ಆರ್ಎಸ್ಎಸ್ನವರೇನು ದ್ರಾವಿಡರೇ? ಮೂಲ ಭಾರತೀಯರೇ? ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು, ಮೇ 27: ಆರ್ಎಸ್ಎಸ್ನವರು ಮೂಲ ಭಾರತೀಯರೇ? ಎಲ್ಲ ಚರ್ಚೆ ಮಾಡಬಾರದು ಎಂದು ನಾವು ಭಾವಿಸಿದ್ದೇವೆ. ಆರ್ಯರು ಭಾರತದವರ ಇವರೇನು..? ದ್ರಾವಿಡರೆ ಇವರು ಆಫ್ಘಾನಿಸ್ತಾನದ ಮೂಲದವರು ಎಂದು ಹೇಳುವ ಮೂಲಕ ಆರ್ಎಸ್ಎಸ್ ಮೂಲವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆದಕಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಮತ್ತೊಂದು ವಿವಾದ ಮಾತಿನ ಸಮರಕ್ಕೆ ಸಿದ್ದರಾಮಯ್ಯರ ಹೇಳಿಕೆ ಕಾರಣವಾಗಲಿದೆ.
ನೆಹರು ಪುಣ್ಯ ಸ್ಮರಣೆಗಾಗಿ ಪಂಡಿತ್ ಜವಾಹರ್ ಲಾಲ್ ನೆಹರು ಅವರನ್ನು ಸ್ಮರಿಸಲು ಇಲ್ಲಿ ಸೇರಿದ್ದೇವೆ. ಅವರನ್ನು ಗೌರವಿಸಿ, ಸ್ವತಂತ್ರ ಹೋರಾಟದಲ್ಲಿ ಅವರ ಕೊಡುಗೆ, ನಂತರ ದೇಶದ ಪ್ರಧಾನಮಂತ್ರಿಯಾಗಿ 17 ವರ್ಷಗಳ ಕಾಲ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದನ್ನು ಸ್ಮರಿಸಬೇಕು. ದೇಶ, ವಿಜ್ಞಾನ-ತಂತ್ರಜ್ಞಾನ ಕೈಗಾರಿಕಾ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದರೆ, ದೇಶಕ್ಕೆ ಆಹಾರ ಭದ್ರತೆ ಸಿಕ್ಕಿದ್ದರೆ, ಪ್ರಭುತ್ವ ಗಟ್ಟಿಯಾಗಿ ನೆಲೆಯೂರಿದ್ದರೆ ಅದಕ್ಕೆ ನೆಹರು ಅವರೇ ಕಾರಣ ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಮಹಾತ್ಮ ಗಾಂಧೀಜಿಯವರು ಒಂದು ಕಡೆ ಹೇಳುತ್ತಾರೆ. ನೆಹರು ಅವರು ಈ ಜಗತ್ತಿನ ಅನರ್ಗ್ಯ ರತ್ನ ಎಂದು ಹೇಳುತ್ತಾರೆ. ಇಂತಹ ರತ್ನವನ್ನು ಪಡೆದ ಭಾರತಮಾತೆಯೇ ಧನ್ಯಳು ಎಂದು ಗಾಂಧೀಜಿಯವರು ಹೇಳಿದ್ದರು. ಅವರೊಬ್ಬ ನಿಜವಾದ ಪ್ರಜಾತಾಂತ್ರಿಕ ವ್ಯಕ್ತಿಯಾಗಿದ್ದರು. ನೆಹರು ಅವರ ನಂತರ ಪ್ರಜಾಪ್ರಭುತ್ವ ಬೇರು ಬಿಡಲು ಅವರಂತೆ ಪ್ರಯತ್ನ ಮಾಡಿದವರು ಬೇರಾರೂ ಇಲ್ಲ. ಅವರು ಪ್ರಧಾನಿಯಾಗಿದ್ದರೂ ಕೂಡ ವಿರೋಧ ಪಕ್ಷದವರಿಗೆ ಮನ್ನಣೆ ನೀಡುತ್ತಿದ್ದರು.
