ಸಿಎಂ ಬಿಎಸ್ವೈ ಬದಲಾವಣೆ ಸುದ್ದಿ: ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಅಚ್ಚರಿಯ ಟ್ವೀಟ್
ಬೆಂಗಳೂರು, ಜುಲೈ 19: ದೆಹಲಿ ಭೇಟಿಯ ನಂತರ, ಮುಂದಿನ ಅವಧಿಗೆ ನಾನೇ ಸಿಎಂ ಎಂದು ಯಡಿಯೂರಪ್ಪನವರು ಘಂಟಾಘೋಷವಾಗಿ ಸಾರಿದ್ದರೂ, ಅವರು ಪದತ್ಯಾಗ ಮಾಡುವ ಸುದ್ದಿ ಹರಿದಾಡುತ್ತಲೇ ಇದೆ.
ಈ ಸಂಬಂಧ, ವಿರೋಧ ಪಕ್ಷದ ನಾಯಕರೂ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇವೆಲ್ಲದರ ನಡುವೆ, ಮಾಜಿ ಜಲಸಂಪನ್ಮೂಲ ಖಾತೆಯ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ಮಾಡಿರುವ ಟ್ವೀಟ್ ಮಹತ್ವನ್ನು ಪಡೆದುಕೊಂಡಿದೆ.
ಕುತೂಹಲ ಮೂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಭೇಟಿ!
ಇತೀಚೆಗಷ್ಟೇ ಪಾಟೀಲ್ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದರು. ಎಂ.ಬಿ.ಪಾಟೀಲ್ ಅವರು ಯಡಿಯೂರಪ್ಪನವರ ಪರವಾಗಿ ಟ್ವೀಟ್ ಮಾಡಿರುವುದು, ಕಾಂಗ್ರೆಸ್ ವಲಯದಲ್ಲೇ ಆಶ್ಚರ್ಯವನ್ನು ಉಂಟು ಮಾಡಿದೆ.
ಕಳೆದ ಜುಲೈ ಒಂಬತ್ತರಂದು ಎಂ.ಬಿ.ಪಾಟೀಲ್ ಅವರು ಸಿಎಂ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಇದರಲ್ಲಿ, ಯಾವುದೇ ರಾಜಕೀಯ ಇಲ್ಲ ಎಂದು ಪಾಟೀಲ್ ಹೇಳಿದ್ದರೂ, ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಇದು ಚರ್ಚೆಯ ವಿಷಯವಾಗಿತ್ತು.
|
ಎಂ.ಬಿ.ಪಾಟೀಲ್ ಮಾಡಿರುವ ಟ್ವೀಟ್ ಈ ರೀತಿಯಿದೆ
ಎಂ.ಬಿ.ಪಾಟೀಲ್ ಮಾಡಿರುವ ಟ್ವೀಟ್ ಈ ರೀತಿಯಿದೆ: "ಕರ್ನಾಟಕ ಮುಖ್ಯಮಂತ್ರಿ @BSYBJP ಲಿಂಗಾಯತ ಸಮುದಾಯದ ಧೀಮಂತ ನಾಯಕರು. ಅವರನ್ನು ಪದಚ್ಯುತಗೊಳಿಸಿದರೆ, ನಿಶ್ಚಿತವಾಗಿಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ. ಯಡಿಯೂರಪ್ಪನವರ ವಯಸ್ಸು ಮತ್ತು ಕೊಡುಗೆಯನ್ನು ಪರಿಗಣಿಸಿ, ಅವರನ್ನು ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಳ್ಳಬೇಕೆಂಬುದು ನನ್ನ ವೈಯಕ್ತಿಕ ಅನಿಸಿಕೆ".
