಪ್ರಸ್ತುತ ಕಾಂಗ್ರೆಸ್ ಪಕ್ಷ ಈಗ ಡಬಲ್ ಡೋರ್ ಬಸ್ನಲ್ಲಿ ಪ್ರಯಾಣಿಸುತ್ತಿದೆ. ಈ ಬಸ್ನಿಂದ ಯಾರನ್ನು ಮೊದಲು ಇಳಿಸುತ್ತಾರೋ ಗೊತ್ತಿಲ್ಲ. ಈ ಬಸ್ಗೆ ಎರಡು ಸ್ಟೇರಿಂಗ್ ಇದ್ದು, ಒಬ್ಬರು ಒಂದು ಕಡೆ ತಿರುಗಿಸಿದರೆ, ಮತ್ತೊಬ್ಬರು ಇನ್ನೊಂದು ಕಡೆಗೆ ತಿರುಗಿಸುತ್ತಿದ್ದಾರೆ. ಯಾವಾಗ ಯಾವ ಕಡೆಗೆ ಹೋಗುವುದೋ ಗೊತ್ತಿಲ್ಲ" ಎಂದು ಸುಧಾಕರ್ ವಂಗ್ಯವಾಡಿದರು.