ಸಿದ್ದರಾಮಯ್ಯ ಎದುರಿಗೆ 'ಡಿಕೆ ಡಿಕೆ" ಎಂದು ಘೋಷಣೆ ಹಾಕಿದ ಯುವ ಕಾಂಗ್ರೆಸ್ ಕಾರ್ಯಕರ್ತರು!
ಬೆಂಗಳೂರು, ಆ. 14: ರಾಜ್ಯ ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಚರಿಸಿದ್ದಾರೆ. ಆ ವಿಶೇಷತೆಯಲ್ಲಿಯೂ ಕೂಡ ಮುಂದಿನ ಮುಖ್ಯಮಂತ್ರಿ ವಿಚಾರವೇ ನಾಯಕರ ಬೆಂಬಲಿಗರಿಗೆ ಮುಖ್ಯವಾಗಿತ್ತು ಎಂಬುದು ಕೂಡ ಗಮನಿಸಬೇಕಾದ ಅಂಶವಾಗಿದೆ.
ಸರ್ಕಾರ ಮರೆತರೂ ಕಾಂಗ್ರೆಸ್ ನಾಯಕರು ಮಾತ್ರ ಕ್ವಿಟ್ ಇಂಡಿಯಾ ಚಳುವಳಿ ಆಚರಣೆ ಮರೆತಿರಲಿಲ್ಲ. ಭಾನುವಾರ 75 ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಬೆಂಗಳೂರು ಮೆಜೆಸ್ಟಿಕ್ನಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ವೃತ್ತದಿಂದ ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದವರೆಗೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕತರು ಮೆರವಣಿಗೆ ಮಾಡಿದರು.
ಮೆರವಣಿಗೆಯಲ್ಲಿ ಒಂದು ಕಿಲೋ ಮೀಟರ್ ಉದ್ದದ ರಾಷ್ಟ್ರ ಧ್ವಜವನ್ನು ಪ್ರರ್ಶನ ಮಾಲಾಯಿತು. ಆದರೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ವೇಳೆಯೂ ಡಿಕೆ ಡಿಕೆ ಎಂದು ಘೋಷಣೆ ಹಾಕಿದರು. ಇದನ್ನು ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸುಮ್ಮನಿರುವಂತೆ ಸನ್ನೆ ಮಾಡಿದರೂ ಕಾರ್ಯಕರ್ತರು ಘೋಷಣೆ ಕೂಗುವುದನ್ನು ಮಾತ್ರ ನಿಲ್ಲಿಸಲಲಿಲ್ಲ. ಮೆಜೆಸ್ಟಿಕ್ ಸಮೀಪ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮೆರವಣಿಗೆ ಆರಂಭವಾಯಿತು.
ಕಾಂಗ್ರೆಸ್ ನಾಯಕರು ಬರಿ ಭಾಷಣಕ್ಕೆ ಸೀಮಿತವಲ್ಲ!
ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಭವನದಲ್ಲಿ ಡಿ.ಕೆ. ಶಿವಕುಮಾರ್ ಧ್ವಜಾರೋಹಣ ನೆರವೇರಿಸಿ, ಮಹಾತ್ಮಾ ಗಾಂಧೀಜಿ ಪ್ರತಿಮಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದದರು. "ಈ ದಿನ ನಾವು ಸ್ವಾತಂತ್ರ್ಯ ಸಂಗ್ರಾಮದ ತ್ಯಾಗ, ಬಲಿದಾನ ನೆನೆಯಬೇಕಿದೆ. ಪ್ರಾಣ ತ್ಯಾಗ ಮಾಡಿದ ಗಣ್ಯರಿಗೆ ನಮಿಸಬೇಕಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದ್ದು, ಇದೊಂದು ಅಮೃತ ಮಹೋತ್ಸವದ ಕ್ಷಣ" ಎಂದರು.
