ಕಾಂಗ್ರೆಸ್ಗೆ ಇನ್ನೂ ಕಾಡುತ್ತಿದೆ 'ಆಪರೇಷನ್' ಭಯ: ಇಂದು ಶಾಸಕರೊಂದಿಗೆ ಮತ್ತೆ ಸಭೆ
ಬೆಂಗಳೂರು, ಜನವರಿ 19: ಕಾಂಗ್ರೆಸ್ ಶಾಸಕರೊಂದಿಗೆ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಉಳಿದ ಮುಖಂಡರು ಶನಿವಾರ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ.
ಬಿಜೆಪಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪ್ರಯತ್ನ ಮುಂದುವರಿಸಿದೆ. ಹೀಗಾಗಿ ಶಾಸಕರನ್ನು ರಕ್ಷಿಸಿಕೊಳ್ಳಲು ಅವರನ್ನು ರೆಸಾರ್ಟ್ನಲ್ಲಿಯೇ ಇರಿಸಿಕೊಳ್ಳಲಾಗಿದೆ.
ಶುಕ್ರವಾರವಷ್ಟೇ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಗಿತ್ತು. ಅದರಲ್ಲಿ ಮುಂದಿನ ನಡೆಯ ಬಗ್ಗೆ ಚರ್ಚಿಸಲಾಗಿತ್ತು. ಅಲ್ಲದೆ, ತಮ್ಮ ಶಾಸಕರು ಕೈ ಜಾರಿ ಬಿಜೆಪಿ ಪಾಳೆಯಕ್ಕೆ ಬೀಳದಂತೆ ತಡೆಯಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಚರ್ಚೆ ನಡೆದಿತ್ತು.
ಬೆಳಿಗ್ಗೆ ರೆಸಾರ್ಟ್ ರಾಜಕೀಯಕ್ಕೆ ಛೀ ಎಂದರು, ಸಂಜೆ ತಾವೇ ರೆಸಾರ್ಟ್ಗೆ ಹೋದರು
80 ಶಾಸಕರ ಪೈಕಿ 76 ಶಾಸಕರು ಸಭೆಗೆ ಹಾಜರಾಗಿದ್ದರೂ ಕಾಂಗ್ರೆಸ್ ಆತಂಕ ಕಡಿಮೆಯಾಗಿಲ್ಲ. ಸಭೆಗೆ ಹಾಜರಾಗಿದ್ದ ಶಾಸಕರಲ್ಲಿಯೂ ಅನೇಕ ಅತೃಪ್ತರಿದ್ದಾರೆ. ಅವರನ್ನು ಸೆಳೆದುಕೊಳ್ಳಲು ಬಿಜೆಪಿ ಯಾವುದೇ ಪ್ರಯತ್ನ ನಡೆಸಬಹುದು ಎಂಬ ಕಳವಳ 'ಕೈ' ನಾಯಕರಲ್ಲಿದೆ.
ಮಧ್ಯಾಹ್ನ ರೆಸಾರ್ಟ್ನಲ್ಲಿ ಸಭೆ
ಬಿಡದಿಯ ಈಗಲ್ಟನ್ ರೆಸಾರ್ಟ್ ಮತ್ತು ವಂಡರ್ಲಾದಲ್ಲಿ ತಂಗಿರುವ ಶಾಸಕರನ್ನು ಮಧ್ಯಾಹ್ನ 12 ಗಂಟೆ ಸುಮಾರಿಗೆ ಒಂದೆಡೆ ಸೇರಿಸಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಹೀಗಾಗಿ ತಮ್ಮ ಜೊತೆ ಇರುವ ಶಾಸಕರನ್ನು ಮತ್ತೆ ಒಂದೆಡೆ ಸೇರಿಸಿ ಬಿಜೆಪಿಗೆ ಬೆಂಬಲ ನೀಡಿದರೆ ಆಗುವ ಪರಿಣಾಮಗಳೇನು ಎಂಬುದರ ಬಗ್ಗೆ ಎಚ್ಚರಿಕೆ ನೀಡಲು ಹಾಗೂ ಆಪರೇಷನಲ್ ಕಮಲ ನಡೆಸಿದರೆ ಅದನ್ನು ಹೇಗೆ ಎದುರಿಸಬಹುದು ಎಂಬ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
48 ಶಾಸಕರು ಈಗಲ್ಟನ್ ರೆಸಾರ್ಟ್ನಲ್ಲಿದ್ದರೆ, ಅಲ್ಲಿಂದ 15 ನಿಮಿಷ ದೂರದಲ್ಲಿರುವ ವಂಡರ್ಲಾದಲ್ಲಿ 13 ಶಾಸಕರು ಉಳಿದುಕೊಂಡಿದ್ದಾರೆ.
