ಕುಂದಾಪುರ ಹಿಜಾಬ್ ಗಲಾಟೆ: ಬಿಜೆಪಿ ಕುತಂತ್ರ ಎಂದ ಸಿದ್ಧರಾಮಯ್ಯ
ಕುಂದಾಪುರ, ಫೆಬ್ರವರಿ 4: 'ಕುಂದಾಪುರ ಹಿಜಾಬ್ ಗಲಾಟೆಯನ್ನು ಬಿಜೆಪಿಯ ಕುತಂತ್ರ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಉಡುಪಿಯ ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ಗಲಾಟೆ ಜೋರಾಗಿದೆ. ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸದಂತೆ ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿನಿಯರಿಗೆ ಸೂಚನೆ ನೀಡಿದರೂ ನಿನ್ನೆ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದ 6 ವಿದ್ಯಾರ್ಥಿನಿಯರ ಸಂಖ್ಯೆ ಇಂದು 20 ಕ್ಕೆ ಏರಿಕೆಯಾಗಿದೆ. 20 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದು ಕಂಡುಬಂದಿದೆ. ಹೀಗಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಶಾಲೆಗೆ ಆಗಮಿಸಿದ್ದಾರೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶ ನೀಡುವುದಾದರೆ ತಮಗೂ ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಲು ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಹಿಂದೂ ಪರ ಸಂಘಟನೆಗಳು ಬೆಂಬಲ ನೀಡಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, 'ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡ್ಬೇಕು ಅಂತ ಸರ್ಕಾರ ಎಲ್ಲಯೂ ಹೇಳಿಲ್ಲ. ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಗೇಟ್ ಬಳಿ ತಡೆಹಿಡಿದಿದ್ದಾರೆ. ಈ ವಿಚಾರವನ್ನು ದೊಡ್ಡದು ಮಾಡಲು ಬಿಜೆಪಿಯವರು ಕೇಸರಿ ಶಾಲು ಹಾಕಿಕೊಂಡು ಬರುತ್ತಿದ್ದಾರೆ. ಇಷ್ಟು ದಿನ ಇಲ್ಲದ ಪ್ರಶ್ನೆ ಈಗ ಯಾಕೆ ಉದ್ಬವಿಸಿದೆ' ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
'ಕಾಲೇಜಿನಲ್ಲಿ ಇದ್ದಕ್ಕಿದ್ದಂತೆ ಯಾಕೆ ಹಿಜಾಬ್ ತಡೆಯುವಂತ ಕೆಲಸ ಮಾಡುತ್ತೀದಿರಿ. ನಾನು ವೈಯಕ್ತಿವಾಗಿ ಹೇಳಬೇಕು ಅಂದರೆ. ಮುಸ್ಲಿಂ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡದಂತೆ ಮಾಡುವ ಕುತಂತ್ರ ಇದಾಗಿದೆ. ಎಷ್ಟೋ ವರ್ಷಗಳಿಂದ ಹಿಜಾಬ್ ಧರಿಸುವುದು ನಡೆದುಕೊಂಡು ಬಂದಿದೆ. ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕು. ಮುಸ್ಲೀಂ ವಿದ್ಯಾರ್ಥಿಗಳಿಗೆ ಶಿಕ್ಷಣ ಕಸಿದುಕೊಳ್ಳುವ ಬಿಜೆಪಿ ಕುತಂತ್ರ ಇದು. ಹಿಜಾಬ್ ಹಾಕುವುದು ಬಹಳ ಹಿಂದಿನಿಂದ ನಡೆದುಕೊಂಡು ಬಂದ ಪದ್ದತಿ. ಕೇಶರಿ ಹಾಕಿರು ಉದ್ದೇಶ ಏನು? ಈ ಮೊದಲು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬರುತ್ತಿದ್ದರಾ? ಈಗ ಯಾಕೆ ಕೇಶರಿ ಶಾಲ್ ಬಗ್ಗೆ ಮಾತನಾಡುತ್ತಿದ್ದಾರೆ ಇದು ಬಿಜೆಪಿಯ ಕುತಂತ್ರ' ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಇನ್ನೂ ಶಾಲೆಗೆ ಇಂದು ವಿದ್ಯಾರ್ಥಿನಿಯರ ಜೊತೆಗೆ ತಾಯಂದಿರೂ ಕಾಲೇಜಿಗೆ ಆಗಮಿಸಿದ್ದರು. ಮಕ್ಕಳೊಂದಿಗೆ ತಾಯಂದಿರು ಕೂಡ ಹಿಜಾಬ್ ಧರಿಸಿ ನ್ಯಾಯ ಕೇಳಿದ್ದಾರೆ. ಪೊಲೀಸರ ಜೊತೆ ತಾಯಂದಿರು ವಾಗ್ದಾದ ಮಾಡಿದ್ದಾರೆ. .ಮಕ್ಕಳಿಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಪೋಷಕರು ಒತ್ತಾಯಿಸಿದ್ದಾರೆ. ಆಧರೆ ಪ್ರತಿಭಟನೆ ಮಾಡಿದ್ರೆ ಎಫ್ಐಆರ್ ದಾಖಲಿಸಲಾಗುವುದು ಎಂದು ಇನ್ಸಪೆಕ್ಟರ್ ಎಚ್ಚರಿಕೆ ನೀಡಿದರು. ಬಳಿಕ ಸರ್ಕಲ್ ಇನ್ಸಪೆಕ್ಟರ್ ಮನವೊಲಿಕೆ ಮಾಡುವ ಮೂಲಕ ಅವರನ್ನು ವಾಪಸ್ ಕಳುಹಿಸಿದ್ದಾರೆ. ಇತ್ತ ಶಿಕ್ಷಕಕರು ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿದೆ. ಉಪನ್ಯಾಸಕರು ಮತ್ತು ಪ್ರಾಂಶುಪಾಲಕರಿಂದ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಲಾಗಿದೆ.
ಇನ್ನೂ ಕಾಲೇಜು ನಿಯಮದ ವಿರುದ್ಧ ವಿದ್ಯಾರ್ಥಿನಿಯರು ಆಕ್ರೋಶಗೊಂಡಿದ್ದಾರೆ. 'ಪ್ರಾಂಶುಪಾಲರು ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಕಾಲೇಜು ಒಳಗೆ ಪ್ರವೇಶಕ್ಕೆ ಬಿಟ್ಟಿಲ್ಲ. ಇಷ್ಟು ವರ್ಷ ಇಲ್ಲದ ನಿಯಮ ಈಗ ಯಾಕೆ. ನಮಗೆ ಹಿಜಾಬ್ ಬೇಕು ಶಿಕ್ಷಣವೂ ಬೇಕು. ಮೊದಲು ಕ್ಲಾಸ್ ನಲ್ಲಿ ಹಿಜಾಬ್ ಇಲ್ಲ ಎಂದರು. ಆದರೆ ಈಗ ಕಾಪೌಂಡ್ ಒಳಗೂ ಬಿಡುತ್ತಿಲ್ಲ. ನಾಳೆಯಿಂದ ಬರೋದೆ ಬೇಡ ಅಂತಿದ್ದಾರೆ. ಫೆಬ್ರವರಿ ಒಂದರಿಂದ ಹಿಜಾಬ್ ತೆಗೆದು ಬರಬೇಕು. ಇಲ್ಲಂದರೆ ಮನೆಯಲ್ಲೇ ಇರೆ ಎಂದಿದ್ದಾರೆ. ಇಷ್ಟು ವರ್ಷ ಇಲ್ಲದ ನಿಯಮ ಈಗ ಯಾಕೆ?' ಎಂದು ವಿದ್ಯಾರ್ಥಿನಿಯರು ಶಾಲೆಯ ನಿಯಮದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದೀಗ ಕುಂದಾಪುರ ಸರಕಾರಿ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಪ್ರವೇಶಿಸಿದ ಹಿಂದೂ ವಿದ್ಯಾರ್ಥಿಗಳು ಕ್ಯಾಂಪಸ್ ತೊರೆಯುವಂತೆ ಸೂಚಿಸಲಾಗಿದೆ. ಅವರು "ಜೈ ಶ್ರೀ ರಾಮ್" ಎಂದು ಘೋಷಣೆ ಕೂಗುತ್ತಾ ಕ್ಯಾಂಪಸ್ನಿಂದ ಹೊರಬರುವುದನ್ನು ಕಾಣಬಹುದು.