"ದೇಶದ ಮೊದಲ ಪ್ರಧಾನಿ ನೆಹರೂ ಅವರು ಒಂದು ಮಾತು ಹೇಳಿದ್ದಾರೆ. ಸಮಾಜದ ಪ್ರತಿಯೊಬ್ಬರ ಕಣ್ಣೀರು ಒರೆಸುವುದು ನಮ್ಮ ಕರ್ತವ್ಯ. ಇದು ಕಷ್ಟವಾದರೂ, ಜನರ ಸಮಸ್ಯೆ ಬಗೆಹರಿಯುವವರೆಗೂ ನಮ್ಮ ಕರ್ತವ್ಯ ಮುಂದುವರಿಯುತ್ತದೆ. ನೆಹರೂ ಅವರು ತಮ್ಮ ಮಾತನ್ನು ಕೇವಲ ಭಾಷಣಕ್ಕೆ ಸೀಮಿತ ಮಾಡಲಿಲ್ಲ. ತಮ್ಮ ಆಡಳಿತ ನೀತಿಯಲ್ಲಿ ಅಳವಡಿಸಿಕೊಂಡರು. ಅದು ನಂತರ ಕಾಂಗ್ರೆಸ್ ಪಕ್ಷದ ಸಿದ್ಧಾಂತವಾಯಿತು. ಮನೆಯಿಲ್ಲದವರಿಗೆ ಮನೆ, ಉದ್ಯೋಗ ಇಲ್ಲದವರಿಗೆ ಉದ್ಯೋಗ, ಸಾಮಾಜಿಕ ನ್ಯಾಯ, ಸ್ವಾಭಿಮಾನದ ಬದುಕು ಕಲ್ಪಿಸಿಕೊಟ್ಟರು' ಎಂದು ಡಿಕೆಶಿ ವಿವರಿಸಿದರು.
ನಮ್ಮ ದೇಶ ದೊಡ್ಡ ಸವಾಲು ಎದುರಿಸುತ್ತಿದೆ!
"ಕಳೆದ ಆರು ವರ್ಷದಿಂದ ಬಿಜೆಪಿ ಸ್ನೇಹಿತರು ಕ್ರೆಡಿಟ್ ಪಡೆಯುವುದರಲ್ಲೇ ನಿರತರಾಗಿದ್ದಾರೆ. ಬಿಜೆಪಿಯ 7 ವರ್ಷದ ಆಡಳಿತದ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಕ್ಷಣದಲ್ಲಿ ನಮ್ಮ ದೇಶ ದೊಡ್ಡ ಸವಾಲು ಎದುರಿಸುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಮೇಲೆ ಡಿ.ಕೆ. ಶಿವಕುಮಾರ್ ಪರೋಕ್ಷ ವಾಗ್ದಾಳಿ ನಡೆಸಿದರು.
"ಪ್ರತಿ ಹಂತದಲ್ಲಿ ನಮ್ಮ ದೇಶದ ನಾಯಕರು ದೇಶಕ್ಕಾಗಿ ಹೋರಾಡಿದ್ದು, ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಿದರೆ ಅದಕ್ಕೆ ವಾರಗಟ್ಟಲೇ ಸಮಯ ಬೇಕಾಗುತ್ತದೆ. ಕಳೆದೊಂದು ವರ್ಷದಿಂದ ಕೋವಿಡ್ ಬಗ್ಗೆ ಚಿಂತಿಸುತ್ತಿದ್ದು, ಇದರ ನಿರ್ಮೂಲನೆಗೆ ನಾವು ಪಕ್ಷ ಬೇಧ ಮರೆತು ಕೆಲಸ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದನ್ನು ಜನರೇ ಒಪ್ಪಿಕೊಂಡಿದ್ದಾರೆ."
'ನಾವು ಈ ವಿಚಾರದಲ್ಲಿ ಕೀಳು ಮಟ್ಟದ ರಾಜಕಾರಣ ಮಾಡಲಿಲ್ಲ. ಬಿಕ್ಕಟ್ಟು ಬಗೆಹರಿಸಲು ಪ್ರಯತ್ನಿಸಿದೆವು. ಕಾರಣ ನಮಗೆ ರಾಜಕಾರಣಕ್ಕಿಂತ ಜನರ ಕಣ್ಣೀರು ಒರೆಸುವುದು ಮುಖ್ಯ. ಆಡಳಿತ ಪಕ್ಷದ ಕಾರ್ಯವೈಖರಿಯನ್ನು ದೇಶ ನೋಡಿದೆ' ಎಂದು ಡಿಕೆಶಿ ವಿವರಿಸಿದರು.
ಈ ಪ್ರಶ್ನೆಗೆ ಉತ್ತರಿಸುವ ಕಾಲ ದೂರವಿಲ್ಲ!