ಕೇಂದ್ರದ ಅಂಕಿಅಂಶಗಳ ಆಯೋಗವು ಕಳೆದ ಮೂರು ವರ್ಷದಿಂದ ಯಾವುದೇ ಸಮೀಕ್ಷೆಗಳನ್ನು ಮಾಡದೆ ಅಂಕಿಅಂಶಗಳ ಮಾಹಿತಿಯನ್ನು ನೀಡುತ್ತಿಲ್ಲ. ದೇಶದ ಪ್ರಗತಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಜನರ ಮುಂದೆ ಇಡುತ್ತಿಲ್ಲ. ಆರ್ಬಿಐ ನಿಷ್ಕ್ರಿಯವಾಗಿತ್ತು ಸರ್ಕಾರ ಹೇಳಿದಂತೆ ಕೇಳುವ ಸ್ಥಿತಿ ತಲುಪಿದೆ.ಸಿಎಜಿ ಕೂಡ ನಿಷ್ಕ್ರಿಯವಾಗಿದೆ. ಹೀಗೆ ಎಲ್ಲಾ ಸಂವಿಧಾನಿಕ ಸಂಸ್ಥೆಗಳನ್ನು ಮೋದಿಯವರು ನಿಷ್ಕ್ರಿಯಗೊಳಿಸಿದ್ದಾರೆ. ಸರ್ಕಾರದ ಯಾವುದೇ ಮಾಹಿತಿಯು ಸಿಗುತ್ತಿಲ್ಲ. ಅಂಕಿಅಂಶಗಳ ಆಯೋಗವು ದೇಶದ ಆರ್ಥಿಕತೆ ಆರೋಗ್ಯ ಸೂಚಂಕ ನಿರುದ್ಯೋಗ ಎಲ್ಲದರ ಬಗ್ಗೆಯೂ ಅಂಕಿಅಂಶ ನೀಡುತ್ತಿತ್ತು. ಈಗ ಅದು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದರು.
ಮೋದಿಗೂ ನೆಹರು ಅವರಿಗೂ ಹೋಲಿಕೆ ಸಾಧ್ಯವಿಲ್ಲ
ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಅವರು ಕೂತು ಕೇಳುತ್ತಿದ್ದರು. ಎಂದಿಗೂ ವಿರೋಧ ಪಕ್ಷದ ನಾಯಕರ ಮಾತಿಗೆ ಅಡ್ಡಿಪಡಿಸುವ ಕೆಲಸ ಮಾಡಲಿಲ್ಲ. ವಿರೋಧ ಪಕ್ಷದವರ ಮಾತಿಗೆ ಮನ್ನಣೆ ಕೊಟ್ಟು ಸಮರ್ಥವಾಗಿ ಉತ್ತರ ಕೊಡುತ್ತಿದ್ದ ಶಕ್ತಿ ನೆಹರು ಅವರಿಗಿತ್ತು. ಇವತ್ತಿನ ಪ್ರಧಾನಿಗೂ ಹಾಗೂ ನೆಹರು ಅವರಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ನೆಹರು ಅವರೆಲ್ಲಿ ನರೇಂದ್ರ ಮೋದಿಯವರೆಲ್ಲಿ. ಇವರ ನಡುವೆ ಭೂಮಿ ಹಾಗೂ ಆಕಾಶದಷ್ಟು ಅಂತರವಿದೆ. ಇವರ ನಡುವೆ ಹೋಲಿಕೆ ಅಸಾಧ್ಯ. ನೆಹರು ಅವರು ಮಾಡಿರುವ ಒಳ್ಳೆ ಕೆಲಸಗಳನ್ನು ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.ದೇಶದ ಅಭಿವೃದ್ಧಿಗಾಗಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದರು. ಈಗ ಆ ಪಂಚವಾರ್ಷಿಕ ಯೋಜನೆಗಳಿಲ್ಲ. ಇದನ್ನು ತೆಗೆದು ಹಾಕಿ ನೀತಿ ಆಯೋಗ ಎಂದು ಮಾಡಿದ್ದಾರೆ.ಈ ನೀತಿ ಆಯೋಗವು ಸರ್ಕಾರದ ಕೈಗೊಂಬೆಯಾಗಿದ್ದು, ಅನೀತಿ ಆಯೋಗವಾಗಿದೆ. ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಕತ್ತು ಹಿಸುಕಿ ಕೊಲ್ಲುವ ಪ್ರಯತ್ನ
ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಕತ್ತು ಹಿಸುಕಿ ಕೊಲ್ಲುವ ಪ್ರಯತ್ನ ಮಾಡಲಾಗುತ್ತಿದೆ. ನೆಹರು ಅವರು ಮಹಾನ್ ಪ್ರಜಾಪ್ರಭುತ್ವವಾದಿ ಯಾದರೆ ಮೋದಿಯವರು ಅದಕ್ಕೆ ತದ್ವಿರುದ್ಧವಾಗಿ ಇದ್ದಾರೆ. ಇದೆಲ್ಲವೂ ಆತಂಕಕಾರಿ ಬೆಳವಣಿಗೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನೆಹರು ಅವರು ಏನಿಲ್ಲ ಮಾಡಿದ್ದಾರೋ ಎಲ್ಲವನ್ನು ಬದಲಾವಣೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ನೆಹರು ಅವರು 17 ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿ ಈ ದೇಶವನ್ನು ತಳಮಟ್ಟದಿಂದ ಮೇಲೆತ್ತಲು ಶ್ರಮಿಸಿದ್ದರು.ಬ್ರಿಟಿಷರು ಈ ದೇಶವನ್ನು ನಾಶಮಾಡಿ ಹೋಗಿದ್ದರು. ಅಂದು ದೇಶದ ಸಾಕ್ಷರತಾ ಪ್ರಮಾಣ ಶೇಕಡ 15ರಷ್ಟು ಇತ್ತು. ಇಂದು ಸಾಕ್ಷರತಾ ಪ್ರಮಾಣ 75ರಿಂದ 78ರಷ್ಟು ಏರಿಕೆಯಾಗಿದ್ದರೆ ಅದಕ್ಕೆ ನೆಹರು ಅವರು ಹಾಕಿಕೊಟ್ಟ ಅಡಿಪಾಯವೇ ಕಾರಣ.
ಇಂತಹ ಪರಿಸ್ಥಿತಿಯಲ್ಲಿ ದೇಶದ ಯುವಕರನ್ನು ನಾಶ ಮಾಡಲು ಹೊರಟಿದ್ದಾರೆ. ಹೀರೋಗಳು ಈ ದೇಶದಲ್ಲಿ ವೈಜ್ಞಾನಿಕ ನೆಲಗಟ್ಟನ್ನು ಸೃಷ್ಠಿಸಲು ಪ್ರಯತ್ನಿಸಿದ್ದರು. ನಾವು ಮೂಢನಂಬಿಕೆಗಳು ಕಂದಾಚಾರಗಳು ದಾಸರಾಗದೇ ವೈಜ್ಞಾನಿಕ ಮನೋಭಾವ ಹೊಂದಿರಬೇಕು ವೈಚಾರಿಕ ಮನೋಭಾವ ಇರಬೇಕು ಎಂದು ಹೇಳಿದ್ದರು. ಈ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವಕ್ಕೆ ಎಳ್ಳುನೀರು ಬಿಡುವ ಕೆಲಸವಾಗುತ್ತಿದೆ. ಯುವಕರ ದಾರಿತಪ್ಪಿಸಿ ಅವರಿಗೆ ಮೂಢನಂಬಿಕೆಯ ದಾಸರನ್ನಾಗಿ ಮಾಡುವ ಕೆಲಸ ಮಾಡುತ್ತಿದ್ದಾರೆ.
