ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನದ ಹಿಂದೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೈವಾಡ?
ಬೆಂಗಳೂರು, ನ. 29: ಉಪ ಚುನಾವಣೆಯಲ್ಲಿನ ಭರ್ಜರಿ ಜಯದ ಬಳಿಕ ಖುರ್ಚಿ ಗಟ್ಟಿಕೊಂಡಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಂತರ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಿವೆ. ಸರ್ಕಾರ ರಚನೆಗೆ ಸಹಾಯ ಮಾಡಿದ್ದ 17 ಜನರ ಒತ್ತಡ ಒಂದೆಡೆ. ಸಂಪುಟ ವಿಸ್ತರಣೆ ಕುರಿತು ಮುಗುಮ್ಮಾಗಿ ವರ್ತನೆ ಮಾಡುತ್ತಿರುವ ಹೈಕಮಾಂಡ್ ಒಂದೆಡೆ. ಇನ್ನೇನು ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿತು ಅಂತಾ ಸಿಎಂ ಯಡಿಯೂರಪ್ಪ ಅವರು ನಿಟ್ಟುಸಿರು ಬಿಡುವಾಗಲೇ ಧುತ್ತೆಂದು ದೊಡ್ಡ ಸವಾಲು ಯಡಿಯೂರಪ್ಪ ಅವರಿಗೆ ದುರಾಗಿದೆ.
ಯಡಿಯೂರಪ್ಪ ಅವರ ಆಪ್ತ ಸಹಾಯಕ, ಹತ್ತಿರದ ಸಂಬಂಧಿ, ಆಪರೇಶನ್ ಕಮಲದಲ್ಲಿ ಬಹಳಷ್ಟು ಸಕ್ರೀಯವಾಗಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ವಲಸಿಗರಿಂದಲೇ ಅಸ್ತಿತ್ವಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಂತೋಷ್ ಆತ್ಮಹತ್ಯೆ ಯತ್ನ ದೊಡ್ಡ ಪ್ರಶ್ನೆ ಎದುರಿಗೆ ಇಟ್ಟಿದೆ.
ಯಡಿಯೂರಪ್ಪ ಅವರ 'ಟ್ರಸ್ಟ್, ಸಂತೋಷ್ ಬೆಳೆದು ಬಂದ ದಾರಿ
ಇದೇ ಸಂದರ್ಭದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಸಂತೋಷ್ ಅವರ ಆತ್ಮಹತ್ಯೆ ಹಿಂದಿನ ಕಾರಣಗಳನ್ನು ಒಂದೊಂದಾಗಿ ಬಿಟ್ಟಿಟ್ಟಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲ ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾರಣ ಎಂದು ಆರೋಪಿಸಿದ್ದಾರೆ.
ಸಂತೋಷ್ ಆತ್ಮಹತ್ಯೆ ಯತ್ನ
ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಏಕಾಏಕಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಶುಕ್ರವಾರ ರಾತ್ರಿ ಸಂತೋಷ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನ ಮಾಡಿದ್ದಾರೆಂದು ಎಫ್ಐಆರ್ ಕೂಡ ದಾಖಲಾಗಿದೆ. ಸಂತೋಷ್ ಗುಣಮುಖರಾಗಿದ್ದು, ನಾಳೆ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ.
ಆದರೆ ಅವರ ಆತ್ಮಹತ್ಯೆ ಯತ್ನ ಪ್ರಕರಣ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಂಚಲವನ್ನುಂಟು ಮಾಡಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಾಗ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎನ್.ಆರ್. ಸಂತೋಷ್ ಅವರು ಪಕ್ಷದ ವರಿಷ್ಠರ ಸೂಚನೆಯಂತೆ ನಡೆದುಕೊಂಡಿದ್ದೇನೆ. ನಾನೇನು ಯಾರನ್ನೂ ಬಿಜೆಪಿಗೆ ಕರೆದು ತಂದಿಲ್ಲ ಎಂದಿದ್ದರು. ಆದರೆ ಎನ್.ಆರ್. ಸಂತೋಷ್ ಅನರ್ಹ ಶಾಸಕರ ಜೊತೆಗಿದ್ದ ಫೋಟೊಗಳು ಅದೇ ಸಂದರ್ಭದಲ್ಲಿ ಬಹಿರಂಗವಾಗಿದ್ದವು.
