ಕಾಂಗ್ರೆಸ್ ನಾಯಕರ ಭಯ ಬಿಚ್ಚಿಟ್ಟ ನಳಿನ ಕುಮಾರ್ ಕಟೀಲ್
ಬೆಂಗಳೂರು, ಫೆಬ್ರವರಿ 21; "ಕಾಂಗ್ರೆಸ್ಮುಕ್ತ ಕರ್ನಾಟಕ ಆಗುವ ಭಯ ಕಾಂಗ್ರೆಸ್ ಮುಖಂಡರಲ್ಲೇ ಇದೆ" ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಸೋಮವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, "ಸಿದ್ದರಾಮಯ್ಯರಲ್ಲಿದ್ದ ಸಮಾಜವಾದಿ ಚಿಂತನೆಗಳು ಹೊರಗೆ ಹೋಗಿವೆ. ಅಧಿಕಾರವಾದಿ ಚಿಂತನೆಗಳು ಒಳಗೆ ಬಂದಿವೆ" ಎಂದು ಟೀಕಿಸಿದರು.
ನಳಿನ್ ಕುಮಾರ್ ಕಟೀಲ್ರನ್ನು ಕಾಂಗ್ರೆಸ್ಗೆ ಆಹ್ವಾನಿಸಿದ ಯು. ಟಿ. ಖಾದರ್!
"ಕಾಂಗ್ರೆಸ್ನಲ್ಲಿ ಅಧಿಕಾರವಾದಿ ಸಿದ್ದರಾಮಣ್ಣ ಮತ್ತು ಕಾಂಗ್ರೆಸ್ವಾದಿ ಡಿ. ಕೆ. ಶಿವಕುಮಾರ್ ಅವರ ನಡುವೆ ಚರ್ಚೆಗಳು ಪ್ರಾರಂಭವಾಗಿವೆ. ಆಂತರಿಕ ಕಲಹಗಳು ಹೆಚ್ಚಾಗಿವೆ" ಎಂದು ಲೇವಡಿ ಮಾಡಿದರು.
ನಳಿನ್ ಕುಮಾರ್ ಹೇಳಿಕೆ ಹಿಂದಿನ ಕಾರಣ ಬಿಚ್ಚಿಟ್ಟ; ಪ್ರಿಯಾಂಕ್ ಖರ್ಗೆ
"ಹಿಜಾಬ್ ಬಗ್ಗೆ ಅಧಿವೇಶನದಲ್ಲಿ ಮಾತು ಬರಬಾರದೆಂಬ ಕಾರಣಕ್ಕಾಗಿ ಧರಣಿ ನಡೆಸಲಾಗುತ್ತಿದೆ. ಹಿಜಾಬ್ ಪರ, ವಿರೋಧ ಮಾತನಾಡಿದರೆ ಕಾಂಗ್ರೆಸ್ ಮೈನಸ್ ಆಗುವ ಭಯ ಕಾಂಗ್ರೆಸಿಗರಲ್ಲಿದೆ" ಎಂದು ಆರೋಪಿಸಿದರು.
ನಳಿನ್ ಕುಮಾರ್ ನಗುವನ್ನು ಮಿಮಿಕ್ರಿ ಮಾಡೋಕೆ ಸಾಧ್ಯವೇ ಇಲ್ಲ; ಬಿ. ರಮಾನಾಥ್ ರೈ
"ಕಾಂಗ್ರೆಸ್ ಆಡಳಿತದಲ್ಲಿ 24 ಹಿಂದೂಗಳ ಹತ್ಯೆ ಆಗಿದ್ದಾಗ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಟ್ಟಿಲ್ಲ?. ಡಿವೈಎಸ್ಪಿ ಗಣಪತಿ ಅವರು ಜಾರ್ಜ್ ಅವರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಾಗ ಯಾಕೆ ಜಾರ್ಜ್ ರಾಜೀನಾಮೆ ನೀಡಿಲ್ಲ?. ನಿಮ್ಮ ಜಮೀರ್ ಮೇಲೆ ಎಫ್ಐಆರ್ ಆಗಿರುವಾಗ ನೀವೇಕೆ ಅವರ ರಾಜೀನಾಮೆ ಪಡೆಯುತ್ತಿಲ್ಲ?" ಎಂದು ನಳಿನ್ ಕುಮಾರ್ ಕಟೀಲ್ ಪ್ರಶ್ನೆ ಮಾಡಿದರು.
