ಕರ್ನಾಟಕ ಬಜೆಟ್ 2020-21; ಯಾರು ಏನಂದ್ರು? ಪ್ರಮುಖರ ಪ್ರತಿಕ್ರಿಯೆಗಳು ಇಲ್ಲಿವೆ
ಬೆಂಗಳೂರು, ಮಾರ್ಚ್ 5: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ೨೦೨೦-೨೧ ನೇ ಸಾಲಿನ ಕರ್ನಾಟಕದ ಆಯವ್ಯಯವನ್ನು ಮಂಡಿಸಿದರು. ೨.೩೭ ಲಕ್ಷ ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡಿಸಿರುವ ಅವರು ಹಲವು ವಸ್ತುಗಳ ಬೆಲೆ ಏರಿಕೆ ಮೂಲಕ ಆರ್ಥಿಕ ಸಮತೋಲ ಸಾಧಿಸಲು ಹೊರಟಿದ್ದಾರೆ.
ಆದರೆ, ಯಡಿಯೂರಪ್ಪ ಅವರ ಈ ಬಜೆಟ್ಗೆ ಕಾಂಗ್ರೆಸ್ ಪಾಳಯದಿಂದ ತೀವ್ರ ಟೀಕೆಗಳು ಕೇಳಿ ಬಂದಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಸೇರಿದಂತೆ ಅನೇಕರು ಯಡಿಯೂರಪ್ಪ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ
ಇಂದಿನ ಬಜೆಟ್ ಬಗ್ಗೆ ಕಾಂಗ್ರೆಸ್ ಪ್ರಮುಖ ನಾಯಕರು ಪ್ರತಿಕ್ರಿಯೆಗಳು ಇಲ್ಲಿವೆ...
ಎಲ್ಲವೂ ಗುಪ್ತವಾಗಿದೆ
ಈ ಬಜೆಟ್ನಲ್ಲಿ ಒಂದೇ ಒಂದು ಹೊಸ ಕಾರ್ಯಕ್ರಮ ಇಲ್ಲ. ಭಾಗ್ಯಲಕ್ಷ್ಮೀ, ಸೈಕಲ್ ಕೊಡುವುದನ್ನಷ್ಟೇ ಹೇಳಿದ್ದಾರೆ. ಆಹಾರ ಇಲಾಖೆಗೆ ಶೇ.1 ರಷ್ಟು ಕಡಿಮೆ ಅನುದಾನ ಇಟ್ಟಿದಾರೆ. ಅನ್ನಭಾಗ್ಯದ ಬಗ್ಗೆ ಸ್ಪಷ್ಟತೆ ಇಲ್ಲ. ಎಲ್ಲವೂ ಗುಪ್ತವಾಗಿದೆ. ಬಹಿರಂಗಪಡಿಸಿಲ್ಲ. ರೈತ ವಿರೋಧಿ ಬಜೆಟ್, ಮುನ್ನೋಟ ಇಲ್ಲದ ಬಜೆಟ್. ಸಾಮಾಜಿಕ ನ್ಯಾಯಕ್ಕೆ ಹೊಡೆತ ಬಿದ್ದಿದೆ. ಆದ್ಯತಾ ವಲಯಗಳಿಗೆ ಒತ್ತು ಕೊಟ್ಟಿಲ್ಲ. ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಅನ್ಯಾಯ ಆಗಿದೆ.
ದೊಡ್ಡ ಅನ್ಯಾಯ ಮಾಡಿದ್ದಾರೆ; ಡಿಕೆಶಿ
ಯಡಿಯೂರಪ್ಪ ಕಳೆದ ನಾಲ್ಕು ತಿಂಗಳು ಹಿಂದೆ ತುಂಬಾ ಹುರುಪಿನಿಂದ ಸರ್ಕಾರ ಮಾಡಿದರು. ಆದರೆ, ಅದರಂತೆ ಬಜೆಟ್ ಮಂಡನೆ ಮಾಡಿಲ್ಲ. ಕರ್ನಾಟಕಕ್ಕೆ ಯಡಿಯೂರಪ್ಪ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಒತ್ತಡಗಳಿಗೆ ಒಳಗಾಗಿ ಯಡಿಯೂರಪ್ಪ ಅವರು ಕೆಲವು ಭರವಸೆಗಳನ್ನು ನೀಡಿದ್ದಾರೆ. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಯಡಿಯೂರಪ್ಪ ಅವರನ್ನು ದೇವರೇ ಕಾಪಾಡಬೇಕು ಎಂದು ಡಿಕೆಶಿ ಹೇಳಿದ್ದಾರೆ.
ಹಿಂದುಳಿದ ತಾಲೂಕುಗಳಿಗೆ ಅನ್ಯಾಯ
ರಾಜ್ಯದ 2020-21 ಬಜೆಟ್ ಮಂಡನೆ ಯಾಗಿದೆ. ಇಂತಹ ಕೆಟ್ಟ ಬಜೆಟ್ ನಾನು ಯಾವಾಗಲೂ ನೋಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ. ಇದೊಂದು ನಿರಾಶಾದಾಯಕವಾದ ಬಜೆಟ್. ರೈತರೇ ಅನ್ನದಾತ ಅನ್ನೋ ಮಾತು ಕೇವಲ ಬಾಯಿ ಮಾತಿಗೆ ಮಾತ್ರ. ಕೃಷಿ ಉತ್ಪಾದನೆ ಕಡಿಮೆ ಆಗುತ್ತಿದೆ. ಒಟ್ಟಿಗೆ 12 ಸಾವಿರ ಕೋಟಿ ಕೇಂದ್ರ ದಿಂದ ಜಿ ಎಸ್ ಟಿ ಪಾಲು ಬರಬೇಕಿತ್ತು. ಆದರೆ, ನಮ್ಮ ರಾಜ್ಯಕ್ಜೆ ಅನ್ಯಾಯ ಆಗಿದೆ. ನಮ್ಮ ರಾಜ್ಯಕ್ಕೆ ಕೇಂದ್ರ ತೆರಿಗೆ ಪಾಲು ಕೊಡಬೇಕು ಅಂತ ತಿರ್ಮಾನ ಆಗಿದೆ. ಹಿಂದುಳಿದ ತಾಲೂಕುಗಳಿಗೂ ಅನುದಾನ ಸರಿಯಾಗಿ ನೀಡಿಲ್ಲ ಎಂದು ಟೀಕೆ ಮಾಡಿದ್ದಾರೆ.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ
ಬಿಜೆಪಿ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಡುಗೆ ಶೂನ್ಯ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಪ್ರೀಯಾಂಕ್ ಖರ್ಗೆ ಹೇಳಿದ್ದಾರೆ. ಹೈದ್ರಾಬಾದ್ ಕರ್ನಾಟಕ ಬದಲು ಕಲ್ಯಾಣ ಕರ್ನಾಟಕ ನಾಮಕರಣದಿಂದ ಜನರ ಭವಿಷ್ಯ ಬದಲಾಗುವುದಿಲ್ಲ. ಕಾಂಗ್ರೆಸ್ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ರಾಜೀನಾಮೆ ನೀಡಿದ ರಾಜಕಾರಣಿಗಳು ಈಗ ಎಲ್ಲಿದಾರೆ? ಎಂದು ಟ್ವಿಟರ್ನಲ್ಲಿ ರಾಜ್ಯ ಸರ್ಕಾರವನ್ನ ಪ್ರಿಯಾಂಕ್ ಖರ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.