ಸಂಪುಟ ವಿಸ್ತರಣೆ ಬಗ್ಗೆ ಮೌನ ಮುರಿದ ಕರ್ನಾಟಕ ಕಾಂಗ್ರೆಸ್ ನಾಯಕರು!
ಬೆಂಗಳೂರು, ಆಗಸ್ಟ್ 24 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟ ವಿಸ್ತರಣೆ ಬಗ್ಗೆ ಕರ್ನಾಟಕದ ಕಾಂಗ್ರೆಸ್ ನಾಯಕರು ಮೌನ ಮುರಿದಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆ ಆಗಸ್ಟ್ 30 ಅಥವ 31ರಂದು ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸಂಪುಟ ವಿಸ್ತರಣೆ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ.
ಕುಮಾರಸ್ವಾಮಿ ಸಂಪುಟ ವಿಸ್ತರಣೆ ಬಗ್ಗೆ ಹೊಸ ಸುದ್ದಿಯೊಂದು ಹೊರಬಿತ್ತು!
ಸ್ಥಳೀಯ ಸಂಸ್ಥೆಗಳ ಚುನಾವಣೆ ಸೆಪ್ಟೆಂಬರ್ 3ಕ್ಕೆ ಅಂತ್ಯಗೊಳ್ಳಲಿದೆ. ಕೊಡಗು ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ಒಂದು ಹಂತದ ಕಾರ್ಯಗಳು ಅಷ್ಟರಲ್ಲಿ ಮುಕ್ತಾಯವಾಗಲಿವೆ. ಇವುಗಳು ಮುಗಿದ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ.
ಆಷಾಢ ಕಳೆಯುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಬಿರುಸಿನ ಚಟುವಟಿಕೆ!
ನಿಗಮ-ಮಂಡಳಿಗಳ ನೇಮಕ, ಸಂಪುಟ ವಿಸ್ತರಣೆ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಸೆಪ್ಟೆಂಬರ್ 15ರ ಬಳಿಕ ಸಂಪುಟ ವಿಸ್ತರಣೆಯಾಗುವುದು ಖಚಿತ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ, ದಿನಾಕವನ್ನು ಮಾತ್ರ ಯಾವ ನಾಯಕರು ಬಹಿರಂಗ ಪಡಿಸಿಲ್ಲ.
ಆಷಾಢ ಮಾಸ ಕಳೆದರೂ ಶಾಸಕರಿಗೆ ಸಚಿವ ಸ್ಥಾನದ ಭಾಗ್ಯವಿಲ್ಲ!
ಸಿದ್ದರಾಮಯ್ಯ ಹೇಳಿದ್ದೇನು?
ಮಾಜಿ ಮುಖ್ಯಮಂತ್ರಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದು, 'ಸಂಪುಟ ವಿಸ್ತರಣೆ ಆಗುವ ಕಾಲಕ್ಕೆ ಆಗುತ್ತದೆ' ಎಂದು ಹೇಳಿದ್ದಾರೆ.
ಆಗಸ್ಟ್ 30 ಅಥವ 31ರಂದು ಸಮನ್ವಯ ಸಮಿತಿ ಸಭೆ ನಡೆಯಲು ಸಿದ್ದರಾಮಯ್ಯ ಅವರು ದಿನಾಂಕ ನಿಗದಿ ಮಾಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಸಮಯ ಕೊಡುವುದು ಬಾಕಿ ಇದೆ.
ಪರಮೇಶ್ವರ ದೆಹಲಿಗೆ
ಎಐಸಿಸಿ ಖಜಾಂಚಿ ಅಹ್ಮದ್ ಪಟೇಲ್ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರುವ ನೆಪದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ದೆಹಲಿಗೆ ತೆರಳಿದ್ದಾರೆ. ರಾಜಕೀಯ ವಲಯದಲ್ಲಿ ದೆಹಲಿಯ ದಿಢೀರ್ ಭೇಟಿ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
'ಪಕ್ಷದ ಅಧ್ಯಕ್ಷರು ಸಮನ್ವಯ ಸಮಿತಿಯಲ್ಲಿ ಇರುವುದು ಸಹಜ. ನಾನು ಅಧ್ಯಕ್ಷನಾಗಿದ್ದಾಗ ಸಮಿತಿಯಲ್ಲಿದ್ದೆ. ದಿನೇಶ್ ಗುಂಡೂರಾವ್ ಮತ್ತು ಎಚ್.ವಿಶ್ವನಾಥ್ ಅವರು ಸಮಿತಿ ಸೇರುವ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ' ಎಂದು ಪರಮೇಶ್ವರ ಹೇಳಿದರು. ಆದರೆ, ಸಂಪುಟ ವಿಸ್ತರಣೆ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
'ಆಗುವ ಸಮಯಕ್ಕೆ ಆಗಲಿದೆ'
'ಸಚಿವ ಸಂಪುಟ ವಿಸ್ತರಣೆ ಆಗುವ ಸಮಯಕ್ಕೆ ಆಗುತ್ತದೆ. ಸದ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಗಮನ ಹರಿಸಿದ್ದೇವೆ. ಈ ವಿಷಯದ ಕುರಿತು ಚರ್ಚೆ ನಡೆಸಲು ಪರಮೇಶ್ವರ ದೆಹಲಿಗೆ ತೆರಳಿದ್ದಾರೆ' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಮಾತಿನ ಪ್ರಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ನಡೆಯುವುದು ಖಚಿತವಾಗಿದೆ. ಆದರೆ, ಯಾವ ದಿನಾಂಕದಂದು ನಡೆಯಲಿದೆ? ಎಂಬುದು ಇನ್ನೂ ಖಚಿತವಾಗಿಲ್ಲ.
7 ಶಾಸಕರು ಸಂಪುಟ ಸೇರಬಹುದು
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಸಂಪುಟ ವಿಸ್ತರಣೆ ಮಾಡಿದ್ದಾರೆ. ಕಾಂಗ್ರೆಸ್ನ 14, ಜೆಡಿಎಸ್ನ 9, ಬಿಎಸ್ಪಿ ಮತ್ತು ಕೆಪಿಜೆಪಿಯ ಒಬ್ಬರು ಶಾಸಕರು ಸಂಪುಟದಲ್ಲಿದ್ದಾರೆ.
ಕಾಂಗ್ರೆಸ್ನ 6 ಶಾಸಕರು, ಜೆಡಿಎಸ್ನಿಂದ ಒಬ್ಬರು ಶಾಸಕರು ಎಚ್.ಡಿ.ಕುಮಾರಸ್ವಾಮಿ ಸಂಪುಟವನ್ನು ಸೇರಬಹುದಾಗಿದೆ. ಯಾವ-ಯಾವ ಶಾಸಕರು ಸಂಪುಟ ಸೇರಲಿದ್ದಾರೆ? ಎಂದು ಕಾದು ನೋಡಬೇಕು.