"ಈಶ್ವರಪ್ಪ, ಆರಗ ಜ್ಞಾನೇಂದ್ರ ಅವರ ರಾಜೀನಾಮೆ ಕೇಳುವ ನೀವು ನಿಮ್ಮ ಶಾಸಕರ ರಾಜೀನಾಮೆಯನ್ನೇಕೆ ಪಡೆಯುತ್ತಿಲ್ಲ?" ಎಂದು ಬಿಜೆಪಿ ಅಧ್ಯಕ್ಷರು ಕಾಂಗ್ರೆಸ್ ನಾಯಕರನ್ನು ಕೇಳಿದರು.
ಶಿವಮೊಗ್ಗದಲ್ಲಿ ನಡೆದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆಯನ್ನು ಖಂಡಿಸಿದ ನಳಿನ್ ಕುಮಾರ್ ಕಟೀಲ್, "ಇದರ ಹಿಂದಿರುವ ಯಾವುದೇ ಶಕ್ತಿಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಬೇಕು" ಎಂದು ಆಗ್ರಹಿಸಿದರು.
"ಹಿಜಾಬ್ ಗಲಭೆ ಹಿಂದೆ ಯೋಚನೆ, ಯೋಜನೆಗಳು ಕಾಂಗ್ರೆಸ್ನದು. ಎಸ್ಡಿಪಿಐ ಅದನ್ನು ಅನುಷ್ಠಾನಕ್ಕೆ ತಂದಿದೆ. ಕುರಾನ್ನಲ್ಲಿ ಹಿಜಾಬ್ ಕುರಿತು ಉಲ್ಲೇಖ ಇದೆಯೇ?. ದೇಶದ ಸಂವಿಧಾನ, ನೀವೇ ತಂದ ಕಾನೂನನ್ನು ಮುರಿಯಲು ನೀವು ಪ್ರೇರಣೆ ಕೊಡುವಿರಾ?" ಎಂದು ಕೇಳಿದರು.
"ನಿಮ್ಮ ಸಮಾಜವಾದಿ ಪರಿಕಲ್ಪನೆಯಡಿ ಶಾಲೆಗಳಲ್ಲಿ ಸಮವಸ್ತ್ರ ಹಾಕುವುದು ಜಾರಿಗೊಂಡಿದೆ. ಇವತ್ತು ಅದನ್ನು ನೀವೇ ಬಹಿಷ್ಕರಿಸುವಿರಾ?, ಉಲ್ಲಂಘಿಸುವಿರಾ?" ಎಂದು ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.
"ಮುಸ್ಲಿಂ ಸ್ತ್ರೀಯರನ್ನು ಕತ್ತಲಲ್ಲಿ ಇಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಮತಧರ್ಮದ ಭಾವನೆ ಬರಬೇಕೆಂಬ ಚಿಂತನೆ ಕಾಂಗ್ರೆಸ್ನದು. ಮುಸ್ಲಿಮರಿಗೆ ಶಿಕ್ಷಣ ನೀಡಬೇಕೆಂಬ ಆಶಯ ಕಾಂಗ್ರೆಸ್ನಲ್ಲಿಲ್ಲ" ಎಂದು ಆರೋಪಿಸಿದರು.
"ಸಿದ್ದರಾಮಣ್ಣರಿಗೆ ಅವಕಾಶ ಕೊಟ್ಟರೆ ಅವರು ಸದನದಲ್ಲಿ ಮಾತಿನ ಮೂಲಕ ಪತ್ರಿಕೆಗಳಲ್ಲಿ ಪ್ರಚಾರ ಪಡೆಯುವ ಆತಂಕ ಡಿ. ಕೆ. ಶಿವಕುಮಾರ್ ಅವರದ್ದು. ಈ ತಂತ್ರಗಾರಿಕೆಯ ಭಾಗವಾಗಿ ಈಶ್ವರಪ್ಪ ಹೆಸರನ್ನು ಎಳೆದುತರಲಾಗಿದೆ" ಎಂದರು.
"ಚರ್ಚೆಗಳನ್ನು ದಾರಿ ತಪ್ಪಿಸುವ ಮತ್ತು ಅಧಿವೇಶನ ಮೊಟಕುಗೊಳಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ನ ಈ ಕ್ರಮವನ್ನು ಜನತೆ ಸಹಿಸುವುದಿಲ್ಲ. ಕಾಂಗ್ರೆಸ್ಮುಕ್ತ ಕರ್ನಾಟಕ ಆಗುವ ಭಯ ಕಾಂಗ್ರೆಸ್ ಮುಖಂಡರಲ್ಲೇ ಇದೆ" ಎಂದು ಹೇಳಿದರು.
Recommended Video