ಬಿ.ವೈ. ವಿಜಯೇಂದ್ರ ಕಾರಣ?
ಸಿಎಂ ರಾಜಕೀಯ ಕಾರ್ಯದರ್ಶಿ ವಿಜಯೇಂದ್ರ ಅವರ ಆತ್ಮಹತ್ಯೆ ಯತ್ನ ವಿಚಾರವನ್ನು ವಿರೋಧ ಪಕ್ಷಗಳು ತೀರಾ ಗಂಭೀರವಾಗಿ ತೆಗೆದುಕೊಂಡಿವೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ನಾಯಕರೊಂದಿಗೆ ಸಂತೋಷ್ ಆಪ್ತವಾಗಿದ್ದರು. ಎಂಬುದು ಒಂದು ಕಾರಣವಾದರೆ ಮತ್ತೊಂದು ಕಾರಣ ಬಿ.ವೈ. ವಿಜಯೇಂದ್ರ.
ಸಂತೋಷ್ ಆತ್ಮಹತ್ಯೆ ಪ್ರಯತ್ನ ಪ್ರಕರಣ: ಯಡಿಯೂರಪ್ಪ ಪ್ರತಿಕ್ರಿಯೆ
ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಯುವ ಕಾಂಗ್ರೆಸ್ ಆಗ್ರಹಿಸಿದೆ. ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಧರಣಿ ನಡೆಸಿದ ಯುವ ಕಾಂಗ್ರೆಸ್ ಪಡೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದೆ. ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಯುವ ಕಾಂಗ್ರೆಸ್ ನಾಯಕ ಮನೋಹರ್ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬಿ.ವೈ. ವಿಜಯೇಂದ್ರ ಕೈವಾಡವಿದೆ?
ಸಂತೋಷ್ ಆತ್ಮಹತ್ಯೆ ಯತ್ನದ ಹಿಂದೆ ಬಿ.ವೈ. ವಿಜಯೇಂದ್ರ ಅವರ ಕೈವಾಡವಿದೆ. ಸಂತೋಷ್ ಹಾಗೂ ವಿಜಯೇಂದ್ರರ ಮಧ್ಯೆ ಅಧಿಕಾರದ ಮನಸ್ತಾಪವಿತ್ತು. ಈಗ ಸಿಡಿ ವಿಚಾರ ಬೇರೆ ಕೇಳಿ ಬರುತ್ತಿದೆ. ಸರ್ಕಾರ ಬೀಳಿಸುವ ಪ್ರಯತ್ನಗಳು ಇದ್ದವು. ಅದಕ್ಕೆ ಪೂರಕವಾಗಿ ಕೆಲವು ಬೆಳವಣಿಗೆಗಳು ನಡೆದಿವೆ. ಎನ್.ಆರ್. ಸಂತೋಷ್ ಸಿಡಿ ಕೂಡ ಕಾರಣವಿರಬಹುದು. ನಮ್ಮ ಕೆಪಿಸಿಸಿ ಅಧ್ಯಕ್ಷರು ಇದೇ ಆರೋಪವನ್ನು ಮಾಡಿದ್ದಾರೆ. ಹಾಗಾಗಿ ಜನರಿಗೆ ಎಲ್ಲ ಸತ್ಯ ಗೊತ್ತಾಗಲಿ. ಹಿಂದೆ ಪ್ರತಿಯೊಂದಕ್ಕೂ ಸಿಬಿಐಗೆ ಕೊಡಿ ಅಂತಾ ಬಿಜೆಪಿ ನಾಯಕರು ಹೇಳುತ್ತಿದ್ದರು ಎಂದು ಮನೋಹರ್ ಪ್ರಶ್ನೆ ಮಾಡಿದ್ದಾರೆ.