ದೇಶವನ್ನು ಎತ್ತ ಕೊಡಂಡೊಯ್ಯುತ್ತಿದ್ದೇವೆ
ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಮುಖ್ಯಸ್ಥರನ್ನಾಗಿ ಮಾಡಿದರೆ ಈ ದೇಶ ಹಾಗೂ ಈ ರಾಜ್ಯ ಎತ್ತ ಸಾಗುತ್ತಿದೆ ಎಂದು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರೋಹಿತ್ ಚಕ್ರತೀರ್ಥ ಹೆಡಗೇವಾರ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಇದ್ದಾನೆ. ಭಗತ್ ಸಿಂಗ್ ರಂತಹ ದೇಶ ಭಕ್ತರ ವಿಚಾರವನ್ನು ತೆಗೆದುಹಾಕಿ ಮಕ್ಕಳಿಗೆ ಬೋಧನೆ ಮಾಡುವುದಾದರೆ ನಾವು ಈ ದೇಶವನ್ನು ಎತ್ತ ಕೊಡಂಡೊಯ್ಯುತ್ತಿದ್ದೇವೆ. ಭಗತ್ ಸಿಂಗ್ ಇಂಥ ಮಹಾನ್ ದೇಶಭಕ್ತ ಅವನಿಗಿದ್ದ ದೇಶಭಕ್ತ ನಮಗೆ ಬೇಕಾ? ಇಲ್ಲಿಯವರೆಗೂ ಅವರು ದೇಶದ ಚರಿತ್ರೆಯನ್ನು ಸಾಕಷ್ಟು ತಿರುಚಿದ್ದಾರೆ ಈಗಲೂ ತಿರುಚಲು ಪ್ರಯತ್ನಿಸುತ್ತಿದ್ದಾರೆ. ಅಂಬೇಡ್ಕರ್ ಅವರ ಒಂದು ಮಾತು ಹೇಳಿದ್ದರು ಯಾರು ಚರಿತ್ರೆಯನ್ನು ತಿಳಿದುಕೊಳ್ಳುವುದಿಲ್ಲ ಅವರು ಚರಿತ್ರೆ ಸೃಷ್ಟಿಸಲು ಸಾಧ್ಯವಿಲ್ಲ ಎಂದಿದ್ದರು. ಈಗ ನಾವು ಯಾವ ಚರಿತ್ರೆಯನ್ನು ಓದಬೇಕು ಎಂಬುದೇ ಕಷ್ಟವಾಗಿದೆ. ಬಿಜೆಪಿಯವರು ಬಂದಮೇಲೆ ಚರಿತ್ರೆ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಧರಿಸುವುದೇ ಕಷ್ಟವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಆರ್ಯರೇನು ಭಾರತದವರಾ?
ಆರ್ಎಸ್ಎಸ್ ನವರು ಮೂಲ ಭಾರತೀಯರೇ? ಎಲ್ಲಿ ಚರ್ಚೆ ಮಾಡಬಾರದು ಎಂದು ನಾವು ಭಾವಿಸಿದ್ದೇವೆ. ಆರ್ಯರು ಭಾರತದವರ? ಇವರೇನು ದ್ರಾವಿಡರೆ ಆಫ್ಘಾನಿಸ್ತಾನದ ಮೂಲದವರೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮೊಘಲರು ಈ ದೇಶವನ್ನು 600 ವರ್ಷಗಳ ಕಾಲ ಆಗಬೇಕಾದರೆ ಯಾರು ಕಾರಣ? ನೀವೆಲ್ಲರೂ ಒಗ್ಗಟ್ಟಾಗಿ ಇದ್ದಿದ್ದರೆ ಮೊಘಲರು ಯಾಕೆ ಇಲ್ಲಿಗೆ ಬಂದು ಆಳುತ್ತಿದ್ದರು?
ಅವರಿಗೆ ಜಾಗ ಕೊಟ್ಟವರು ಯಾರು? ಬ್ರಿಟಿಷರು ಈ ದೇಶವನ್ನು ಇನ್ನೂರು ವರ್ಷಗಳ ಕಾಲ ಆಳಲು ಕಾರಣ ಯಾರು? ಚರಿತ್ರೆಗಳಿಂದ ಪಾಠ ಕಲಿತ ನಾವು ದೇಶ ಕಟ್ಟಬೇಕೇ ಹೊರತು ಚರಿತ್ರೆಯಲ್ಲಿ ಯಾವುದು ಎಲ್ಲೆಲ್ಲಿ ಏನಿತ್ತು ಎಂದು ಕೆದಕಲು ಹೋಗಬಾರದು.
ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬೇರೆ ವಿಚಾರ ಪ್ರಸ್ತಾಪ
ಕಾಂಗ್ರೆಸ್ ನವರ ಜವಾಬ್ದಾರಿ ಹೆಚ್ಚಾಗುತ್ತಿದೆ. ಬಿಜೆಪಿಯವರು ಸಮಾಜ ಹಾಗೂ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಅವರು ನೈಜ್ಯ ಸಮಸ್ಯೆಗಳ ಬಗ್ಗೆ ಯಾವತ್ತು ಚರ್ಚೆ ಮಾಡುವುದಿಲ್ಲ. ಅವರು ಈ ದೇಶದ ಬಡತನ ಹಸಿವು ಜಾತ್ಯತೀತತೆ ಸಂವಿಧಾನ ನಿರುದ್ಯೋಗ ಅನಕ್ಷರತೆ ಬಗ್ಗೆ ಚರ್ಚೆ ಮಾಡಿದ ಉದಾಹರಣೆಗಳನ್ನು ನೀಡಿ.ಅವರ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಎಲ್ಲಾ ಬೇರೆ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಾರೆ. ರಾಜ್ಯದಲ್ಲಿ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬೇರೆ ವಿಚಾರ ಚರ್ಚೆ ಮಾಡುತ್ತಿದ್ದಾರೆ.
ಅಂಬೇಡ್ಕರ್ ಅವರು ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರಾಗಿ ಇಂತಹ ಶ್ರೇಷ್ಠ ಸಂವಿಧಾನವನ್ನು ಕೊಟ್ಟಿದ್ದರೆ ಅದಕ್ಕೆ ನೆಹರು ಅವರ ಹಾಗೂ ರಾಜೇಂದ್ರ ಪ್ರಸಾದ್ ಅವರ ಕೊಡುಗೆ ಅಪಾರವಾಗಿದೆ. ಸಾರ್ವಜನಿಕ ವಲಯ ಉದ್ದಿಮೆಗಳು, ಆಣೆಕಟ್ಟುಗಳು, ಶಿಕ್ಷಣ ಕ್ಷೇತ್ರಕ್ಕೆ ಬುನಾದಿ ಹಾಕಿದರೆ ಅದಕ್ಕೆ ನೆಹರು ಅವರೇ ಕಾರಣ.ಅವರನ್ನು ಚಾಚಾ ನೆಹರು ಎಂದು ಕರೆಯಲಾಗುತ್ತಿತ್ತು. ಅವರಿಗೆ ಮಕ್ಕಳೆಂದರೆ ಅಪಾರವಾದ ಪ್ರೀತಿ. ಜೊತೆಗೆ ಯುವಜನತೆ ಮೇಲೆ ವಿಶೇಷವಾದ ಕಾಳಜಿ ಇತ್ತು. ಯುವಜನರನ್ನು ವೈಜ್ಞಾನಿಕವಾಗಿ ವೈಚಾರಿಕವಾಗಿ ತಯಾರು ಮಾಡಲು ಆಸಕ್ತಿ ಹೊಂದಿದ್ದರೆ ಅಂತಹ ಮಹಾನ್ ವ್ಯಕ್ತಿ ಪುಣ್ಯ ಸ್ಮರಣೆಯಲ್ಲಿ ನಾವೆಲ್ಲರೂ ಭಾಗವಹಿಸಿದ್ದು ಅವರು ನಡೆದ ಹಾದಿ ಅವರ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದರೆ ನಾವು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ನಾವೆಲ್ಲರೂ ಈ ಕೆಲಸ ಮಾಡೋಣ ಎಂದು ಸಿದ್ದರಾಮ್ಯರವರು ತಿಳಿಸಿದರು.