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯದ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿರುವುದು ವಿಶೇಷ. "ನಮ್ಮ ನಾಯಕರ ಸಾಮಾಜಿಕ ಜಾಲತಾಣಗಳ ಖಾತೆಗೆ ನಿರ್ಬಂಧ ಹಾಕಲು ಆಡಳಿತ ಪಕ್ಷ ಮುಂದಾಗಿದೆ. ಇದೇನಾ ಸ್ವಾತಂತ್ರ್ಯ? ಎಂಬ ಪ್ರಶ್ನೆ ಉದ್ಭವಿಸಿದೆ. ಈ ಪ್ರಶ್ನೆಗೆ ಉತ್ತರಿಸುವ ಕಾಲ ದೂರವಿಲ್ಲ ಎಂಬುದು ನೆನಪಿನಲ್ಲಿರಲಿ." ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
"ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ದಾಳಿ ಆಗುತ್ತಿದ್ದು, ನಾವು ಮತ್ತೆ ಸ್ವಾತಂತ್ರ್ಯ ಸಂಗ್ರಾಮದ ರೀತಿಯಲ್ಲಿ ಹೋರಾಟ ಮಾಡುವ ಸಂದರ್ಭ ಎದುರಾಗಿದೆ. ಸ್ವಾತಂತ್ರ್ಯ ಹೋರಾಟದ ಮುಂದಾಳತ್ವ ವಹಿಸಿದ್ದ ಗಾಂಧೀಜಿ ಹಾಗೂ ಇತರ ನಾಯಕರನ್ನು ಬಿಜೆಪಿ ತೆಗಳಲು ಆರಂಭಿಸಿದ್ದಾರೆ. ಗಾಂಧೀಜಿ ಅವರನ್ನು ಕೊಂದವರನ್ನು ದೇಶಭಕ್ತ ಎನ್ನುತ್ತಿದೆ. ಇಂತಹವರಿಂದ ದೇಶ ರಕ್ಷಿಸಲು ಮತ್ತೊಂದು ಹೋರಾಟ ನಡೆಯಬೇಕಿದೆ" ಎಂದು ಡಿ.ಕೆ. ಶಿವಕುಮಾರ್ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟರು.
Recommended Video
ಕೊರೊನಾ ಸಂದರ್ಭದಲ್ಲಿ ಕಾಂಗ್ರೆಸ್ ಸಹಾಯ!
"ಕೋವಿಡ್ ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ತೆಗೆದುಕೊಂಡ ಕಾರ್ಯಕ್ರಮ 2.67 ಕೋಟಿ ಜನರಿಗೆ ತಲುಪಿದೆ. 1225 ಅಂಬ್ಯುಲೆನ್ಸ್, 12.53 ಲಕ್ಷ ಮೆಡಿಕಲ್ ಕಿಟ್, 26 ಲಕ್ಷ ಜನರಿಗೆ ದಿನಸಿ ಕಿಟ್, 93 ಲಕ್ಷ ಜನರಿಗೆ ಆಹಾರ ಕಿಟ್ ಕೊಟ್ಟಿದ್ದಾರೆ. 24 ಸಾವಿರ ಜನಕ್ಕೆ ಆಕ್ಸಿಜನ್ ಸಿಲಿಂಡರ್ ಒದಗಿಸಲಾಗಿದೆ. 3746 ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡಲಾಗಿದೆ. ನಮ್ಮವರು ಸುಮಾರು 50 ಲಕ್ಷ ಮಾಸ್ಕ್, 9 ಲಕ್ಷ ಜನರಿಗೆ ಸ್ಯಾನಿಟೈಸರ್ ಒದಗಿಸಿದ್ದಾರೆ. ಸಂತ್ರಸ್ತರ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಎಂಬ ಸೋನಿಯಾ ಗಾಂಧಿ ಅವರ ಆದೇಶ ಹಿನ್ನೆಲೆಯಲ್ಲಿ 67 ಸಾವಿರಕ್ಕೂ ಹೆಚ್ಚು ಕುಟುಂಬಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಾಗಿದೆ. 1723 ಮೃತರ ಕುಟುಂಬಗಳ ಮನೆಗೆ ಭೇಟಿ ನೀಡಿದ್ದಾರೆ."
"40 ಸಾವಿರ ಜನರಿಗೆ ಹಾಸಿಗೆ ಸಿಗುವಂತೆ ಮಾಡಿದ್ದೇವೆ. 93 ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿದ್ದಾರೆ. 10,300 ಮೃತರ ಅಂತ್ಯ ಸಂಸ್ಕಾರಕ್ಕೆ ನೆರವಾಗಿದ್ದಾರೆ. 63,763 ಜನ ಕಾರ್ಮಿಕರ ಪ್ರಯಾಣಕ್ಕೆ ನೆರವು, 65,900 ರೈತರಿಗೆ ವಿವಿಧ ರೀತಿ ನೆರವು ನೀಡಲಾಗಿದೆ" ಎಂದು ಕಾಂಗ್ರೆಸ್ ಪಕ್ಷದ ಸಹಾಯವನ್ನು ವಿವರಿಸಿದರು.
ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೊಂದಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್, ಮಾಜಿ ಸಚಿವ, ಶಾಸಕ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸಸ್ಯರಾದ ಬಿ.ಕೆ. ಹರಿಪ್ರಸಾದ್, ಯು.ಬಿ. ವೆಂಕಟೇಶ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಮತ್ತಿತರರು ಭಾಗವಹಿಸಿದ್ದರು.