ಈಗ ಬಿಜೆಪಿ ನಾಯಕರು ಯಾಕೆ ಬಾಯಿ ಬಿಡುತ್ತಿಲ್ಲ? ಕೂಡಲೇ ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು. ಸಿಬಿಐ ಈ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು. ಆತ್ಮಹತ್ಯೆಯ ಕಾರಣವನ್ನು ಪತ್ತೆ ಹಚ್ಚಬೇಕು ಎಂದು ಸಿಎಂ ಯಡಿಯೂರಪ್ಪ ಅವರ ವಿರುದ್ಧ ಮನೋಹರ್ ವಾಗ್ದಾಳಿ ಮಾಡಿದ್ದಾರೆ.
ಆತ್ಮಹತ್ಯೆ ಯತ್ನದ ಹಿಂದೆ ರಾಜಕೀಯ ಕೈವಾಡ
ಇನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದ ಹಿಂದೆ ರಾಜಕೀಯ ಕೈವಾಡವಿದೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಮೇಯರ್ ರಾಮಚಂದ್ರಪ್ಪ ಆರೋಪಿಸಿದ್ದಾರೆ.
ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ
ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಗೊತ್ತಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬದಲ್ಲಿಯೇ ಇಂತಹ ಸ್ಥಿತಿ ಇದೆ. ಇದು ಅಧಿಕಾರದ ಮೇಲೂ ಪರಿಣಾಮ ಬೀರಲಿದೆ. ಸಂತೋಷ್ ಆತ್ಮಹತ್ಯೆ ಯತ್ನದ ಹಿಂದೆ ರಾಜಕೀಯ ಕೈವಾಡವಿದೆ. ವಿಜಯೇಂದ್ರ ಅವರ ಒತ್ತಡವೂ ಇರಬಹುದು. ಹೀಗಾಗಿ ಸಿಬಿಐಗೆ ತನಿಖೆಯನ್ನು ವಹಿಸಬೇಕು ಎಂದು ಸರ್ಕಾರಕ್ಕೆ ಮಾಜಿ ಮೇಯರ್ ರಾಮಚಂದ್ರಪ್ಪ ಆಗ್ರಹ ಮಾಡಿದ್ದಾರೆ.
ಯಡಿಯೂರಪ್ಪ ಅವರಿಗೆ ಹೊಸ ಸಮಸ್ಯೆ!
ಆತ್ಮಹತ್ಯೆ ಯತ್ನ ಮಾಡಿರುವ ಎನ್.ಆರ್. ಸಂತೋಷ್ ಯಡಿಯೂರಪ್ಪ ಅವರ ಹತ್ತಿರದ ಸಂಬಂಧಿಯೂ ಹೌದು. ಹೀಗಾಗಿ ಕುಟುಂಬ ರಾಜಕಾರಣದ ಮನಸ್ತಾಪದ ಆರೋವನ್ನೂ ಮಾಡಲಾಗುತ್ತಿದೆ. ಜೊತೆಗೆ ಮುಂದೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೂ ಸಂತೋಷ್ ತಯಾರಿ ಆರಂಭಿಸಿದ್ದರು. ಇದೇ ಸಂದರ್ಭದಲ್ಲಿ ಡ್ರಗ್ಸ್ ಹಗರಣ, ನಟಿಯರ ಬಂಧನ, ಸಂಪುಟ ವಿಸ್ತರಣೆ ವಿಳಂಬ, ಕೊರೊನಾ ವೈರಸ್ ನಂತಹ ಸಂಕಷ್ಟಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಾಧಿಸಿವೆ. ಇದೇ ಸಂದರ್ಭದಲ್ಲಿ ತಮ್ಮ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ ಹಾಗೂ ಅದಕ್ಕೆ ತಮ್ಮ ಪುತ್ರ ವಿಜಯೇಂದ್ರ ಕಾರಣ ಎಂಬ ವಿಪಕ್ಷಗಳ ಆರೋಪ ಖಂಡಿತವಾಗಿಯೂ ಯಡಿಯೂರಪ್ಪ ಹಾಗೂ ಅವರ ಸರ್ಕಾರದ ಮೇಲೆ ಪರಿಣಾಮ ಬೀರಲಿವೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.