ಸಿದ್ದರಾಮಯ್ಯನವರ ಅವಧಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ
ಸಿದ್ದರಾಮಯ್ಯನವರ ಅವಧಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಎಂ.ಬಿ.ಪಾಟೀಲ್ ನಡುವೆ ವಾಕ್ಸಮರವೇ ನಡೆದಿತ್ತು. ಕಾಂಗ್ರೆಸ್ಸಿಗೆ ಚುನಾವಣೆಯಲ್ಲಿ ಸೋಲಾಗಲು ಇದುವೇ ಪ್ರಮುಖ ಕಾರಣ ಎಂದು ಪಕ್ಷದೊಳಗೆಯೇ ಚರ್ಚೆಯಾಗಿತ್ತು. ಹಾಗಾಗಿ, ಎಂ.ಬಿ.ಪಾಟೀಲ್ ಅವರು ರಾಜಕೀಯ ಆನಂತರ, ಮೊದಲು ತಮ್ಮ ಸಮುದಾಯದ ನಾಯಕನ ಪರ ಎನ್ನುವ ನಿಲುವಿಗೆ ಅಂಟಿಕೊಂಡು ಬಿಎಸ್ವೈ ಪರ ನಿಂತರೇ ಎನ್ನುವ ಚರ್ಚೆ ಈಗ ಆರಂಭವಾಗಿದೆ.
ಎಂ.ಬಿ.ಪಾಟೀಲ್ ಅವರ ಟ್ವೀಟಿಗೆ ಹಲವು ಆಕ್ಷೇಪಗಳು ಟ್ವಿಟ್ಟಿಗರಿಂದ ಬಂದಿದೆ
ಎಂ.ಬಿ.ಪಾಟೀಲ್ ಅವರ ಟ್ವೀಟಿಗೆ ಹಲವು ಆಕ್ಷೇಪಗಳು ಟ್ವಿಟ್ಟಿಗರಿಂದ ಬಂದಿದೆ. "ಲಿಂಗಾಯತ ಸಮುದಾಯದ ಧೀಮಂತ ನಾಯಕ ಯಡಿಯೂರಪ್ಪ ಅವರನ್ನು @BJP4India ಅವರ ಘನತೆಗೆ ತಕ್ಕ ಹಾಗೆ ಮರ್ಯಾದಾಯುತವಾಗಿ ನಡೆಸಿಕೊಂಡರೆ, ಇನ್ನೊಬ್ಬ ಬಲಿಷ್ಠ ಲಿಂಗಾಯತ ನಾಯಕರಾದ ತಾವು ಲಿಂಗಾಯತ ಸಮುದಾಯದ ಬಲವನ್ನು ಬಿಜೆಪಿಯಡೆಗೆ ಹೊರಳಿಸುವ ಭರವಸೆಯನ್ನು ಸಾರ್ವಜನಿಕವಾಗಿ ನೀಡಬಲ್ಲಿರಾ?"ಎಂದು ಟ್ವಿಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.
ನಮಗೆ ಯಡಿಯೂರಪ್ಪನವರೆಂದರೆ ಜಾತಿ ಮತಗಳ ಮೇರೆ ಮೀರಿ ಬೆಳೆದ ಧೀಮಂತ ನಾಯಕ
"ನಮಗೆ ಯಡಿಯೂರಪ್ಪನವರೆಂದರೆ ಜಾತಿ ಮತಗಳ ಮೇರೆ ಮೀರಿ ಬೆಳೆದ ಕರ್ನಾಟಕ ರಾಜ್ಯದ ಧೀಮಂತ ನಾಯಕ. ರಾಷ್ಟ್ರ ಕಂಡ ಅತ್ಯಂತ ಅನುಭವಿ ಹಾಗೂ ಕ್ರಿಯಾಶೀಲ ನಾಯಕ. ಜನಪರ ಹೋರಾಟಗಳನ್ನು ಹೇಗೆ ಮಾಡಬೇಕೆಂದು ಯುವ ರಾಜಕಾರಣಿಗಳಿಗೆ ಸ್ವತಃ ಮಾದರಿಯಾಗಿ ತೋರಿಸಿಕೊಟ್ಟ ನಾಯಕ. ಇಂತಹ ವ್ಯಕ್ತಿತ್ವವನ್ನು ಒಂದು ಜಾತಿಗೆ ಸೀಮಿತಗೊಳಿಸಿ ರಾಜಕೀಯ ಲೆಕ್ಕಾಚಾರ ಮಾಡಬೇಡಿ"ಎಂದು ಇನ್ನೊಬ್ಬರು ಟ್ವಿಟ್ಟಿಗರು ಸಲಹೆಯನ್ನು ನೀಡಿದ್ದಾರೆ.
Recommended Video