ಗುಜರಾತ್ನಲ್ಲಿ ಕಾಂಗ್ರೆಸ್ ಹಿನ್ನೆಡೆಗೆ ಕಾರಣ ಆಮ್ ಆದ್ಮಿ ಪಕ್ಷ -ಸತೀಶ್ ಜಾರಕಿಹೊಳಿ
ಬೆಂಗಳೂರು, ಡಿಸೆಂಬರ್8: ಗುಜರಾತ್ನಲ್ಲಿ ಇಷ್ಟು ಕಡಿಮೆ ಸ್ಥಾನ ಬರಬಹುದು ಎಂದು ನಾವು ನಿರೀಕ್ಷೆ ಕೂಡ ಮಾಡಿರಲಿಲ್ಲ. ಕಾಂಗ್ರೆಸ್ ಹಿನ್ನೆಡೆಗೆ ಕಾರಣ ಆಮ್ ಆದ್ಮಿ ಪಕ್ಷ. ಆಪ್ ಪಕ್ಷ ಈ ಬಾರಿ ಗುಜರಾತ್ನಲ್ಲಿ ಕಾಂಗ್ರೆಸ್ನ ವೋಟ್ ಬ್ಯಾಂಕ್ಅನ್ನು ಪಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ನ ಎಲ್ಲಾ ಭಾಗಗಳಲ್ಲಿ ಆಮ್ ಆದ್ಮಿ ಪಕ್ಷದವರು ನಮ್ಮ ಮತಗಳನ್ನು ಪಡೆಯುವಲ್ಲಿ ಅಥವಾ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ನಮ್ಮ ಗೆಲುವಿನ ಪ್ರಮಾಣ ಕೆಳಗೆ ಬಂದಿದೆ. ಬಿಜೆಪಿಯವರು 150ಕ್ಕಿಂತಲೂ ಹೆಚ್ಚು ಮಾಡಿದ್ದಾರೆ ಎಂದರು.
ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು
ಇನ್ನು ಆಮ್ ಆದ್ಮಿ ಪಕ್ಷ ಆರೇಳು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದರೂ, ಸಂಪೂರ್ಣ ಗುಜರಾತ್ನಲ್ಲಿ ನಮ್ಮ ಐದು ಅಥವಾ ಹತ್ತು ಸಾವಿರ ಮತಗಳನ್ನು ಅವರು ಪಡೆದ ಕಾರಣ, ನಮ್ಮ ಮತ್ತು ಬಿಜೆಪಿ ನಡುವೆ ಅಷ್ಟು ವ್ಯತ್ಯಾಸ ಬಂದಿದೆ ಎಂದು ಹೇಳಿದರು.
ಇನ್ನು ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷದಂತೆ ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ಗೆ ಸ್ಪರ್ಧೆ ನೀಡುವ ಬಗ್ಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಜೆಡಿಎಸ್ ಇದೆ. ಜೆಡಿಎಸ್ ಸೀಮಿತ ಕ್ಷೇತ್ರದಲ್ಲಿದೆ. ಗುಜರಾತ್ನಲ್ಲಿ ಆಪ್ನಿಂದ ಆದಂತಹ ಪರಿಸ್ಥಿತಿ ಕರ್ನಾಟಕದಲ್ಲಿಲ್ಲ, ಜೆಡಿಎಸ್ನವರು ಅವರು ಗೆಲ್ಲುವ ಸ್ಥಾನದಲ್ಲಿ ಗೆಲ್ಲುತ್ತಾರೆ. ನಾವು ಎಲ್ಲಿ ಗೆಲ್ಲಬೇಕು ಅಲ್ಲಿ ಗೆಲ್ಲುವಂತಹ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದರು.
ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷದವರು ಸೆಕ್ಯೂಲರ್ ಮತಗಳು. ಎಸ್ಸಿ, ಎಸ್ಎಸ್ಟಿ, ಹಿಂದುಳಿದ ವರ್ಗ, ಓಬಿಸಿ, ಈ ಸೆಕ್ಟರ್ನ ಮತಗಳನ್ನು ಅವರು ಸೆಳೆಯುತ್ತಾರೆ. ಈ ಮತಗಳಲ್ಲಿ ವ್ಯತ್ಯಾಸ ಕಾಣುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಈ ರೀತಿಯಲ್ಲಿ ಆಗಲು ಸಾಧ್ಯವಿಲ್ಲ. ಜೆಡಿಎಸ್ನವರಿಗೆ ಅವರಿಗೆ ಆದ ಮತಗಳಿವೆ. ಜೆಡಿಎಸ್ ಗೆಲ್ಲುವ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುತ್ತದೆ ಎಂದರು.
ಆಂಧ್ರಪ್ರದೇಶದಲ್ಲಿ, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಇದೆ. ಪ್ರಾರಂಭದ ಪಕ್ಷಗಳು ಮೊದಲು ಸೆಕ್ಯೂಲರ್ ಮತಗಳನ್ನು ಸೆಳೆಯುಲು ಪ್ರಯತ್ನಿಸುತ್ತದೆ. ಬಿಜೆಪಿ ಹಾಗಿಲ್ಲ. ಬಿಜೆಪಿ ಮತಗಳು ಸಹ ಬೇರೆ ಪಕ್ಷಕ್ಕೆ ವರ್ಗಾವಣೆಯಾಗುವುದಿಲ್ಲ. ಅವರು ಧರ್ಮದ ಆಧಾರದ ಮೇಲೆ, ಅವರ ತತ್ವ, ಅವರ ಸಿದ್ಧಾಂತದ ಮೇಲೆ ಮತಗಳನ್ನು ಸೆಳೆಯುತ್ತಾರೆ ಎಂದರು.