ಗುರುಗ್ರಾಮ ರೆಸಾರ್ಟ್ ನಿಂದ ಬೆಂಗಳೂರಿಗೆ ವಾಪಸ್ ಆಗುತ್ತಿರುವ ಬಿಜೆಪಿ ಶಾಸಕರು
ಡಿಕೆ ಶಿವಕುಮಾರ್ಗೆ ಹೊಣೆ
ಶಾಸಕರನ್ನು ರೆಸಾರ್ಟ್ನಲ್ಲಿ ಸುರಕ್ಷಿತವಾಗಿರಿಸುವ ಹೊಣೆಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಲಾಗಿದೆ. ಶಾಸಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದು, ಅವರ ಯೋಗ ಕ್ಷೇಮಕ್ಕೆ ಅನುಕೂಲಕರ ವ್ಯವಸ್ಥೆ ಮಾಡುವುದರ ಜೊತೆಗೆ, ಅವರು ರೆಸಾರ್ಟ್ ಬಿಟ್ಟು ಹೊರಹೋಗದಂತೆ ನೋಡಿಕೊಳ್ಳಲಾಗುತ್ತಿದೆ. ಅವರಿಗೆ ಬರುವ ದೂರವಾಣಿ ಕರೆಗಳನ್ನು ನಾಯಕರು ಪರಿಶೀಲನೆ ಮಾಡುವಂತೆ ಸೂಚಿಸಲಾಗಿದೆ.
ಸಿದ್ದರಾಮಯ್ಯ ಸಹ ಆಪರೇಷನ್ ಕಾಂಗ್ರೆಸ್ನಿಂದ ಹುಟ್ಟಿದ ಕೂಸು: ಬಿಎಸ್ವೈ
|
ಎರಡು ಕಡೆ ಶಾಸಕರ ವಾಸ್ತವ್ಯ
ವಂಡರ್ಲಾದಲ್ಲಿ ಡಿ.ಕೆ. ಶಿವಕುಮಾರ್ ಅವರ ಆಪ್ತರ ವಲಯದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್, ಡಾ. ರಂಗನಾಥ್ ಸೇರಿದಂತೆ ನಂಬಿಕಸ್ಥ ಶಾಸಕರನ್ನು ಇರಿಸಲಾಗಿದೆ. ಅಸಮಾಧಾನದ ಕಾರಣ ಬಿಜೆಪಿಗೆ ಸೇರಿಕೊಳ್ಳುವ ಅನುಮಾನ ಇರುವ ಶಾಸಕರು ಹಾಗೂ ಉಳಿದವರನ್ನು ಈಗಲ್ಟನ್ ರೆಸಾರ್ಟ್ನಲ್ಲಿ ಇರಿಸಲಾಗಿದ್ದು, ರೆಸಾರ್ಟ್ ಸುತ್ತಲೂ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ರೆಸಾರ್ಟ್ಗೆ ಬೇರೆ ಯಾರನ್ನೂ ಒಳಬಿಡದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲಿ ವಾಸ್ತವ್ಯ ಹೂಡಿರುವ ಪ್ರವಾಸಿಗರನ್ನು ಸಹ ತಪಾಸಣೆ ನಡೆಸಲಾಗುತ್ತಿದೆ.
ಹಠಾತ್ತನೆ ಕಾಂಗ್ರೆಸ್ ಶಾಸಕರು ರೆಸಾರ್ಟ್ಗೆ ಹೋಗಿದ್ದೇಕೆ?
ಚಿಂಚೋಳಿ ಶಾಸಕ ಉಮೇಶ್ ರಾಜೀನಾಮೆ?
ಕಾಂಗ್ರೆಸ್ ಹೈಕಮಾಂಡ್ಗೆ ಸೆಡ್ಡು ಹೊಡೆದಿರುವ ಚಿಂಚೋಳಿ ಶಾಸಕ ಡಾ. ಉಮೇಶ್ ಜಾಧವ್, ತಮ್ಮ ಪಟ್ಟು ಸಡಿಲಿಸದೆ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದ ಅವರು, ಅನಾರೋಗ್ಯದಿಂದ ಬರಲು ಸಾಧ್ಯವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಪತ್ರ ಫ್ಯಾಕ್ಸ್ ಮಾಡಿದ್ದರು. ಈಗ ಅವರು ರಾಜೀನಾಮೆ ನೀಡಿ ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಧ್ಯಾಹ್ನದ ವೇಳೆಗೆ ಅವರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
ಕೈ ನಾಯಕರಿಗೆ ಯಡಿಯೂರಪ್ಪ ಅಭಯ
ನಮ್ಮ ಎಲ್ಲ ಶಾಸಕರನ್ನು ಗುರುಗ್ರಾಮದಿಂದ ಬೆಂಗಳೂರಿಗೆ ಮಧ್ಯಾಹ್ನ ವಾಪಸಾಗುವಂತೆ ಸೂಚಿಸಿದ್ದೇನೆ. ಅವರೆಲ್ಲರೂ ಮರಳುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ನಾಯಕರು ಈ ಬಗ್ಗೆ ಭಯಪಟ್ಟುಕೊಳ್ಳುವ ಅಗತ್ಯವಿಲ್ಲ. ಬರಪೀಡಿತ ಪ್ರದೇಶಗಳ ಅಧ್ಯಯನ ಮಾಡುವುದು ನಮ್ಮ ಕೆಲಸವಾಗಿದೆ. ಜನರ ಸಮಸ್ಯೆ ಬಗ್ಗೆ ಗಮನ ಹರಿಸುತ್ತೇವೆ. ವಿರೋಧಪಕ್ಷದಲ್ಲಿದ್ದೇ ಕೆಲಸ ಮಾಡುತ್ತೇವೆ ಎಂದು ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಭರವಸೆ ನೀಡಿದ್ದಾರೆ.